ಸಿಂಬು ಹೇಳಿಕೆ ಬಳಿಕ ಕಾವೇರಿ ಬಗ್ಗೆ ಅನಂತ್ ನಾಗ್ ಮಾತು !
Recommended Video

ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಒಂದು ಕಡೆ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಾಲಿವುಡ್ ನಟರಾದ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಸಾಕಷ್ಟು ನಟರು ಹೋರಾಟ ನಡೆಸುತ್ತಿದ್ದಾರೆ.
ಇದರ ಜೊತೆಗೆ ನಿನ್ನೆ ತಮಿಳು ನಟ ಸಿಂಬು ನೀಡಿರುವ ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ''ನೀವು ಬಳಸಿ ಉಳಿದ ನೀರನ್ನು ನಮಗೆ ನೀಡಿ, ನಾನು ಕರ್ನಾಟಕದಲ್ಲಿರೋಂಥ... ನಾನು ಅವರ ಹೆತ್ತ ಮಗ ಅಲ್ಲದೇ ಇದ್ರೂ... ಅವರ ಮಗನಾಗಿ ನಿಮ್ಮನ್ನ ಕೇಳ್ತಾ ಇದ್ದೀನಿ. ಆ ಕರ್ನಾಟಕ ಮಾತೆ ಹೇಳಲಿ.. ನಮ್ಮಿಂದ ನೀರು ಕೊಡಲು ಸಾಧ್ಯ ಇಲ್ಲ ಅಂತ...'' ಎನ್ನುವ ಸಿಂಬು ಮಾತುಗಳು ಕನ್ನಡಿಗರ ಮೆಚ್ಚುಗೆ ಪಡೆದಿತ್ತು.
ಇದರ ಬಳಿಕ ಈಗ ಕನ್ನಡದ ಹಿರಿಯ ನಟ ಅನಂತ್ ನಾಗ್ ಕಾವೇರಿ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ. ''ಸಮಸ್ತ ಕನ್ನಡಿಗರ ಜೊತೆಗೆ ನಾನು ಕೂಡ ಟೊಂಕ ಕಟ್ಟಿ ನಿಂತಿದ್ದೇನೆ. ಎನ್ನುವುದನ್ನು ಘಂಟಾಘೋಷವಾಗಿ, ಅನಿವಾರ್ಯವಾಗಿ, ನಮ್ರತೆಯಿಂದ ಹೇಳಲು ಇಚ್ಚಿಸುತ್ತೇನೆ.'' ಎಂದಿದ್ದಾರೆ ಅನಂತ್ ನಾಗ್. ಮುಂದೆ ಓದಿ...

ಅನಂತ್ ನಾಗ್ ಮಾತು
ಕಾವೇರಿ ನೀರಿನ ವಿವಾದದ ಕುರಿತು ಈಗ ಹಿರಿಯ ನಟ ಅನಂತ್ ನಾಗ್ ಮಾತನಾಡಿದ್ದಾರೆ. ಒಂದು ವಿಡಿಯೋ ಮೂಲಕ ನೀರು ಹಂಚಿಕೆ ಕುರಿತು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನಂತ್ ನಾಗ್ ಅವರ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.

ತಮಿಳುನಾಡು ಬಂದ್ ಆಚರಿಸಿದ್ದಾರೆ
''ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಅಂದಿನಿಂದಲೂ ಅಸಹನೆ, ಅಸಹಕಾರ ಮತ್ತು ಘರ್ಷಣೆ ನಿಲುವನ್ನು ತೋರಿಸುತ್ತಾ ಬಂದಿದೆ ಎನ್ನುವುದರಲ್ಲಿ ಆಶ್ಚರ್ಯ ಇಲ್ಲ. ಇಂದು ಮತ್ತೊಬ್ಬ ತಮಿಳು ನಾಡಿನ ಮುಖಂಡರು ತಮಿಳು ನಾಡು ಬಂದ್ ಆಚರಿಸಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ''.- ಅನಂತ್ ನಾಗ್, ಹಿರಿಯ ನಟ

ತಮಿಳುನಾಡು ಅಪಸ್ವರ ಎತ್ತುವುದು ವಾಡಿಕೆ
''ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚು ಅನುಕೂಲ ಮಾಡಿಕೊಡಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ನಿಜವೆಂದರೆ ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ನೀರು ಹಂಚಿಕೆಗೆ ಯಾವ ಸೂಕ್ತ ಪರಿಹಾರ ಸೂಚಿಸಿದರೂ, ತಮಿಳುನಾಡು ಅಪಸ್ವರ ಎತ್ತುವುದು ವಾಡಿಕೆ.'' - ಅನಂತ್ ನಾಗ್, ಹಿರಿಯ ನಟ

ನಟರು ರಾಜಕೀಯ ಪ್ರವೇಶದ ಆತುರದಲ್ಲಿ ಹೇಳಿಕೆ ಕೊಡುತ್ತಿದ್ದಾರೆ
''ಕೇಂದ್ರ ಸರ್ಕಾರ ಬಿಡಿ ಸುಪ್ರೀಂ ಕೋರ್ಟ್ ಕೂಡ ಯಾವುದೇ ಪರಿಹಾರ ನೀಡಲು ಮುಂದಾದರು ಅಲ್ಲಿನ ರಾಜಕಾರಣಿಗಳು ಒಪ್ಪುವುದಿಲ್ಲ. ತಮಿಳುನಾಡಿನಲ್ಲಿ ಸದ್ಯ ಚುನಾವಣೆ ಇಲ್ಲದಿದ್ದರೂ ಅಲ್ಲಿನ ನಟರು ರಾಜಕೀಯ ಪ್ರವೇಶ ಮಾಡುವ ಆತುರದಲ್ಲಿ ಹಿಂದಿನ ಪೀಳಿಗೆಗಳಂತೆಯೇ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ.'' - ಅನಂತ್ ನಾಗ್, ಹಿರಿಯ ನಟ

ನಾನು ಕೂಡ ಟೊಂಕಕಟ್ಟಿ ನಿಂತಿದ್ದೇನೆ
''ಈ ಹಿನ್ನಲೆಯಲ್ಲಿ ಕರ್ನಾಟಕದ ನೆಲ, ಜನ, ಭಾಷೆಯನ್ನು ಕಾಪಾಡಿಕೊಳ್ಳುವ ಉದಾತ್ತ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜೊತೆಗೆ ನಾನು ಕೂಡ ಟೊಂಕಕಟ್ಟಿ ನಿಂತಿದ್ದೇನೆ. ಎನ್ನುವುದನ್ನು ಘಂಟಾಘೋಷವಾಗಿ, ಅನಿವಾರ್ಯವಾಗಿ, ನಮ್ರತೆಯಿಂದ ಹೇಳಲು ಇಚ್ಚಿಸುತ್ತೇನೆ.'' - ಅನಂತ್ ನಾಗ್, ಹಿರಿಯ ನಟ
ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಅನಂತ್ ನಾಗ್ ನೀಡಿರುವ ಹೇಳಿಕೆಯ ವಿಡಿಯೋ


Click it and Unblock the Notifications











