ಜಗತ್ತು ಹೀಗಿದ್ದರೆ ಎಷ್ಟು ಚಂದ: ಡಾಲಿ ಧನಂಜಯ್ ಓದಿದ ಸುಂದರ ಕವನ
ನಟ ಡಾಲಿ ಧನಂಜಯ್ ಎಷ್ಟು ಒಳ್ಳೆ ನಟರೋ ಅಷ್ಟೆ ಉತ್ತಮ, ಮಾನವೀಯ ಮೌಲ್ಯಗಳುಳ್ಳ ಕವಿಯೂ ಹೌದು.
ತೆರೆಯ ಮೇಲೆ ಕ್ರೌರ್ಯವೇ ಮೈವೆತ್ತಂತಹಾ ಪಾತ್ರಗಳಿಗೆ ಜೀವ ತುಂಬುವ ಡಾಲಿ, ನಿಜ ಜೀವನದಲ್ಲಿ ವಿಶ್ವಪ್ರೇಮದ ಕನಸು ಕಾಣುವ ಕವಿ. ಪ್ರೇಮ, ಭ್ರಾತೃತ್ವ, ಸಂಬಂಧಗಳ ಸಂಕೀರ್ಣತೆ, ಅಹಿಂಸೆ, ಜಾತಿ-ಧರ್ಮ ನಿರಪೇಕ್ಷತೆಗಳೇ ಅವರ ಕವನದ ವಸ್ತು.
ಒಂದು ಧರ್ಮವನ್ನು ಉಚ್ಛವಾಗಿ ತೋರುವ ಗೀಳಿನಿಂದ ಮತ್ತೊಂದು ಧರ್ಮವನ್ನು, ಸಾವಿನ ಭೀತಿಯಿಂದ ನರಳುತ್ತಿರುವ ರೋಗಿಗಳನ್ನು ವ್ಯಂಗ್ಯ ಮಾಡುವ ದನಿಯಲ್ಲಿ ಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ಅವರಿಗೆ ನಿನ್ನೆಯಷ್ಟೆ ಮಾನವೀಯತೆ ಪಾಠ ಮಾಡಿದ್ದ ಧನಂಜಯ್, ಇಂದು ಸರಳ, ಸುಂದರ ಕವಿತೆಯನ್ನೋದಿದ್ದಾರೆ.

ಟೀಕಿಸಿದವರಿಗೆ ಉತ್ತರ ಕೊಟ್ಟ ಧನಂಜಯ್
ಸೂಲಿಬೆಲೆ ಬೆಂಬಲಿಗರು ಅಥವಾ ಧನಂಜಯ್ ಮಾಡಿದ್ದ ಟ್ವೀಟ್ ಅನ್ನು ವಿರೋಧಿಸಿ ಧನಂಜಯ್ ಗೆ ಕೇಳಿದ್ದ ಪ್ರಶ್ನೆಗಳಿಗೆ ಇಂದು ವಿಡಿಯೋ ಸಂದೇಶದ ಮೂಲಕ ಧನಂಜಯ್ ಉತ್ತರಗಳನ್ನು ನೀಡಿದ್ದಾರೆ. ವಿಡಿಯೋದ ಕೊನೆಯಲ್ಲಿ ಕವನವನ್ನು ಹೇಳಿದ್ದಾರೆ.

ಧನಂಜಯ್ ಓದಿದ ಕವನ ಹೀಗಿದೆ
ಇಡೀಯ ಜಗವೇ ಒಂದು ಹಳ್ಳಿ ಅಂತಾಗೋದ್ರೆ ಏನ್ ಚಂದ
ಅಲ್ಲಲ್ಲೆ ಸಣ್ಣ ಮುನಿಸು, ಅಲ್ಲಲ್ಲೆ ಸಣ್ಣ ಜಗಳ, ಅಲ್ಲೇ ಪಂಚಾಯಿತಿ
ಇಡೀಯ ಜಗವೇ ಒಂದು ಹಳ್ಳಿ ಅಂತಾಗೋದ್ರೆ ಏನ್ ಚಂದ
ಊರೂರು ಮಧ್ಯೆ ತಂತಿ ಬೇಲಿಯೇ ಬೇಕಿಲ್ಲ
ಮದ್ದಿಲ್ಲ-ಗುಂಡಿಲ್ಲ, ಯುದ್ಧದಾ ಸುಳಿವಿಲ್ಲ, ಮದ್ದಲೆಯ ಸದ್ದೇ ಜಗವೆಲ್ಲಾ
ಇಡೀಯ ಜಗವೇ ಒಂದು ಹಳ್ಳಿ ಅಂತಾಗೋದ್ರೆ ಏನ್ ಚಂದ
ಜೀವವದ ಬಂಧ ತುಂಬಾನೆ ದೊಡ್ದು ಕಂದ
ಒಲವನ್ನೇ ಹಡೆದ ಮಣ್ಣ, ಗುಣದಲ್ಲೇ ಬದುಕು ಚೆನ್ನ

ಅಲ್ಲಮನೂ ನಾನೇ, ಡಾಲಿಯೂ ನಾನೆ
ಧನಂಜಯ್ ಮಾಡಿದ್ದ ಕ್ರೌರ್ಯ ಮುನ್ನೆಲೆಯಲ್ಲಿದ್ದ ಪಾತ್ರಗಳನ್ನು ಹೆಸರಿಸಿ 'ನೀವು ಮಾನವೀಯತೆ ಪಾಠ ಮಾಡುತ್ತೀರಾ?' ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಅದಕ್ಕೆ ಉತ್ತರಿಸಿರುವ ಧನಂಜಯ್, ನಟನಾಗಿ ಎಲ್ಲ ಪಾತ್ರಗಳಿಗೂ ಜೀವ ತುಂಬುವುದು ನನ್ನ ಕರ್ತವ್ಯ, 'ಅಲ್ಲಮನೂ ನಾನೇ, ಡಾಲಿಯೂ ನಾನೆ' ಎಂದು ಹೇಳಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಧನಂಜಯ್ ಮತ್ತು ಸಾಹಿತ್ಯ ನಂಟು
ಧನಂಜಯ್ ಗೆ ಸಿನಿಮಾಕ್ಕೆ ಬರುವುದಕ್ಕೆ ಮೊದಲಿನಿಂದಲೂ ಸಾಹಿತ್ಯದ ನಂಟು ಇದೆ. ಕಾಲೇಜು ದಿನಗಳಿಂದಲೂ ಪುಸ್ತಕಗಳನ್ನು ಓದುವ ಹವ್ಯಾಸವಿಟ್ಟುಕೊಂಡಿದ್ದಾರೆ. ಅಲ್ಲಮನ ಪಾತ್ರ ಮಾಡಲು ವಚನಗಳ ಸತತ ಅಭ್ಯಾಸವನ್ನೂ ಅವರು ಮಾಡಿದ್ದರಂತೆ. ಆಗಾಗ್ಗೆ ತಮ್ಮ ಫೇಸ್ಬುಕ್, ಟ್ವಿಟ್ಟರ್ಗಳಲ್ಲಿ ಸ್ವರಚಿತ ಚುಟುಕುಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.


Click it and Unblock the Notifications











