ಕನ್ನಡಿಗರಿಗೆ ಥ್ಯಾಂಕ್ಸ್ ಹೇಳಿದ ಸಿಂಬು: ತಮಿಳು ವಾಹಿನಿಗಳ ವಿರುದ್ಧ ಬೇಸರ
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಾಕಷ್ಟು ವರ್ಷಗಳ ಇತಿಹಾಸವಿದೆ. ಪ್ರತಿ ಭಾರಿಯೂ ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯೆ ಕಾವೇರಿ ವಿಚಾರವಾಗಿ ಗಲಾಟೆಗಳು ಆಗುತ್ತಲೇ ಇರುತ್ತದೆ. ತಮಿಳುನಾಡಿದ ಕಲಾವಿದರೆಲ್ಲರೂ ಕಾವೇರಿ ನೀರಿಗಾಗಿ ಹೋರಾಟ ಮಾಡುತ್ತಿದ್ದರೆ ನಟ ಸಿಂಬು ಮಾತ್ರ ಕರ್ನಾಟಕದವರ ಬಳಿ ನೀರಿಲ್ಲ ನಮಗೆಲ್ಲಿ ನೀರು ನೀಡುತ್ತಾರೆ ಎಂದು ಮಾತನಾಡಿದ್ದರು.
ಸಿಂಬು ಮಾತಿಗೆ ಕನ್ನಡಿಗರು ಚಪ್ಪಾಳೆ ತಟ್ಟಿದ್ದರು. ಅಷ್ಟೇ ಅಲ್ಲದೆ ಇಲ್ಲಿನ ಕನ್ನಡ ಪರ ಹೋರಾಟಗಾರರು ಕೂಡ ಸಿಂಬು ಹೇಳಿರುವ ಮಾತು ಮೆಚ್ಚುವಂತದ್ದು ನೀರಿಗಾಗಿ ರಾಜಕೀಯ ಮಾಡಬೇಡಿ. ನಮ್ಮಲ್ಲೂ ರೈತರಿದ್ದಾರೆ, ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಮ್ಮಲ್ಲೂ ಎದುರಾಗಿದೆ ಎಂದಿದ್ದರು .
ಇನ್ನೂ ಕನ್ನಡದ ಹಿರಿಯ ನಟ ಅನಂತ್ ನಾಗ್ ಕೂಡ ಕಾವೇರಿ ವಿಚಾರವಾಗಿ ಮಾತನಾಡಿ ''ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಅಂದಿನಿಂದಲೂ ಅಸಹನೆ, ಅಸಹಕಾರ ಮತ್ತು ಘರ್ಷಣೆ ನಿಲುವನ್ನು ತೋರಿಸುತ್ತಾ ಬಂದಿದೆ ಎನ್ನುವುದರಲ್ಲಿ ಆಶ್ಚರ್ಯ ಇಲ್ಲ. ಎಂದಿದ್ದರು. ಇವೆಲ್ಲವೂ ನಡೆದ ನಂತ್ರ ಮತ್ತೆ ಸಿಂಬು ಕನ್ನಡಿಗರ ಬಗ್ಗೆ ಮಾತನಾಡಿದ್ದಾರೆ. ಸದ್ಯ ನಟ ಸಿಂಬು ಮಾತನಾಡಿರುವ ಆಡಿಯೋ ವೈರಲ್ ಆಗುತ್ತಿದೆ ಹಾಗಾದರೆ ಸಿಂಬು ಏನು ಹೇಳಿದ್ದಾರೆ. ಇಲ್ಲಿ ಮಾಹಿತಿ

