ಕೊಡಗಿನ ಸ್ಥಿತಿಗೆ ಉಪೇಂದ್ರ, ರವಿಚಂದ್ರನ್ ನೀಡಿದ ಸಲಹೆ
Recommended Video

ಪ್ರವಾಹದಿಂದ ಕೊಡಗು ಜಿಲ್ಲೆ ನಲುಗಿ ಹೋಗಿದೆ. ಸುರಿಯುತ್ತಿರುವ ಭಾರಿ ಮಳೆಯಿಂದ ಜನರ ಜೀವನ ಅಲ್ಲೋಲ ಕಲ್ಲೋಲ ಆಗಿದೆ. ಇಡೀ ಕನ್ನಡ ನಾಡಿನ ಜನತೆ ಕೊಡಗು ಮಂದಿಯ ಸಹಾಯಕ್ಕೆ ಬಂದಿದ್ದಾರೆ.
ಕನ್ನಡ ಚಿತ್ರರಂಗದ ಕೆಲ ನಟರು ಸಂತ್ರಸ್ಥರ ನೆರವಿಗೆ ಬಂದಿದ್ದಾರೆ. ಸ್ಟಾರ್ ನಟರ ಅಭಿಮಾನಿ ಸಂಘಗಳು ಸಹ ತಮ್ಮ ಕೈ ನಲ್ಲಿ ಆದ ಸಹಾಯವನ್ನು ಮಾಡುತ್ತಿವೆ. ಇತ್ತೀಚಿಗೆ ಶಿವರಾಜ್ ಕುಮಾರ್ 10 ಲಕ್ಷ ಹಾಗೂ ನಟ ಪ್ರಕಾಶ್ ರೈ 5 ಲಕ್ಷ ರೂಪಾಯಿ ನೆರವು ನೀಡಿರುವುದಾಗಿ ಹೇಳಿದ್ದಾರೆ. ನಟ ಯಶ್, ಜಗ್ಗೇಶ್ ಸೇರಿದಂತೆ ಕೆಲ ನಟರು ಅಗತ್ಯ ವಸ್ತುಗಳನ್ನು ಕಳುಹಿಸಿದ್ದಾರೆ.
ಅಂದಹಾಗೆ, ಇದೀಗ ನಟ ಉಪೇಂದ್ರ ಹಾಗೂ ರವಿಚಂದ್ರನ್ ಕೊಡಗಿನ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಇಂದು ಅವರಿಬ್ಬರ ನಟನೆಯ 'ರವಿ ಚಂದ್ರ' ಸಿನಿಮಾ ಲಾಂಚ್ ಆಗಿದ್ದು, ಈ ವೇಳೆ ಕೊಡಗಿನ ಬಗ್ಗೆ ಹೇಳಿಕೆ ನೀಡಿದ್ದಾರೆ. ಮುಂದೆ ಓದಿ...

ಪ್ರಕೃತಿ ವಿಕೋಪದ ಬಗ್ಗೆಯೇ ಒಬ್ಬ ಸಚಿವ ಇರಬೇಕು
''ಈ ರೀತಿಯ ಪರಿಸ್ಥಿತಿ ಬಂದಾಗ ಸರ್ಕಾರ ಎಲ್ಲ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಅವರಿಗೆ ಮನೆ ಮಾಡಿ ಅವರ ಜೀವನ ಮತ್ತೆ ಸರಿಯಾಗುವ ತನಕ ಸರ್ಕಾರ ಅವರ ಜೊತೆಗೆ ಇರಬೇಕು. ನನ್ನ ಪ್ರಕಾರ ಪ್ರಕೃತಿ ವಿಕೋಪದ ಬಗ್ಗೆಯೇ ಒಬ್ಬ ಸಚಿವ ಇರಬೇಕು. ಅವರು ಯಾವಾಗಲೂ ಸರ್ವ ಸಿದ್ಧರಾಗಿರಬೇಕು. ಅವರು ಇದ್ದಾರೆ ಎನ್ನುವ ನಂಬಿಕೆ ಜನರಲ್ಲಿ ಇರಬೇಕು. ನಾಳೆ ಏನಾದರೂ ಆದರೂ ಅದನ್ನು ನಿಭಾಹಿಸುವ ಶಕ್ತಿ ಅವರಲ್ಲಿ ಇರಬೇಕು'' - ಉಪೇಂದ್ರ. ನಟ, ನಿರ್ದೇಶಕ, ಯು ಪಿ ಪಿ ಪಕ್ಷದ ಅಧ್ಯಕ್ಷ

