'ಬಾಸ್' ಆಸ್ಪತ್ರೆಯಿಂದ ಬಂದಿದ್ದಕ್ಕೆ ಸಂಭ್ರಮಿಸಿದ 'ಭೀಮ'
ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಬಳಗ ಹಬ್ಬವನ್ನೇ ಆಚರಿಸಿದೆ. ಹೀಗೆ ಅಭಿಮಾನಿಗಳಲ್ಲಿ ತಾನೊಬ್ಬ ಅಭಿಮಾನಿಯಾಗಿ ನಟರೊಬ್ಬರು ದರ್ಶನ್ ಅವರು ಆಸ್ಪತ್ರೆಯಿಂದ ವಾಪಸ್ ಬಂದಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.
ಹೌದು, ದರ್ಶನ್ ಅಭಿನಯದ 'ಕುರುಕ್ಷೇತ್ರ' ಚಿತ್ರದಲ್ಲಿ ಭೀಮನ ಪಾತ್ರ ನಿಭಾಯಿಸಿರುವ ಡ್ಯಾನಿಶ್ ಅಖ್ತರ್ ಸೈಫ್ ಅವರು ಬಾಸ್ ಗೆ ಶುಭ ಕೋರಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಸಂತಸ ಸೂಚಿಸಿರುವ ಡ್ಯಾನಿಶ್ ''ಕೊನೆಗೂ ನನ್ನ ಬಾಸ್, ಡಿ ಬಾಸ್ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಆ ದೇವರಿಗೆ ಧನ್ಯವಾದ. ದರ್ಶನ್ ಬಾಸ್ ನೀವು ತುಂಬಾ ಗ್ರೇಟ್. ಆ ದೇವರು ಸದಾ ನಿಮ್ಮ ಜೊತೆ ಇರ್ತಾನೆ'' ಎಂದಿದ್ದಾರೆ.
ಕಳೆದ ಭಾನುವಾರ ಮೈಸೂರಿನ ಹಿನಕಲ್ ರಿಂಗ್ ರಸ್ತೆಯಲ್ಲಿ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಪ್ರಯಾಣ ಮಾಡುತ್ತಿದ್ದ ಆಡಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಗಾಯಗೊಂಡಿದ್ದ ನಾಲ್ವರನ್ನ ಮೈಸೂರಿನ ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು.

ಬುಧವಾರ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಡಿಸ್ಚಾರ್ಜ್ ಆಗಿದ್ದರು. ನಂತರ ದರ್ಶನ್ ಆಪ್ತ ರಾಯ್ ಆಂಟೋನಿ ಡಿಸ್ಚಾರ್ಜ್ ಆಗಿದ್ದರು. ಶನಿವಾರ ನಟ ದರ್ಶನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿಸಿ ಡಿಸ್ಚಾರ್ಜ್ ಆಗಿದ್ದಾರೆ.
ಒಂದು ತಿಂಗಳು ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದ್ದು, ನಂತರ ಎಂದಿನಂತೆ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರಂತೆ ದರ್ಶನ್. ಸದ್ಯ, 'ಯಜಮಾನ' ಮತ್ತು 'ಒಡೆಯ' ಸಿನಿಮಾಗಳ ಚಿತ್ರೀಕರಣ ಮಾಡುತ್ತಿದ್ದಾರೆ.


Click it and Unblock the Notifications











