'ಸಾಹೇಬ'ನ ಬಿಡುಗಡೆಗೆ ಎದುರಾಯ್ತು ವಿಘ್ನ.!
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ 'ಸಾಹೇಬ' ಚಿತ್ರ ನಿಗದಿ ಮಾಡಿರುವ ದಿನದಂದು ಬಿಡುಗಡೆಯಾಗುವುದು ಅನುಮಾನ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಜೂನ್ 16 ರಂದು 'ಸಾಹೇಬ' ಬಿಡುಗಡೆ ಆಗಬೇಕಿದೆ. ಆದ್ರೆ, ಪ್ರಾಣಿದಯಾ ಸಂಘದಿಂದ ಎನ್.ಓ.ಸಿ ಸಿಗದ ಕಾರಣ ಹೇಳಿದ ದಿನಾಂಕಕ್ಕೆ ತೆರೆ ಮೇಲೆ ಬರಲು ಕಷ್ಟವಾಗಲಿದೆಯಂತೆ.
'ಸಾಹೇಬ' ಚಿತ್ರದಲ್ಲಿ ನಟ ಮನೋರಂಜನ್ ಜೊತೆಗೆ ಆನೆಯೊಂದು ಕಾಣಿಸಿಕೊಂಡಿದ್ದು, ಎರಡು-ಮೂರು ದೃಶ್ಯಗಳಲ್ಲಿ ಇದೆಯಂತೆ. ಇದಕ್ಕಾಗಿ ನಿರ್ಮಾಪಕರು ಪ್ರಾಣಿದಯಾ ಸಂಘದಿಂದ ಪರವಾನಗಿ ಕೇಳಿದ್ದು, ಇನ್ನು ಚಿತ್ರತಂಡಕ್ಕೆ ಅನುಮತಿ ನೀಡದೆ ಇರುವುದು ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ.

ಈ ಮಧ್ಯೆ 'ಸಾಹೇಬ' ಚಿತ್ರಕ್ಕೆ ಸೆನ್ಸಾರ್ ಆಗಬೇಕಿದೆ. ಹೀಗಾಗಿ, ಜೂನ್ 16 ರಂದು 'ಸಾಹೇಬ' ಬಿಡುಗಡೆಯಾಗುವ ಸಾಧ್ಯತೆ ಕಮ್ಮಿಯಿದೆ ಎನ್ನಲಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳನ್ನ ಬಿಡುಗಡೆ ಮಾಡಿರುವ ಚಿತ್ರತಂಡ, ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿತ್ತು. ಈಗ, ಮತ್ತೆರೆಡು ವಾರ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ನಟ ಮನೋರಂಜನ್ ಮೊಟ್ಟ ಮೊದಲ ಬಾರಿಗೆ ನಾಯಕನಾಗಿ ಪರಿಚಯವಾಗ್ತಿರುವ ಚಿತ್ರ 'ಸಾಹೇಬ'. ಈ ಚಿತ್ರಕ್ಕೆ ಭರತ್ ಎಂಬ ಯುವ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದು, ಶಾನ್ವಿ ಶ್ರೀವಸ್ತವ್ ನಾಯಕಿ ಆಗಿ ಅಭಿನಯಿಸಿದ್ದಾರೆ. ಇನ್ನು ವಿ ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದು, ಜಿ ಎಸ್ ವಿ ಸೀತಾರಾಮ್ ಅವರ ಛಾಯಗ್ರಹಣ ಹೊಂದಿದೆ. ಜಯಣ್ಣ-ಭೋಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡಿದ್ದರು.


Click it and Unblock the Notifications