15 ದಿನದ ನಂತರ ನಿಜವಾದ ಕೆಲಸ ಶುರು ಆಗಬೇಕು
''ಈಗ ಜನರೇ ಎಲ್ಲ ಸಹಾಯ ಮಾಡುತ್ತಿದ್ದಾರೆ. ಅದು ತಪ್ಪಲ್ಲ. ಆದರೆ ಇದನ್ನು ಸರ್ಕಾರ ಸರಿಯಾಗಿ ಮಾಡಬೇಕು. ಈಗಾಗಲೇ ಅವರಿಗೆ ಬೇಕಾಗಿರುವ ಮಟ್ಟಿಗೆ ಆಹಾರ ತಲುಪಿದೆ ಎಂದು ಹೇಳುತ್ತಿದ್ದಾರೆ. ಇನ್ನು 15 ದಿನದ ನಂತರ ನಿಜವಾದ ಕೆಲಸ ಶುರು ಆಗಬೇಕು. ಅವರಿಗೆ ಇನ್ನೂ ಎಷ್ಟೋ ತೊಂದರೆಗಳು ಇವೆ. ಅದನ್ನು ಸರಿ ಮಾಡಬೇಕು. ಆ ಸಮಯದಲ್ಲಿಯೂ ಅವರ ಜೊತೆಗೆ ಕೈ ಜೋಡಿಸಬೇಕಾಗುತ್ತದೆ.'' - ಉಪೇಂದ್ರ. ನಟ, ನಿರ್ದೇಶಕ, ಯು ಪಿ ಪಿ ಪಕ್ಷದ ಅಧ್ಯಕ್ಷ

ಪರಿಹಾರಕ್ಕೆ ಆಹಾರ ಅಷ್ಟೇ ಮುಖ್ಯ ಅಲ್ಲ
''ಈ ವಿಷಯ ಎಲ್ಲರಲ್ಲಿಯೂ ನೋವು, ದುಖಃ ತಂದಿದೆ. ಅದಕ್ಕೆ ಎಲ್ಲರೂ ವೇಗವಾಗಿ ಸ್ಪಂದಿಸುತ್ತಿದ್ದಾರೆ. ಎಲ್ಲರೂ ಆಹಾರ ಕಳುಹಿಸುತ್ತಿದ್ದಾರೆ. ಆದರೆ, ಪೂರ್ಣ ಪರಿಹಾರಕ್ಕೆ ಆಹಾರ ಕಳಿಸುವುದು ಅಷ್ಟೇ ಮುಖ್ಯವಲ್ಲ. ಹೇಗೆ ಅವರಿಗೆ ಹೊಸ ಜೀವನ ಕೊಡುವುದು ಎಂಬುದನ್ನು ಯೋಚನೆ ಮಾಡಬೇಕು. ಮತ್ತೆ ಕೊಡಗನ್ನು ಕಟ್ಟಬೇಕು.'' - ರವಿಚಂದ್ರನ್, ನಟ, ನಿರ್ದೇಶಕ

ಎಲ್ಲರೂ ಒಂದಾಗುವ ಸಮಯ
''ತುಂಬ ಜನರು ಎಲ್ಲವನ್ನು ಕಳೆದುಕೊಂಡಿರುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಸಹಾಯ ಮಾಡುವ ಮನಸ್ಸು ಹೊಂದಿದ್ದಾನೆ. ಜಾತಿ, ಧರ್ಮ ಎಲ್ಲವನ್ನು ಬಿಟ್ಟು ಎಲ್ಲರೂ ಒಂದಾಗುವ ಸಮಯ ಈಗ ಬಂದಿದೆ. ಪ್ರಕೃತಿ ನಮ್ಮ ಮೇಲೆ ವಿಕೋಪ ಮಾಡಿಕೊಂಡಿದೆ. ಈಗ ಅದಕ್ಕೆ ಉತ್ತರ ನೀಡಿ, ಮತ್ತೆ ಹೊಸದಾಗಿ ಸೃಷ್ಟಿ ಮಾಡಿ ತೋರಿಸಿ. - ರವಿಚಂದ್ರನ್, ನಟ, ನಿರ್ದೇಶಕ


Click it and Unblock the Notifications











