ಸುದೀಪ್-ಪ್ರಿಯಾ ದಂಪತಿಗೆ ಕೋರ್ಟ್ ನಿಂದ ಕೊನೆ ಅವಕಾಶ.!
ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿಯ ವಿಚ್ಛೇದನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೌಟುಂಬಿಕ ನ್ಯಾಯಾಲಯ ಇಬ್ಬರಿಗೂ ಮತ್ತೊಮ್ಮೆ ಕೊನೆಯ ಅವಕಾಶ ನೀಡಿದೆ. ನಿನ್ನೆ (ಜೂನ್ 14) ಸುದೀಪ್ ದಂಪತಿಯ ವಿಚ್ಛೇದನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸುದೀಪ್ ಮತ್ತು ಪ್ರಿಯಾ ದಂಪತಿಗೆ ಕೋರ್ಟ್ ಮುಂದೆ ಹಾಜರಾಗಬೇಕು ಎಂದು ಖಡಕ್ ಸೂಚನೆ ಕೊಟ್ಟಿದೆ.
ಅರ್ಜಿ ಸಲ್ಲಿಸಿದ ನಂತರ ಇದುವರೆಗೂ ಇಬ್ಬರು ಕೂಡ ಕೋರ್ಟ್ ಗೆ ಹಾಜರಾಗಿಲ್ಲ. ಪ್ರಿಯಾ ಮತ್ತು ಸುದೀಪ್ ಇಬ್ಬರ ಪರವಾಗಿ ಕೇವಲ ವಕೀಲರು ಮಾತ್ರ ಕೇಸ್ ಗೆ ಭಾಗಿಯಾಗುತ್ತಿದ್ದಾರೆ. ಹೀಗಾಗಿ, ದಂಪತಿ ಮೇಲೆ ಕೆಂಡಾಮಂಡಲರಾದ ನ್ಯಾಯಧೀಶರು ಕೋರ್ಟ್ ಗೆ ಹಾಜರಾಗಿ, ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಕೊನೆಯ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ, ಕೋರ್ಟ್ ಏನು ಹೇಳಿದೆ ಎಂದು ಮುಂದೆ ಓದಿ.....

ಮತ್ತೆ ಕೋರ್ಟ್ ಗೆ ಗೈರಾದ ದಂಪತಿ
ಜೂನ್ 14 ರಂದು ಕೋರ್ಟ್ ಗೆ ದಂಪತಿಗಳು ಇಬ್ಬರು ಹಾಜರಾಗಲೇ ಬೇಕು ಎಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಕಳೆದ ಬಾರಿ ಅರ್ಜಿ ವಿಚಾರಣೆ ನಡೆಸಿದಾಗ ಆದೇಶ ನೀಡಿತ್ತು. ಆದ್ರೆ, ಈ ಬಾರಿಯೂ ದಂಪತಿಗಳು ಹಾಜರಾಗಿಲ್ಲ. ಇದು ನ್ಯಾಯಾಲಯದ ಕೋಪಕ್ಕೆ ಗುರಿಯಾಗಿದೆ.

ಸತತ 9 ಸಲ ವಿಚಾರಣೆಗೆ ಗೈರು
ಸುದೀಪ್ ಹಾಗೂ ಪ್ರಿಯಾ ದಂಪತಿಯ ವಿಚ್ಛೇದನಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಸತತ 9 ಸಲ ವಿಚಾರಣೆ ನಡೆದಿದೆ. ಆದ್ರೆ, ಒಮ್ಮೆಯೂ ಸುದೀಪ್ ದಂಪತಿ ಬಂದಿಲ್ಲ.
ಕಿಚ್ಚ ಸುದೀಪ್ ದಂಪತಿ ವಿರುದ್ಧ ಗರಂ ಆದ ಕೌಟುಂಬಿಕ ಕೋರ್ಟ್!

