ಕೊರೊನಾ: ಸಂಕಷ್ಟದ ವೇಳೆ ಜನಮೆಚ್ಚುವ ಕೆಲಸ ಮಾಡಿದ ನಟ ಪ್ರಕಾಶ್ ರೈ
ಕೊರೊನಾ ವೈರಸ್ ತನ್ನ ಕಬಂಧಬಾಹುವನ್ನು ವಿಸ್ತರಿಸುತ್ತಿರುವ ಬೆನ್ನಲ್ಲೇ, ದೇಶ ಬಹುತೇಕ ಸ್ತಬ್ದಗೊಂಡಿದೆ. ಕರ್ನಾಟಕ ಕಂಪ್ಲೀಟ್ ಲಾಕ್ ಡೌನ್ ಆಗಿದೆ. ಅಗತ್ಯ ವಸ್ತುಗಳನ್ನು ಬಿಟ್ಟು ಮಿಕ್ಕೆಲ್ಲಾ ಅಂಗಡಿ, ಮುಂಗಟ್ಟು, ಕಚೇರಿಗಳು ಬಂದ್ ಆಗಿವೆ.
ದಿನದ ಸಂಪಾದನೆಯನ್ನೇ ನಂಬಿಕೊಂಡಿರುವ ಹಲವಾರು ಕಾರ್ಮಿಕರು, ಕೂಲಿಗಾರರು ಸಂಕಷ್ಟದಲ್ಲಿದ್ದಾರೆ. ಅಲ್ಲಲ್ಲಿ, ಇಂತಹ ವರ್ಗದವರಿಗೆ ಊಟ,ತಿಂಡಿ ನೀಡಿ ಮಾನವೀಯತೆ ತೋರಿದ ಘಟನೆಗಳು ವರದಿಯಾಗಿವೆ.
ಚಿತ್ರಮಂದಿರ ಬಂದ್ ಆಗಿ ಎಷ್ಟೊ ದಿನಗಳಾದವು, ಈಗ ಚಿತ್ರೀಕರಣವೂ ಬಂದ್ ಆಗಿದೆ. ಹಾಗಾಗಿ, ಇಲ್ಲೂ ಸೆಟ್ ನಲ್ಲಿ ದುಡಿಯುವ ನೌಕರರಿಗೆ ತೊಂದರೆಯಾಗಿದೆ. ಇಂತಹ ಸಂದರ್ಭದಲ್ಲಿ ನಟ ಪ್ರಕಾಶ್ ರೈ/ಪ್ರಕಾಶ್ ರಾಜ್, ಜನಮೆಚ್ಚುವ ಕೆಲಸವನ್ನು ಮಾಡಿದ್ದಾರೆ.
ಮಾರ್ಚ್ 22ರಂದು ಟ್ವೀಟ್ ಮಾಡಿರುವ ಪ್ರಕಾಶ್ ರೈ, ಜನತಾ ಕರ್ಫ್ಯೂ, ಜಸ್ಟ್ ಆಸ್ಕಿಂಗ್, ಹ್ಯಾಷ್ ಟ್ಯಾಗ್ ನೀಡಿ, ಅದರಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದು ಹೀಗಿದೆ:

ಜೀವನಕ್ಕೆ ನಾನು ಮರಳಿ ನೀಡುವಂತಹದ್ದಾಗಿದೆ
ನಟ ಪ್ರಕಾಶ್ ರೈ ತಮ್ಮ ಕೆಲಸಗಾರರಿಗೆ ಮತ್ತು ಸೆಟ್ ನಲ್ಲಿ ತಮ್ಮ ಜೊತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅಲ್ಲದೇ ಅವರ ಕಷ್ಟಕ್ಕೂ ಸ್ಪಂದಿಸಿದ್ದಾರೆ. "ಇಂದು ನಾನು ಮಾಡಿರುವ ಕೆಲಸ ಜೀವನಕ್ಕೆ ನಾನು ಮರಳಿ ನೀಡುವಂತಹದ್ದಾಗಿದೆ. ಅಲ್ಲದೆ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಿದೆ" ಎಂದು ರೈ ಟ್ವೀಟ್ ಮಾಡಿದ್ದಾರೆ.

ಮೇ ತಿಂಗಳವರೆಗ ಅಡ್ವಾನ್ಸ್ ಸಂಬಳ ನೀಡಿದ ಪ್ರಕಾಶ್ ರೈ
"ನನ್ನ ಬಳಿಯಿದ್ದ ರಿಸರ್ವ್ ಫಂಡ್ ನೋಡಿದೆ. ನನ್ನ ಫಾರ್ಮ್, ಮನೆ, ಫಿಲಂ ಪ್ರೊಡಕ್ಷನ್, ಫೌಂಡೇಶನ್ ಮತ್ತು ನನ್ನ ಖಾಸಗಿ ಸಿಬ್ಬಂದಿಗಳಿಗೆ ಮೇ ತಿಂಗಳವರೆಗಿನ ಸಂಬಳವನ್ನು ಮುಂಗಡವಾಗಿ ನೀಡಿದೆ" ಎಂದು ಪ್ರಕಾಶ್ ರೈ, ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಮೂರು ಚಿತ್ರದ ಚಿತ್ರೀಕರಣ ನಿಂತಿದೆ
"ಕೊರೊನಾ - ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ನನ್ನ ಮೂರು ಚಿತ್ರದ ಚಿತ್ರೀಕರಣ ನಿಂತಿದೆ. ಅಲ್ಲಿನ ಪ್ರೊಡಕ್ಷನ್ ನಲ್ಲಿ ದಿನದ ವೇತನದ ಲೆಕ್ಕದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಹಣ ಸಹಾಯ ಮಾಡಿದ್ದೇನೆ" ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಇದಿನ್ನೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ನನ್ನಿಂದ ಏನು ಸಾಧ್ಯವೋ ಅದನ್ನು ಮಾಡುತ್ತೇನೆ
"ಇದಿನ್ನೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ನನ್ನಿಂದ ಏನು ಸಾಧ್ಯವೋ ಅದನ್ನು ಮಾಡುತ್ತೇನೆ. ಇಂತಹ ಸಮಯದಲ್ಲಿ ಎಲ್ಲರೂ ಸಹಾಯಹಸ್ತ ಚಾಚಬೇಕೆಂದು ನಾನು ಮನವಿ ಮಾಡುತ್ತೇನೆ. ನಾವು ಇನ್ನೊಬ್ಬರಿಗಾಗಿ ನಿಲ್ಲುವ ಸಮಯವಿದು" ಎಂದು ಪ್ರಕಾಶ್ ರೈ ಟ್ವೀಟ್ ನಲ್ಲಿ ಬರೆದಿದ್ದಾರೆ.


Click it and Unblock the Notifications











