ಚಿತ್ರ ನಿರ್ಮಾಣಕ್ಕೆ ಮೋಹಕ ತಾರೆ ಜಯಪ್ರದಾ

ಈಗ ಜಯಪ್ರದಾ ಅವರು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮುಂಬೈನಲ್ಲಿ ತಮ್ಮ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಅಲ್ಲಿಂದಲೇ ಚಿತ್ರಗಳನ್ನು ನಿರ್ಮಿಸಲಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿ ಇದಕ್ಕಾಗಿ ಕಚೇರಿಯನ್ನೂ ತೆರೆದಿದ್ದಾರೆ.
ಗುರ್ ಗಾಂವ್ ನಲ್ಲಿ ಹೊಸದಾಗಿ ಫ್ಲಾಟ್ ಒಂದನ್ನೂ ಕೊಂಡಿರುವ ಜಯಪ್ರದಾ ಹಿಂದಿ ಚಿತ್ರರಂಗದ ಕಡೆಗೆ ಸಂಪೂರ್ಣ ತೊಡಗಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು. ಈಗಾಗಲೆ ಬಾಲಿವುಡ್ ನ ಹಲವಾರು ನಿರ್ದೇಶಕರ ಜೊತೆ ಮಾತುಕತೆಯೂ ಆಗಿದೆ.
ತಮ್ಮ ಚೊಚ್ಚಲ ನಿರ್ಮಾಣದ ಚಿತ್ರವನ್ನು ದಿನಕರ್ ಕಪೂರ್ ನಿರ್ದೇಶಿಸಲಿದ್ದಾರೆ. ಆದರೆ ಇದು ಹಿಂದಿ ಚಿತ್ರವಲ್ಲ, ಭೋಜ್ ಪುರಿ ಭಾಷೆಯಲ್ಲಿ ಮೂಡಿಬರಲಿದೆ. ಇದಾದ ಬಳಿಕ ಪೂರ್ಣ ಪ್ರಮಾಣದಲ್ಲಿ ಹಿಂದಿ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.
ಕಪೂರ್ ನಿರ್ದೇಶಿಸಲಿರುವ ಚಿತ್ರವು ತೆಲುಗಿನ 'ಮಾತೃ ದೇವೋಭವ' (1993) ಎಂಬ ಚಿತ್ರದ ರೀಮೇಕ್. ಈ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆದಿರುವ ಜಯಪ್ರದಾ, ಈ ಚಿತ್ರದಲ್ಲಿ ಸ್ವತಃ ಅಭಿನಯಿಸಲಿದ್ದಾರೆ. ಚಿತ್ರದಲ್ಲಿ ಮನೋಜ್ ತಿವಾರಿ ಕೂಡ ಅಭಿನಯಿಸಲಿದ್ದಾರೆ.
ಕುಡುಕ ಗಂಡನೊಬ್ಬನ ಕತೆ ಇದಾಗಿದೆ. ಮೊಟ್ಟ ಮೊದಲ ಬಾರಿಗೆ ಕುಡುಕನಾಗಿ ಅಭಿನಯಿಸುತ್ತಿರುವ ಬಗ್ಗೆ ಸಖತ್ ಎಕ್ಸೈಟ್ ಆಗುತ್ತಿದೆ ಎಂದಿದ್ದಾರೆ ಮನೋಜ್. ಪ್ರಸ್ತುತ ಜಯಪ್ರದಾ ಅವರು ದರ್ಶನ್ ಅಭಿನಯದ ಭಾರಿ ಬಜೆಟ್ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಅಭಿನಯಿಸಿರುವುದು ಗೊತ್ತೇ ಇದೆ. (ಏಜೆನ್ಸೀಸ್)


Click it and Unblock the Notifications