ಸುದೀಪ್ ಪರ ವಕೀಲರು ಕೊಟ್ಟ ಕಾರಣ
ಸುದೀಪ್ ಗೈರು ಬಗ್ಗೆ ನ್ಯಾಯಾಲಯಕ್ಕೆ ವಿವರಣೆ ನೀಡಿದ ಸುದೀಪ್ ಪರ ವಕೀಲರು, ''ಸುದೀಪ್ ಅವರು 'ದಿ ವಿಲನ್' ಚಿತ್ರದ ಶೂಟಿಂಗ್ ಗಾಗಿ ಹೊರ ದೇಶದಲ್ಲಿದ್ದಾರೆ. ಹೀಗಾಗಿ, ಮುಂದಿನ ವಿಚಾರಣೆಗೆ ಖಂಡಿತವಾಗಿ ಕೋರ್ಟ್ ಗೆ ಹಾಜರಾಗ್ತಾರೆ'' ಎಂದಿದ್ದಾರೆ.

ಕೋರ್ಟ್ ನಿಂದ ಕೊನೆಯ ಅವಕಾಶ
ಜೂನ್ 14 ರಂದು ವಿಚ್ಛೇದನ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಆಗಸ್ಟ್ 24 ರೊಳಗೆ ಸುದೀಪ್ ದಂಪತಿ ಕೋರ್ಟ್ ಗೆ ಹಾಜರಾಗಬೇಕು, ಇಲ್ಲವಾದ್ರೆ, ನ್ಯಾಯಾಲಯವೇ ಖುದ್ದು ವಿಚಾರಣೆ ನಡೆಸಿ, ಅವರ ಮನವಿಯನ್ನ ಸ್ವೀಕರಿಸಿ ಅಂತಿಮ ತೀರ್ಪು ನೀಡಬೇಕಾಗುತ್ತೆ ಎಂದು ಎಚ್ಚರಿಸಿದೆ.

ಯಾಕೆ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ.!
ವೈಯಕ್ತಿಕ ಕಾರಣಗಳಿಂದ ಪರಸ್ಪರ ವಿಚ್ಛೇದನಕ್ಕೆ ಮುಂದಾಗಿರುವ ಸುದೀಪ್ ಮತ್ತು ಪ್ರಿಯಾ ಅವರು ನಡುವೆ, ಈಗ ಎಲ್ಲವೂ ಸರಿ ಹೋಗಿದೆ. ಇಬ್ಬರು ಅನ್ಯೂನ್ಯವಾಗಿದ್ದಾರೆ. ಮತ್ತೆ ಒಟ್ಟಾಗಿ ಜೀವನ ನಡೆಸುವ ಆಸಕ್ತಿ ಹೊಂದಿದ್ದಾರೆ. ಹೀಗಾಗಿ, ಇಬ್ಬರು ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎಂದು ಮೂಲಗಳು ಹೇಳುತ್ತಿವೆ.

ಆಗಸ್ಟ್ 24ಕ್ಕೆ ಏನಾಗುತ್ತೆ?
ಕಳೆದ ಬಾರಿಯೇ ನ್ಯಾಯಾಲಯ ಮುಕ್ತವಾಗಿ ಸೂಚಿಸಿತ್ತು. ಒಂದು ವೇಳೆ ಇಬ್ಬರು ಮತ್ತೆ ಒಟ್ಟಾಗಿ ಜೀವನ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ನ್ಯಾಯಾಲಯಕ್ಕೆ ತಿಳಿಸಿ, ಇಲ್ಲವಾದಲ್ಲಿ ಪ್ರಕರಣವನ್ನ ಇತ್ಯಾರ್ಥ ಮಾಡಿಕೊಳ್ಳಿ ಎಂದು. ಆದ್ರೆ, ಈ ಬಾರಿಯೂ ದಂಪತಿ ಹಾಜರಾಗಿಲ್ಲ. ಹೀಗಾಗಿ, ಆಗಸ್ಟ್ 24 ರಂದು ಏನಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.


Click it and Unblock the Notifications











