ನಟ ದುನಿಯಾ ವಿಜಯ್ ಹೇಳಿದ್ದೇನು, ಆಗಿದ್ದೇನು?
ಬಣ್ಣದ ಲೋಕದಲ್ಲಿ ನಿರ್ಮಾಪಕರನ್ನು ಅನ್ನದಾತ ಎಂದೇ ಕರೆಯುತ್ತಾರೆ. ಸಾಕಷ್ಟು ಕಲಾವಿದರ, ತಂತ್ರಜ್ಞರ, ಕಾರ್ಮಿಕರ ಪಾಲಿಗೆ ನಿರ್ಮಾಪಕ ಎನ್ನಿಸಿಕೊಳ್ಳುವವನ್ನು ನಿಜಕ್ಕೂ ಅನ್ನದಾತನಿದ್ದಂತೆ. ಈ ರೀತಿಯ ಅನ್ನದಾತನ ಮೇಲೆ ನಟ ದುನಿಯಾ ವಿಜಯ್ ಅವರು ಕ್ಷುಲ್ಲಕಭಾಷೆ ಬಳಸಿದ್ದಾರೆ ಎನ್ನುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟ ಮೇ.1ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ನಿರ್ಮಾಪಕರ ವಿರುದ್ಧ ವ್ಯಕ್ತಪಡಿಸಿದ್ದರು ಎನ್ನಲಾಗಿರುವ ಆಕ್ರೋಶ ಈಗ ವಿವಾದಕ್ಕೆ ಕಾರಣವಾಗಿದೆ. ನಿರ್ಮಾಪಕರ ವಿರುದ್ಧ ಅವರು ಗರಂ ಆಗಿದ್ದೇಕೆ? [ ವಿಮರ್ಶೆ: ಶಿವಾಜಿನಗರ ಪಕ್ಕಾ ಗಾಂಧಿನಗರ ಸಿನಿಮಾ]
ಕಾರ್ಮಿಕರ ಒಕ್ಕೂಟವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದಿದ್ದ ವಿಜಯ್, "ನೃತ್ಯ ಕಲಾವಿದೆಯರಿಗೆ ನಿರ್ಮಾಪಕರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅಂಥಹ ಪ್ರಕರಣಗಳು ನನ್ನ ಗಮನಕ್ಕೆ ಬಂದರೆ ಇದಕ್ಕೆ ಕಾರಣರಾದವರನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇನೆ" ಎಂದಿದ್ದರು.ಈ ಬಗ್ಗೆ ನಿರ್ಮಾಪಕರ ಸಂಘದಲ್ಲಿ ಪ್ರಸ್ತಾಪಕ್ಕೆ ಬಂದು ಚರ್ಚೆಗೆ ಕಾರಣವಾಯಿತು. ಅನ್ನದಾತರಾದ ನಿರ್ಮಾಪಕರನ್ನು ಈ ರೀತಿ ನಿಂದಿಸಿರುವುದು ನಿಜಕ್ಕೂ ಖೇದಕರ ಎಂದು ನಿರ್ಮಾಪಕರಾದ ಕೆ.ಮಂಜು ಹಾಗೂ ಮುನಿರತ್ನ ಅವರು ಹೇಳಿದ್ದರು. ವಿಜಯ್ ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸಬೇಕು ಎಂದು ಕೆಲವರು ಆಗ್ರಹಿಸಿದ್ದರು.
ಆದರೆ ದುನಿಯಾ ವಿಜಯ್ ಅವರು ನಿರ್ದಿಷ್ಟ ವ್ಯಕ್ತಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳದೆ ಇರುವುದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ. ಆದರೆ ಅವರ ಹೇಳಿಕೆ ಸಾರ್ವಜನಿಕರಲ್ಲಿ ನಿರ್ಮಾಪಕರ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತದೆ. ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಕಲಾವಿದರ ಸಂಘಕ್ಕೆ ಪತ್ರ ಬರೆಯಲಾಗಿದೆ.
ದುನಿಯಾ ವಿಜಯ್ ಏನಂತಾರೆ?
ಕೆಲ ದಿನಗಳ ಹಿಂದೆ ನೃತ್ಯಕಲಾವಿದರು ತಮ್ಮ ನೋವನ್ನು ನನ್ನ ಬಳಿ ಹಂಚಿಕೊಂಡಿದ್ದರು. ಕಾರ್ಮಿಕರ ದಿನದಂದು ಭಾಷಣದಲ್ಲಿ ಮನೆಹಾಳು ಮಾಡುವವರನ್ನು ನೃತ್ಯ ಕಲಾವಿದೆಯರಿಗೆ ಕಿರುಕುಳ ನೀಡುವವರನ್ನು ಸುಟ್ಟು ಹಾಕುತ್ತೇನೆ ಎಂದು ಹೇಳಿದ್ದೇನೆಯೇ ಹೊರತು, ಅನ್ನ ಹಾಕಿದ ನಿರ್ಮಾಪಕರ ವಿರುದ್ಧ ಮಾತನಾಡಿಲ್ಲ. (ನಾನೂ ಒಬ್ಬ ನಿರ್ಮಾಪಕ).
ಬಡವರ ಪರ ದನಿ ಎತ್ತಿದ ಕಾರಣಕ್ಕೆ ಪಟ್ಟಬದ್ಧ ಹಿತಾಸಕ್ತಿಗಳ ಆರೋಪ ಅಷ್ಟೆ. ಸತ್ಯ ಏನೆಂಬುದು ಟಿವಿಯಲ್ಲಿ ಎಲ್ಲರೂ ನೋಡಿದ್ದೀರಿ. ಯಾರಮೇಲೆ ಯಾರೂ ಸುಖಾಸುಮ್ಮನೆ ಆರೋಪಮಾಡಬಾರದು. ಏನೇ ಆದರೂ ಸರಿ,ನೊಂದವರ ಪರ ನನ್ನ ವಾದ. (ಏಜೆನ್ಸೀಸ್)


Click it and Unblock the Notifications












