'ಅಂಬರೀಷ' ದರ್ಶನ್ 'ಐರಾವತ' ಏರಲಿದ್ದಾರೆ
ಬಾಕ್ಸ್ ಆಫೀಸ್ ಸುಲ್ತಾನ್ ಮತ್ತು ಚಾಲೆಂಜಿಂಗ್ ಸ್ಟಾರ್ ಬಿರುದಾಂಕಿತ ದರ್ಶನ್ ತೂಗುದೀಪ್ ಅವರು ಅಲ್ಪವಿರಾಮದ ನಂತರ ಮತ್ತೆ ಲವಲವಿಕೆಯಿಂದ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ದರ್ಶನ್ ಸ್ಟಾರ್ ವ್ಯಾಲ್ಯೂ ಏರುತ್ತಲೇ ಇದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ದರ್ಶನ್ ಅವರ ಹೊಸ ಚಿತ್ರ ಅಂಬರೀಷ ಸೆಟ್ಟೇರಿದೆ.
'ಅಂಬರೀಶ' ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಇರುವ ಚಿತ್ರ. ಬೆಂಗಳೂರಿನಲ್ಲಿ ವ್ಯಾಪಕವಾಗಿ ಸಾಗುತ್ತಿರುವ ಭೂಮಾಫಿಯಾದ ಸುತ್ತಮುತ್ತ ನಡೆಯುವ ಕಥಾನಕ. ಭೂಮಾಫಿಯಾದ ಅಕ್ರಮನ್ನು ಹೊರಗೆಳೆಯುವುದೇ ಚಿತ್ರದ ಕಥಾವಸ್ತು. ಅಂಬರೀಶ ಚಿತ್ರಕ್ಕೂ ಭಕ್ತ ಅಂಬರೀಶ್ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೆಯೇ ರೆಬಲ್ ಸ್ಟಾರ್ ಅಂಬರೀಶ್ ವೈಯಕ್ತಿಕ ಜೀವನಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಿರ್ದೇಶಕ ಮಹೇಶ್ ಸುಖ ಧರೆ ವಿವರಿಸಿದರು.
ಅಂಬರೀಶ ಚಿತ್ರಕ್ಕೆ ಶುಭ ಹಾರೈಸಲು ನಿರ್ದೇಶಕ ಭಾರ್ಗವ, ನಟಿ ಸುಮಲತಾ ಅಂಬರೀಷ್, ಅಂಬಿಕಾ, ಟಿಎಸ್ ನಾಗಾಭರಣ, ಶಿವಮಣಿ, ಎಂಎಸ್ ರಮೇಶ್, ಸೌಂದರ್ಯ ಜಗದೀಶ್, ಸಿಹಿ ಕಹಿ ಚಂದ್ರು, ಹರಿಕೃಷ್ಣ, ಹರ್ಷಿಕಾ ಪೂಣಚ್ಚ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿದ್ದರು. ಚಿತ್ರದ ನಾಯಕ ದರ್ಶನ್ ಹಾಗೂ ನಾಯಕಿ ನಿಶಾ ಯೋಗೇಶ್ ಅವರ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಸಮಾಜವಾದಿ ಪಕ್ಷದ ಶಾಸಕ, ನಟ ಸಿ.ಪಿ ಯೋಗೇಶ್ವರ್ ಅವರ ಪುತ್ರಿ ನಿಶಾಗೆ ಇದು ಚೊಚ್ಚಲ ಚಿತ್ರ. ಅಂಬರೀಶ ಚಿತ್ರದ ಬಗ್ಗೆ ಇನ್ನಷ್ಟು ವಿವರ ಹಾಗೂ ದರ್ಶನ್ ಅವರ ಮುಂದಿನ ಯೋಜನೆ ಬಗ್ಗೆ ತಪ್ಪದೇ ಓದಿ..

'ಅಂಬರೀಷ' ಚಿತ್ರ ಸೆಟ್ಟೇರಿದೆ
ದರ್ಶನ್ ನಾಯಕರಾಗಿರುವ 'ಅಂಬರೀಷ' ಚಿತ್ರ ಇಂದು ಸೆಟ್ಟೇರಿದೆ. ಆ ಚಿತ್ರದ ನಂತರ ದರ್ಶನ್ ರ ಯಾವ ಚಿತ್ರ ಸೆಟ್ಟೇರಲಿದೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಎಪಿ ಅರ್ಜುನ್ ಅವರು ದರ್ಶನ್ ಅವರಿಗೆ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ.

