"ಬೆಳಗಾವಿ ಅಲ್ಲ ಮುಂಬೈ ಕೇಂದ್ರಾಡಳಿ ಪ್ರದೇಶ ಆಗಬೇಕು.. ಸಂಜಯ್ ರಾವುತ್ ಹೇಳಿಕೆ ಅಸಂಬದ್ಧ"- ಅಹಿಂಸಾ ಚೇತನ್ ಗುಡುಗು!
ಬೆಳಗಾವಿ ಗಡಿಯಲ್ಲಿ ಮತ್ತೆ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಮತ್ತೆ ಗಡಿ ತಂಟೆ ತೆಗೆದಿರುವ ಮಹಾರಾಷ್ಟ್ರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಕರಾವೇ ಕಾರ್ಯಕರ್ತರ ಉಗ್ರ ಸ್ವರೂಪ ತಾಳಿದ್ದು, ಮಹಾರಾಷ್ಟ್ರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದ ಹೋರಾಟಗಾರು ಎರಡೂ ರಾಜ್ಯದ ಹೋರಾಟಗಾರರು ಬೃಹತ್ ಪ್ರತಿಭಟನೆ ನಡೆಸಿದ್ದರು. ಕರಾವೇ ಕಾರ್ಯಕರ್ತರು ಮಹಾರಾಷ್ಟ್ರದ ವಾಹನಗಳನ್ನು ತಡೆದು ಕಲ್ಲು ತೂರಾಟ ಮಾಡಿ ಆಕ್ರೋಶ ಹೊರಹಾಕಿದ್ದರು. ಅತ್ತ ಶಿವಸೇನಾ ಕಾರ್ಯಕರ್ತರು ಕೂಡ ಕರ್ನಾಟಕದ ವಾಹನಗಳಿಗೆ ಮಸಿಬಳಿದಿದ್ದರು. ಸಂಚಾರಕ್ಕೆ ಅಡ್ಡಿಪಡಿಸಿದ ಬಳಿಕ ಬೆಳಗಾವಿ ಈಗ ಸಹಜ ಸ್ಥಿತಿಗೆ ಮರಳಿದೆ.
ಬೆಳಗಾವಿಯಲ್ಲಿ ಮತ್ತೆ ಗಡಿ ವಿವಾದ ಬುಗಿಲೇಳುತ್ತಿದ್ದಂತೆ ಶಿವ ಸೇನೆಯ ರಾಜ್ಯ ಸಭಾ ಸದಸ್ಯ ಸಂಜಯ್ ರಾವುತ್ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಅಹಿಂಸಾ ಚೇತನ್ ಖಂಡಿಸಿದ್ದಾರೆ. ಅಷ್ಟಕ್ಕೂ ಚೇತನ್ ಕೊಟ್ಟ ಹೇಳಿಕೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಸಂಜಯ್ ರಾವುತ್ ಕೊಟ್ಟ ಹೇಳಿಕೆ ಏನು?
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ವಿವಾದ ಬುಗಿಲೇಳುತ್ತಿದೆ. ಈ ಬೆನ್ನಲ್ಲೇ ಶಿವ ಸೇನೆಯ ಮುಖಂಡ ಹಾಗೂ ರಾಜ್ಯ ಸಭಾ ಸದಸ್ಯ ಸಂಜಯ್ ರಾವುತ್ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಒತ್ತಡ ಹೇರಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವಂತೆ ಸವಾಲು ಎಸೆದಿದ್ದರು. "ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಧಮ್ಮಿದ್ದರೆ, ವಿವಾದಕ್ಕೆ ಒಳಪಟ್ಟಿರುವ ಸ್ಥಳವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಕೇಂದ್ರ ಮುಂದೆ ಬೇಡಿಕೆ." ಇಡಬೇಕು ಎಂದು ಹೇಳಿದ್ದರು. ಈ ಹೇಳಿಕೆಯನ್ನು ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಖಂಡಿಸಿದ್ದಾರೆ.

ಅಹಿಂಸಾ ಚೇತನ್ ಹೇಳಿದ್ದೇನು?
ಶಿವಸೇನೆಯ ಸಂಜಯ್ ರಾವುತ್ ನೀಡಿದ ಹೇಳಿಕೆಯನ್ನು ನಟ ಅಹಿಂಸಾ ಚೇತನ್ ಖಂಡಿಸಿದ್ದಾರೆ. "ಪ್ರಸ್ತುತ ನಡೆಯುತ್ತಿರುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ನಡುವೆ, ಶಿವಸೇನೆಯ ರಾಜ್ಯ ಸಭಾ ಸದಸ್ಯ ಸಂಜಯ್ ರಾವುತ್ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕೆಂದು ಒತ್ತಾಯಿಸಿದ್ದರು. ಬೆಳಗಾವಿ ನಮ್ಮ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಕೇಂದ್ರಾಡಳಿತ ಸ್ಥಾನಮಾನವು ಅಸಂಬದ್ಧವಾಗಿದೆ. ಮುಂಬೈ ವೈವಿದ್ಯಮಯವಾಗಿಯೂ ಹಾಗೂ ಜಗತ್ಪ್ರಸಿದ್ಧ ಹಣಕಾಸು ಕೇಂದ್ರವಾಗಿರುವುದರಿಂದ ಇದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು" ಎಂದು ಸೊಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಮರಾಠಿಗರನ್ನು ಕೆರಳಿಸಿದ್ದ ಸಂಜಯ್ ರಾವುತ್
ಶಿವಸೇನೆಯ ಮುಖಂಡ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಅಂತ ಒತ್ತಡ ಹೇರಿದ್ದಷ್ಟೇ ಅಲ್ಲದೆ, ಮರಾಠಿಗರನ್ನು ಕೆರಳಿಸುವ ಪ್ರಯತ್ನವನ್ನು ಮಾಡಿದ್ದರು. "ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಶಿವ ಸೇನೆಯ ಮುಖಂಡ ನಿನ್ನೆ ( ಡಿಸೆಂಬರ್ 7) ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. "ಮಹಾರಾಷ್ಟ್ರ ಏಕೀಕರಣ ಸಮಿತಿಸ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮರಾಠಿ ಬೆನ್ನುಲುಬನ್ನು ಮುರಿಯುವ ಆಟ ಮುಂದುವರೆದಿದೆ. ಇದೇ ಕಾರಣಕ್ಕೆ ಬೆಳಗಾವಿಯಲ್ಲೂ ಅಟ್ಯಾಕ್ ಮಾಡಲಾಗಿದೆ. ಎದ್ದೇಳಿ ಮರಾಠಿಗರೇ ಎದ್ದೇಳಿ." ಎಂದು ಹೇಳಿದ್ದರು. ಈ ಕೇಳಿಕೆ ಮರಾಠಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿತ್ತು.

ಸಹಜ ಸ್ಥಿತಿಗೆ ಮರಳಿದ ಬೆಳಗಾವಿ
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಭುಗಿಲೇಳುತ್ತಿದ್ದಂತೆ ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಬಳಿ ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರದ ವಾಹನಗಳಿಗೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದರು. ಸದ್ಯಕ್ಕೀಗ ಬೆಳಗಾವಿ ಸಹಸ ಸ್ಥಿತಿಗೆ ಮರಳಿದೆ. ಕರ್ನಾಟಕ-ಮಹಾರಾಷ್ಟ್ರ ಗಡಿಯ ಭಾಗಗಳಲ್ಲಿ ಇಲ್ಲಿಯವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಹಾಗೆಯೇ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ ಎಂದು ವರದಿಯಾಗಿದೆ.


Click it and Unblock the Notifications