ಮೊದಲ ಬಾರಿ ಪಾಸಿಟೀವ್ ಪ್ರತಿಕ್ರಿಯೆ
"ನಾನು ಎಸ್.ಟಿ.ಆರ್ ಸಿಂಬು ಮಾತನಾಡುತ್ತಿದ್ದೇನೆ. ತುಂಬಾ ಖುಷಿ ಆಗ್ತಿದೆ. ಯಾಕಂದ್ರೆ, ತುಂಬಾ ವರ್ಷದಿಂದ ನಡೆಯುತ್ತಿರುವ ಈ ಕಾವೇರಿ ಸಮಸ್ಯೆಗೆ ಇಂದು ಪಾಸಿಟೀವ್ ಪ್ರತಿಕ್ರಿಯೆ ಸಿಕ್ಕಿದೆ. ನಿಜವಾದ ಮನುಷ್ಯತ್ವವುಳ್ಳ ಎಲ್ಲರೂ ತಮ್ಮ ಅಭಿಪ್ರಾಯಗಳನ್ನ ಮಾನವೀಯತೆ ದೃಷ್ಟಿಯಿಂದ ವ್ಯಕ್ತಪಡಿಸಿದ್ದೀರಾ'. ನಟ: ಸಿಂಬು

ಒಳ್ಳೆ ಉದ್ದೇಶಕ್ಕಾಗಿ ನಾನು ಬಂದೆ
"ಮೊದಲನೇಯದಾಗಿ ಈ ವಿಷ್ಯದ ಬಗ್ಗೆ ನಾನು ಯಾಕೆ ಮಾತನಾಡಲು ಮುಂದೆ ಬಂದೆ ಎಂಬುದನ್ನ ಈಗ ನಾನು ಹೇಳಬಹುದು. ಯಾಕಂದ್ರೆ ಆಗ ಹೇಳಿದ್ರೆ, ಅದು ತಪ್ಪಾಗಿರುತ್ತಿತ್ತು. ಅದು ಏನು ಅಂತ ಮೊದಲು ನಿಮಗೆ ಹೇಳಲು ಇಷ್ಟಪಡುತ್ತೇನೆ. ಅದಕ್ಕೂ ಮುಂಚೆ ಎಲ್ಲರಿಗೂ ಧನ್ಯವಾದಗಳನ್ನ ತಿಳಿಸುತ್ತೇನೆ.
ಕನ್ನಡ ಸಹೋದರರಿಗೆ, ತಂದೆ-ತಾಯಿ, ತಂಗಿ-ತಮ್ಮನಾಗಿ ಭಾವಿಸುವ ಹಾಗೂ ನನ್ನ ಕನ್ನಡ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನ ಅರ್ಪಿಸುತ್ತೇನೆ. ಯಾಕಂದ್ರೆ, ಕನ್ನಡ ನಾಡಿನ ಜನಗಳಿಗೆ, ತಮಿಳರು ಅಂದ್ರೆ ನಿಮಗೆ ಇಷ್ಟವಾಗಲ್ಲ, ತಮಿಳರು ಚೆನ್ನಾಗಿರಬಾರದು, ತಮಿಳಿರಿಗೆ ನೀರು ಸಿಗಬಾರದು ಎಂದು ವಿಲನ್ ರೀತಿಯಲ್ಲೇ ಬಿಂಬಿಸಿದ್ದವರಿಗೆ ಹಾಗೂ ನಾವು ನಿಮ್ಮನ್ನ ದ್ವೇಷಿಸುವಂತಿದ್ದ ಸಂಪ್ರದಾಯವನ್ನ ಮುರಿಯಬೇಕು ಎಂದು ನಿರ್ಧರಿಸಿ, ನಾನು ಈ ಕೆಲಸಕ್ಕೆ ಮುಂದಾದೆ".

