ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದ ನಟ ಸುದೀಪ್
ಖ್ಯಾತ ಪತ್ರಕರ್ತ, ಕಾದಂಬರಿಕಾರ, ನಟ ರವಿ ಬೆಳಗೆರೆ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಕ್ಷರ ಮಾಂತ್ರಿಕನ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಚಿತ್ರರಂಗದ ಜೊತೆ ಉತ್ತಮ ನಂಟು ಹೊಂದಿದ್ದ ರವಿ ಬೆಳಗೆರೆ ಸಿನಿ ರಂಗದ ಹಲವರಿಗೆ ಆಪ್ತರಾಗಿದ್ದರು.
ರವಿ ಬೆಳಗೆರೆ ಸಾವಿಗೆ ಹಲವು ಸಿನಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ನಟ ಸುದೀಪ್, ಜಗ್ಗೇಶ್, ಯೋಗರಾಜ್ ಭಟ್, ಸಿಂಪಲ್ ಸುನಿ ಸೇರಿದಂತೆ ಅನೇಕರು ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ನಟ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.
ಬಿಗ್ ಬಾಸ್ ನೆನಪನ್ನು ಮೆಲುಕು ಹಾಕಿರುವ ಸುದೀಪ್, ಬಿಗ್ ಬಾಸ್ ವೇದಿಕೆಯಲ್ಲಿ ರವಿ ಬೆಳಗೆರೆ ಮಾತನಾಡುತ್ತಿರುವ ಫೋಟೋವನ್ನು ಶೇರ್ ಮಾಡಿ ಈ ಕ್ಷಣ ಅತ್ಯಮೂಲ್ಯವಾದ ಕ್ಷಣವಾಗಿತ್ತು ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, 'ಕೊನೆ ಬಾರಿ ನಾನು ಅವರನ್ನು ನೋಡಿದ ಕ್ಷಣದ ಫೋಟೋ ಅತ್ಯಮೂಲ್ಯವಾಗಿರುತ್ತೆ. ಅದು ಎಲ್ಲಾ ಸ್ಪರ್ಧಿಗಳ ಪಾಲಿಗೂ ಅದ್ಭುತವಾದ ಕ್ಷಣವಾಗಿತ್ತು. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನಿಮಗೆ ನೀಡಲಿ' ಎಂದು ಹೇಳಿದ್ದಾರೆ.
ರವಿ ಬೆಳಗೆರೆ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರನ್ನು ಹಾಡಿ ಹೊಗಳಿದ್ದರು. 'ಸುದೀಪ್ ನೀವು ಕನ್ನಡದ ಅಮಿತಾಭ್ ಬಚ್ಚನ್' ಎಂದು ಹೇಳಿದ್ದರು. ರವಿ ಬೆಳಗೆರೆ ಅವರಿಗೆ ಸುದೀಪ್ ಅಂದ್ರೆ ತುಂಬಾ ಇಷ್ಟವಂತೆ. ಈ ಬಗ್ಗೆ ಬೆಳಗೆರೆ 'ಸುದೀಪ್ ನೀವು ಅಂದ್ರೆ ಇಷ್ಟ. ನಟನಾಗಿ ಮತ್ತು ಒಬ್ಬ ಮನುಷ್ಯನಾಗಿ ನನಗೆ ನೀವು ತುಂಬಾ ಇಷ್ಟ. ಈ ಮೊದಲೇ ನಾನು ಈ ಬಗ್ಗೆ ಹೇಳಿದ್ದೀನಿ. ನಾನು ಯಾರನ್ನು ಹೊಗಳುವುದಿಲ್ಲ' ಅಂತ ಸುದೀಪ್ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು.


Click it and Unblock the Notifications











