ನಟಿ ಮಾಲಾಶ್ರೀ ಮೇಲೆ ಆಸಿಡ್ ದಾಳಿ ಬೆದರಿಕೆ
ತೆರೆಮೇಲೆ ಖತರ್ನಾಕ್ ಖೇಡಿಗಳನ್ನ ಬಗ್ಗು ಬಡಿಯುವ ನಟಿ ಮಾಲಾಶ್ರೀ ಭಯಭೀತರಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಮ್ಮ ಮುಖಕ್ಕೆ ಆಸಿಡ್ ಹಾಕುವ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಮಾಲಾಶ್ರೀ, ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದು ಮಾಲಾಶ್ರೀ ಅಭಿನಯಿಸುತ್ತಿರುವ ಮುಂದಿನ ಚಿತ್ರದ ಶೂಟಿಂಗ್ ಅಲ್ಲ. ಅಪ್ಪಟ ರಿಯಲ್ ಸುದ್ದಿ. ಕನಸಿನ ರಾಣಿ ಮಾಲಾಶ್ರೀ ಮೇಲೆ ಆಸಿಡ್ ದಾಳಿ ನಡೆಸುವ ಬೆದರಿಕೆ ಬಂದೆರಗಿದೆ. ನಟಿ ಮಾಲಾಶ್ರೀ ಮೇಲೆ ಜೀವ ಬೆದರಿಕೆ ಹಾಕಿರುವವರು ಚೆನ್ನೈ ಮೂಲದ ಮೂವರು.

ಚೆನ್ನೈನಲ್ಲಿ ನಟಿ ಮಾಲಾಶ್ರೀ ಮತ್ತು ಪತಿ ರಾಮು ಒಡೆತನದಲ್ಲಿ ಒಂದು ಮಾಲ್ ಮತ್ತು ಅಪಾರ್ಟ್ಮೆಂಟ್ ಇದೆ. ಬಹುತೇಕ ಅವರು ಬೆಂಗಳೂರಿನಲ್ಲಿ ಸೆಟಲ್ ಆಗಿರುವುದರಿಂದ ಆಗೊಮ್ಮೆ ಈಗೊಮ್ಮೆ ಚೆನ್ನೈಗೆ ಹೋಗಿ ಬರುತ್ತಾರೆ.
ಹೀಗಾಗಿ, ಮಾಲ್ ಮತ್ತು ಅಪಾರ್ಟ್ಮೆಂಟ್ ಉಸ್ತುವಾರಿಯನ್ನ ಚೆನ್ನೈ ಮೂಲದ ಮೂವರಿಗೆ ವಹಿಸಿದ್ದಾರೆ. ಇತ್ತೀಚೆಗಷ್ಟೇ ಮಾಲಾಶ್ರೀ ಕುಟುಂಬ ಚೆನ್ನೈಗೆ ತೆರಳಿದ್ದಾಗ, ಆ ಮೂವರು, ತಿಂಗಳಿಗೆ 2 ಲಕ್ಷ ರೂಪಾಯಿಯನ್ನ ಮೇನ್ಟೆನೆನ್ಸ್ ಚಾರ್ಜ್ ಆಗಿ ನೀಡಬೇಕೆನ್ನುವ ಬೇಡಿಕೆ ಇಟ್ಟಿದ್ದಾರೆ. [ಲಾಂಗ್ ಎಕ್ಸ್ ಪರ್ಟ್ ಶಿವಣ್ಣನನ್ನು ಮೀರಿಸಿದ ಮಾಲಾಶ್ರೀ!]
ಇದಕ್ಕೆ ಮಾಲಾಶ್ರೀ ಸುತಾರಂ ಒಪ್ಪಿಕೊಂಡಿಲ್ಲ. ಇದರಿಂದ ಮಾತಿಗೆ ಮಾತು ಬೆಳೆದು ಮಾಲಾಶ್ರೀ ಮೇಲೆ ಆಸಿಡ್ ಹಾಕುವುದಾಗಿ ಚೆನ್ನೈ ಮೂಲದವರು ಬೆದರಿಸಿದ್ದಾರೆ. ಇದರಿಂದ ಚೆನ್ನೈ ಬಿಟ್ಟು ಬೆಂಗಳೂರಿಗೆ ವಾಪಸ್ ಆದ ತಕ್ಷಣ ಮಾಲಾಶ್ರೀ ಹೈ ಗ್ರೌಂಡ್ಸ್ ಪೊಲೀಸ್ ಠಾಣಿಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.


Click it and Unblock the Notifications