ನಾವೆಲ್ಲಾ ಭಾರತೀಯರು
"ಇದಕ್ಕೆ ನೀವೆಲ್ಲ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ನೀಡಿ, ಅಂತಹವರ ಮುಖಕ್ಕೆ ಮಸಿಯನ್ನ ಬಳಿದು ನಾವು ಕೂಡ ಇದೇ ದೇಶದಲ್ಲಿ ವಾಸಿಸುತ್ತಿದ್ದೇವೆ, ನಮಗೂ ಮಾನವೀಯತೆ ಇದೆ, ಇದು ಭಾರತ. ನಾವೆಲ್ಲ ಒಂದಾಗಿ ಇರುತ್ತೇವೆ ಎಂದು ಬೆಲೆ ನೀಡಿ, ನೀವೆಲ್ಲರೂ ನೀರು ಕೊಟ್ಟು ಈ ಸಂಪ್ರದಾಯವನ್ನ ಮುರಿದಿದ್ದಕ್ಕೆ ನನ್ನ ಕನ್ನಡಿಗರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ".

ನೀರಿಗಾಗಿ ಮಾಡುವ ರಾಜಕೀಯ ನಿಲ್ಲಿಸಿ
"ಎರಡನೇಯದೇ, ತಮಿಳುನಾಡಿನ ಜನರ ಬಳಿ ಕರ್ನಾಟಕದವರು ನೀರು ಕೊಡೋದಿಲ್ಲ ಎಂದು ಹೇಳಿ ಹೇಳಿ ನಮ್ಮಲ್ಲಿ ದ್ವೇಷ ಹುಟ್ಟುವಂತೆ ಮಾಡಲಾಗಿದೆ. ಆದ್ರೆ, ಅದು ಹಾಗಲ್ಲ, ಕರ್ನಾಟದವರು ನಮಗೆ ನೀರು ಕೊಡ್ತಾರೆ, ರಾಜಕೀಯವಾಗಿಯೇ ಇಷ್ಟು ದಿನ ನಮ್ಮೊಂದಿಗೆ ಆಟವಾಡಿದ್ದಾರೆ ಎಂದು ನಂಬಿ, ತಮಿಳುನಾಡಿನ ಅಷ್ಟು ಜನ ಇದಕ್ಕೆ ಬೆಂಬಲ ನೀಡಿ ಮಾನವೀಯತೆಯ ದೃಷ್ಟಿಯಿಂದ ಈ ಕೆಲಸವನ್ನ ಗೌರವಿಸಿದ್ದಕ್ಕೆ ಎಲ್ಲ ನನ್ನ ತಮಿಳಿಗರಿಗೂ ಧನ್ಯವಾದಗಳು".

ಕಾಣದ ಶಕ್ತಿಗಳ ಕೆಲಸ
'ನಾನು ನಿರ್ಧರಿಸಿದ ವಿಚಾರಕ್ಕೆ ಆ ದೇವರು ಇಷ್ಟೊಂದು ದೊಡ್ಡ ಗೆಲುವು ನೀಡಿದ್ದಾರೆ ಎಂಬುದು ನನ್ನ ಗೆಲವುವಲ್ಲ, ಎಲ್ಲರ ಗೆಲವು. ಅದೇನು ಅಂದ್ರೆ, ಕರ್ನಾಟದಲ್ಲಿ ಒಂದು ತಮಿಳುನಾಡು ಬಸ್ ಅಥವಾ ಒಬ್ಬ ತಮಿಳು ವ್ಯಕ್ತಿಯನ್ನ ಎಲ್ಲರೂ ಸೇರಿ ಹೊಡಿಯುತ್ತಾರೆ ಎಂಬ ವಿಡಿಯೋವನ್ನ ಅಥವಾ ಸುದ್ದಿಯನ್ನ ಎಲ್ಲ ಮಾಧ್ಯಮದವರು ದೊಡ್ಡ ದೊಡ್ಡದಾಗಿ ಪ್ರಸಾರ ಮಾಡಿ ಇಲ್ಲಿನ ಜನರಲ್ಲಿ ದ್ವೇಷ ಹುಟ್ಟುಹಾಕಿದ್ದಾರೆ. ಆದ್ರೆ, ಇಂದು ಕರ್ನಾಟಕದಲ್ಲಿ ಅಷ್ಟು ಜನ ಕನ್ನಡಿಗರು, ತಮಿಳಿಗರಿಗೂ ನೀರು ಕೊಟ್ಟಿದ್ದು ಕೆಲವೇ ಕೆಲವೇ ಮಾಧ್ಯಮಗಳು ಮಾತ್ರ ಪ್ರಸಾರ ಮಾಡಿದೆ ಹೊರತು, ಉಳಿದವರು ಈ ಸುದ್ದಿಯನ್ನ ಪ್ರಸಾರ ಮಾಡದೇ ನಿರ್ಲಕ್ಷಿಸಿದ್ದಾರೆ".

