ಕರವೇಗೆ ಗ್ಲಾಮರ್ ರಂಗುತಂದ ತಾರಾ, ಪ್ರಿಯಾ
ವರನಟ ರಾಜ್ ಕುಮಾರ್ ಹೆಸರಲ್ಲಿ ಪ್ರಮಾಣ ಸ್ವೀಕರಿಸಿ ಆಗಸ್ಟ್ 24ರಂದು ವಿಧಾನಪರಿಷತ್ ಪ್ರವೇಶಿಸಿದ ನಟಿ ಕಂ ರಾಜಕಾರಣಿ ತಾರಾ ವೇಣು ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಯ ಅಕ್ರಮ-ಸಕ್ರಮದ ಕುರಿತು ಕರ್ನಾಟಕ ಹೈಕೋರ್ಟಿನಲ್ಲಿ ಪ್ರಶ್ನಸಿ ವಿವಾದವನ್ನು ಮೈಮೇಲೆಳೆದುಕೊಂಡಿದ್ದ 'ಜಂಬದ ಹುಡುಗಿ' ಪ್ರಿಯಾ ಹಾಸನ್ ಕನ್ನಡಪರ ಹೋರಾಟಕ್ಕಾಗಿ ಸೀರೆಯ ಸೆರಗನ್ನು ಸೊಂಟಕ್ಕೆ ಸಿಗಿಸಿದ್ದಾರೆ.

ಅರ್ಥಾತ್, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ತಾರಾ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಗೌರವಾಧ್ಯಕ್ಷೆಯಾಗಿ ಮತ್ತು 'ಬಿಂದಾಸ್ ಹುಡುಗಿ', 'ರೌಡಿ ರಾಣಿ', 'ಗಂಡುಬೀರಿ' ಪ್ರಿಯಾ ಹಾಸನ್ ಅವರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರ ಸಮ್ಮುಖದಲ್ಲಿ ನಟಿಯರಿಬ್ಬರು ಶನಿವಾರ ಅಧಿಕಾರ ಸ್ವೀಕರಿಸಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆಯೂ ಆಗಿರುವ ತಾರಾ ವೇಣು ಅವರು, ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷೆಯಾಗಿ ಸೇರಿರುವುದು ತನ್ನ ತವರುಮನೆಗೆ ಬಂದಂತಾಗಿದೆ. ಕನ್ನಡಪರ ಹೋರಾಟಕ್ಕಾಗಿ ತನ್ನ ಬೆಂಬಲ ಎಂದಿಗೂ ಇರುತ್ತದೆ. ಸಮಾಜದ ಹಿತಕ್ಕಾಗಿ ಮತ್ತು ಅಭ್ಯುಯದಕ್ಕಾಗಿ ಮಹಿಳಾಮಣಿಗಳು ಹೋರಾಟಕ್ಕೆ ಇಳಿಯಬೇಕಾಗಿದೆ ಎಂದು ತಮ್ಮ ಎಂದಿನ ಶೈಲಿಯಲ್ಲಿ ಪುಟ್ಟ ಭಾಷಣ ಮಾಡಿದರು.
'ಲೇಡಿ ರೆಬೆಲ್ ಸ್ಟಾರ್' ಎಂದೇ ಖ್ಯಾತಿ ಗಳಿಸಿರುವ ಪ್ರಿಯಾ ಹಾಸನ್ ಅವರು, ನಮ್ಮ ಮಣ್ಣಿನ ಭಾಷೆ, ನೀರು ಮತ್ತು ನೆಲಕ್ಕಾಗಿ ನಿರಂತರವಾಗಿ ಹೋರಾಡುತ್ತಿರಬೇಕು. ಹೋರಾಟ ಮಾಡುವ ಸಂದರ್ಭ ಬಂದಾಗ ಮಹಿಳೆಯರು ಹಿಂಜರಿಯಬಾರದು. ಹೋರಾಟಕ್ಕೆ ಮಹಿಳೆಯರು ಸಹಕರಿಸಿದರೆ ಮಾತ್ರ ಯಶಸ್ಸು ಸಿಗಲು ಸಾಧ್ಯ ಎಂದು ನೆರೆದಿದ್ದ ಮಹಿಳೆಯರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು, ತಮ್ಮ ವಾಗ್ದಾಳಿಯನ್ನು 'ಬರದ ಅಧ್ಯಯನ'ಕ್ಕೆಂದು ವಿದೇಶಗಳಿಗೆ ತೆರಳಿರುವ ರಾಜಕಾರಣಿ ಮತ್ತು ಅಧಿಕಾರಗಳ ಮೇಲೆ ಹರಿಯಬಿಟ್ಟರು. ಸಮಾಜದ ಬಗ್ಗೆ ಇವರಿಗೆ ಎಳ್ಳಷ್ಟಾದರೂ ಕಾಳಜಿ ಇದ್ದರೆ ವಿದೇಶ ಪ್ರವಾಸ ಕೈಗೊಳ್ಳುತ್ತಿರಲಿಲ್ಲ. ಇಂಥವರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


Click it and Unblock the Notifications