ಐರಾವತ
'ಅಂಬಾರಿ', 'ಅದ್ಧೂರಿ' ಚಿತ್ರ ನಿರ್ದೇಶಿಸಿದ ಎ.ಪಿ. ಅರ್ಜುನ್ ಅವರು ದರ್ಶನ್ ಅಭಿನಯದ ಚಿತ್ರಕ್ಕೆ 'ಐರಾವತ' ಎಂದು ಹೆಸರಿಡಲಾಗಿದೆ. 'ಇಟ್ಸ್ ಎ ಬ್ರಾಂಡ್' ಎಂಬ ಟ್ಯಾಗ್ ಲೈನ್ ಇದಕ್ಕಿದೆ. ದರ್ಶನ್ ಅವರ ಪ್ರಿನ್ಸ್ ಚಿತ್ರ ನಿರ್ಮಿಸಿ ಕೈಸುಟ್ಟಿಕೊಂಡಿದ್ದ ಸಂದೇಶ್ ನಾಗರಾಜ್ ಅವರು ಮತ್ತೊಮ್ಮೆ ದರ್ಶನ್ ಮೇಲೆ ನಂಬಿಕೆಯಿಟ್ಟು ಹಣ ಸುರಿಯಲು ಮುಂದಾಗಿದ್ದಾರೆ.

ಮುಂದಿನ ವರ್ಷಕ್ಕೆ ಸವಾರಿ
ರಾಟೆ ಚಿತ್ರದಲ್ಲಿ ಬ್ಯುಸಿಯಾಗಿರುವ ಅರ್ಜುನ್ ಅವರು ಮುಂದಿನ ಫೆಬ್ರವರಿ ವೇಳೆಗೆ ದರ್ಶನ್ ಚಿತ್ರದ ನಿರ್ದೇಶನ ಮಾಡಲಿದ್ದಾರೆ. ಅಷ್ಟರಲ್ಲಿ ಅಂಬರೀಶ ಚಿತ್ರದ ಚಿತ್ರೀಕರಣ ಮುಗಿಯುವ ಸಾಧ್ಯತೆಯಿದೆ. ಚಿತ್ರದ ನಾಯಕಿ, ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಂಬರೀಶನ ನಾಯಕಿ ನಿಶಾ, ಸಿಂಪಲ್ ಆಗಿ ಒಂದು ಲವ ಸ್ಟೋರಿ ನಾಯಕಿ ಶ್ವೇತಾ ಮೇಲೂ ಕಣ್ಣಿದೆಯಂತೆ. ಕಾದು ನೋಡಬೇಕು.

ಅಂಬರೀಶ್ ದಂಪತಿ
ದರ್ಶನ್ ನಾಯಕರಾಗಿ ನಟಿಸುತ್ತಿರುವ 'ಅಂಬರೀಶ' ಚಿತ್ರದಲ್ಲಿ ಅಂಬರೀಷ್ ದಂಪತಿ ನಟಿಸುತ್ತಿದ್ದಾರೆ. ಅಂಬರೀಷ್ ಹಾಗೂ ಸುಮಲತಾ ಚಿತ್ರದ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಹಿಂದೆ 'ಶ್ರೀ ಮಂಜುನಾಥ', 'ವರದನಾಯಕ' ಚಿತ್ರದಲ್ಲೂ ಅಂಬರೀಷ್ ದಂಪತಿ ನಟಿಸಿದ್ದರು. ಬುಲ್ ಬುಲ್ ನಲ್ಲಿ ದರ್ಶನ್ ಅಪ್ಪನ ಪಾತ್ರದಲ್ಲಿ ಸಚಿವ ಅಂಬರೀಶ್ ಕಾಣಿಸಿಕೊಂಡಿದ್ದರು.

ಸಿನಿಲೋಕ ವಿಶೇಷ ಪೋಸ್ಟರ್
ದುಷ್ಟರನ್ನು ಸದೆಬಡೆಯುವ ಶಿಷ್ಟರಕ್ಷಕನಾಗಿ ನಗರವಾಸಿಗಳಿಗೆ ಅಭಯ ನೀಡುವ ರೀತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ನಿಂತಿರುವ ಪೋಸ್ಟರ್ ಸಿನಿಲೋಕ ಪ್ರಕಟಿಸಿದೆ ನೋಡಿ ಕಣ್ತುಂಬಿಕೊಳ್ಳಿ


Click it and Unblock the Notifications