ಕನ್ನಡಿಗರು-ತಮಿಳರೂ ಒಂದೇ
"ಇದೇ ಸಮಯದಲ್ಲಿ ಕನ್ನಡಿಗರಿಗೂ ಮತ್ತು ತಮಿಳಿಗರಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆ ಜನರು ನಮಗಾಗಿ ನಿಂತಿದ್ದಾರೆ, ನೀರು ಕೊಡುವ ವಿಚಾರದಲ್ಲಿ ಕನ್ನಡಿಗರೂ ಸಿದ್ದವಾಗಿದ್ದಾರೆ, ನಾವೆಲ್ಲರೂ ಒಟ್ಟಿಗೆ ಇದ್ದೇವೆ, ಒಬ್ಬ ಸಹೋದರ, ಸಹೋದರಿಯಾಗಿಯೇ ನಾವು ನೋಡುತ್ತೇವೆ ಎಂದು ತೋರಿಸಿಕೊಟ್ಟ ಎಲ್ಲ ಜನಗಳಿಗೂ ನನ್ನ ಧನ್ಯವಾದಗಳು".

ಮಾನವೀಯತೆಗೆ ಗೆಲುವು
"ಇದು ನಮಗೆ ಸಿಕ್ಕಿರುವ ಬಹುದೊಡ್ಡ ಗೆಲವು, ಈಗ ಇವರು ಮಾಡಿರುವ ಕೆಲಸವೂ ನಮಗೆ ಒಂದು ರೀತಿಯ ಗೆಲುವೇ. ಈಗ ಯಾರು ಬೇಕಾದರೇ ಪ್ರತಿಭಟನೆ ಮಾಡಲಿ, ಇಲ್ಲಿ ಇವರು ಮಾಡಲಿ, ಅಲ್ಲಿಯೂ ಕೆಲವರು ಮಾಡಲಿ, ಯಾವುದರ ಬಗ್ಗೆಯಾದ್ರೂ ಪ್ರತಿಭಟನೆ ಮಾಡಲಿ, ನೀವೆಲ್ಲರೂ ಒಂದಾಗಿದ್ದಾರೆ ಅಲ್ವಾ, ಇದು ಒಂದು ವಿಷ್ಯ ಸಾಕು. ಇವರು ಮಾಡಬೇಕಾಗಿರುವುದು ಮಾಡಲಿ, ನಾವು ನಮ್ಮ ಮಕ್ಕಳಿಗಾಗಿ ಏನು ಮಾಡುತ್ತೇವೆ ಎಂದು ಇವರೆಲ್ಲ ನೋಡಿಯೇ ತೀರುತ್ತಾರೆ. ಆ ದೇವರು ನಮ್ಮ ಜೊತೆಯಲ್ಲಿದ್ದಾನೆ, ಮಾನವೀಯತೆ ಯಾವಾಗಲೂ ಗೆಲ್ಲುತ್ತೆ. ಜಗಳ, ಭಿನ್ನಭಿಪ್ರಾಯ ಎಲ್ಲದಕ್ಕೂ ಪರಿಹಾರವಲ್ಲ. ಪ್ರೀತಿ ಮಾತ್ರವೇ...... ಕಾದು ನೋಡಿ, ಲವ್ ಯೂ ಆಲ್, ಥ್ಯಾಂಕ್ ಯೂ. ಗಾಡ್ ಬ್ಲೆಸ್ ಯೂ".


Click it and Unblock the Notifications











