ಬೀದಿಗಿಳಿದ ಜನರು: 'ಯಥಾ ರಾಜ ತಥಾ ಪ್ರಜಾ' ಎಂದು ಟೀಕಿಸಿದ ಪ್ರಕಾಶ್ ರೈ
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ನಟ ಪ್ರಕಾಶ್ ರೈ, ಜನತಾ ಕರ್ಫ್ಯೂ ವಿಚಾರದಲ್ಲಿ ಜನತೆ ನಡೆದುಕೊಂಡ ರೀತಿಯನ್ನು ಕೇಂದ್ರ ಸರ್ಕಾರದ ಧೋರಣೆಗೆ ಹೋಲಿಸಿ ಟೀಕಿಸಿದ್ದಾರೆ.
Recommended Video
ಕೊರೊನಾ ವೈರಸ್ ಹಾವಳಿ ತಡೆಗಟ್ಟುವ ಸಂಬಂಧ ಭಾನುವಾರ 'ಜನತಾ ಕರ್ಫ್ಯೂ' ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಆರೋಗ್ಯ ಕ್ಷೇತ್ರದಲ್ಲಿ ನಮಗಾಗಿ ದುಡಿಯುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಲು ಎಲ್ಲರೂ ಸಂಜೆ ಐದು ಗಂಟೆಗೆ ಮನೆ ಬಾಲ್ಕನಿಯಲ್ಲಿ ನಿಂತು ಐದು ನಿಮಿಷ ಚಪ್ಪಾಳೆ ತಟ್ಟಿ ಎಂದು ಹೇಳಿದ್ದರು. ಆದರೆ ಐದು ಗಂಟೆ ಬಳಿಕ ನಡೆದದ್ದೇ ಬೇರೆ.

ಮೋದಿ ಹೇಳಿದ್ದೇ ಒಂದು, ಜನ ಮಾಡಿದ್ದೇ ಇನ್ನೊಂದು
ಮನೆಯಿಂದ ಹೊರಗೆ ಬಂದ ಜನರು ಯುದ್ಧವನ್ನೇ ಗೆದ್ದಂತೆ ತಟ್ಟೆ, ಜಾಗಟೆಗಳನ್ನು ಬಾರಿಸಿದರು. ಶಂಖಗಳನ್ನು ಊದಿದರು. ಜೋರಾಗಿ ಸದ್ದು ಮಾಡಿದರು. ಇಷ್ಟೇ ಆಗಿದ್ದರೆ ಸಮಸ್ಯೆ ಇರಲಿಲ್ಲ. ಇನ್ನು ಎಲ್ಲವೂ ಮುಗಿದೇ ಹೋಯ್ತು, ವೈರಸ್ ದೇಶ ಬಿಟ್ಟು ಹೋಯ್ತು ಎಂಬಂತೆ ಗುಂಪು ಗುಂಪಾಗಿ ರಸ್ತೆಗೆ ಇಳಿದಿರು. ರಸ್ತೆಯಲ್ಲಿಯೂ ಜೋರಾಗಿ ಸದ್ದು ಮಾಡುತ್ತಾ ಸಾಗಿದರು. ಜನತಾ ಕರ್ಫ್ಯೂವಿನ ಮೂಲ ಉದ್ದೇಶವೇ ಜನರು ಸಾರ್ವಜನಿಕ ಸಂಪರ್ಕದಿಂದ ದೂರ ಇರಲಿ ಎನ್ನುವುದು. ಅದನ್ನು ಮರೆತ ಜನರು ಬೀದಿಗಿಳಿದು ಮೂರ್ಖತನ ಪ್ರದರ್ಶಿಸಿದ್ದರು.
ರಾಜನಂತೆಯೇ ಜನರು
ಇದನ್ನು ನಟ ಪ್ರಕಾಶ್ ರೈ ಲೇವಡಿ ಮಾಡಿದ್ದಾರೆ. 'ಯಥಾ ರಾಜ ತಥಾ ಪ್ರಜಾ' ಎಂದು ಅವರು ರಾಜನಂತೆಯೇ ಆತನ ಪ್ರಜೆಗಳು ಇರುತ್ತಾರೆ ಎಂದು ಜನರ ವರ್ತನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರೋಕ್ಷವಾಗಿ ಹೋಲಿಸಿದ್ದಾರೆ.

ಸಿನಿಮಾ ಕಾರ್ಮಿಕರಿಗೆ ನೆರವು
ಜನತಾ ಕರ್ಫ್ಯೂವಿನ ದಿನ ನನ್ನ ಫಾರ್ಮ್ ಹೌಸ್ನ ನೌಕರರಿಗೆ ಮುಂಗಡ ವೇತನ ಪಾವತಿಸಿದೆ. ಮೇ ತಿಂಗಳವರೆಗಿನ ಸಿನಿಮಾ ಪ್ರೊಡಕ್ಷನ್, ಪ್ರತಿಷ್ಠಾನ ಹಾಗೂ ವೈಯಕ್ತಿಕ ಸಿಬ್ಬಂದಿಗೆ ಸಂಬಳ ಮುಂಗಡ ನೀಡಿದ್ದೇನೆ. ಸಾಮಾಜಿಕ ಅಂತರದ ಕಾರಣ ಸ್ಥಗಿತಗೊಂಡಿರುವ ನನ್ನ ಮೂರು ಸಿನಿಮಾಗಳಲ್ಲಿ ದುಡಿಯುತ್ತಿರುವ ದಿನಗೂಲಿ ಕಾರ್ಮಿಕರಿಗೆ ಕನಿಷ್ಠ ಅರ್ಧ ವೇತನ ನೀಡುವ ಮಾರ್ಗವನ್ನು ಅಂತಿಮಗೊಳಿಸಿದ್ದೇನೆ ಎಂದು ರೈ ತಿಳಿಸಿದ್ದಾರೆ.

ಜನರಿಗೆ ಸಹಾಯ ಮಾಡಿ
ನಾನು ಈ ಕಾರ್ಯವನ್ನು ಇಷ್ಟಕ್ಕೆ ಮುಗಿಸುವುದಿಲ್ಲ. ನನ್ನಿಂದ ಏನು ಸಾಧ್ಯವೋ ಅಷ್ಟನ್ನು ಮುಂದುವರಿಸುತ್ತೇನೆ. ನಿಮ್ಮ ಸುತ್ತಲೂ ಅಗತ್ಯವಿರುವ ಜನರ ಸಾಧ್ಯವಿರುವವರು ಸಹಾಯ ಮಾಡಿ ಎಂದು ಮನವಿ ಮಾಡುತ್ತೇನೆ. ಈಗ ಬುದಕಿಗೆ ವಾಪಸು ಕೊಡುವ ಸಮಯ. ಒಬ್ಬರೊಂದಿಗೆ ಇನ್ನೊಬ್ಬರು ನಿಲ್ಲುವ ಸಮಯ ಎಂದು ಹೇಳಿದ್ದಾರೆ.


Click it and Unblock the Notifications











