ಕೊರೊನಾ ವೈರಸ್ ಭಯ: ಗುಣಮುಖರಾದ ಸುಮಲತಾ ಅಂಬರೀಷ್ ಹೇಳಿದ ಕಿವಿಮಾತು
ನಟಿ, ಸಂಸದೆ ಸುಮಲತಾ ಅಂಬರೀಷ್ ಇತ್ತೀಚೆಗೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಸಣ್ಣ ಪುಟ್ಟ ಲಕ್ಷಣಗಳ ಕಾರಣದಿಂದ ಅವರು ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲಿಯೇ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
Recommended Video
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಚೇತರಿಸಿಕೊಂಡಿರುವ ಸುಮಲತಾ, ಜನರಲ್ಲಿ ಇದರ ಬಗ್ಗೆ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ವಿಡಿಯೋವೊಂದರ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೊರೊನಾ ಗೆಲ್ಲುವ ಮುನ್ನ ಮೊದಲು ಅದರ ಭಯವನ್ನು ಗೆಲ್ಲಿ ಎಂದು ಅವರು ಕಿವಿಮಾತು ಹೇಳಿದ್ದಾರೆ. ತಾವು ಕೊರೊನಾ ವೈರಸ್ ಅನ್ನು ಯಾವ ರೀತಿ ಎದುರಿಸಿದ್ದೇನೆ ಎಂಬುದನ್ನು ವಿವರಿಸಿದ್ದಾರೆ. ಅವರು ಈ ವಿಡಿಯೋದಲ್ಲಿ ಹೇಳಿದ್ದೇನು? ಮುಂದೆ ಓದಿ.

ಕೊರೊನಾದಿಂದ ಗುಣಮುಖಳಾಗಿದ್ದೇನೆ
ಅಂಬರೀಷ್ ನನಗೆ ಯಾವತ್ತೂ ಒಂದು ಮಾತು ಹೇಳೋರು, ಕಷ್ಟ ಎನ್ನುವುದು ಹೇಗೆ ಯಾವಾಗ ಬಂದರೂ ಅದನ್ನು ಧೈರ್ಯವಾಗಿ ಎದುರಿಸಿ ಹೋರಾಡಬೇಕು ಎಂದು. ಇತ್ತೀಚೆಗೆ ನನಗೂ ಒಂದು ಕಷ್ಟ ಬಂದಿತ್ತು. ಅದರ ಹೆಸರು ಕೋವಿಡ್ 19. ಹೌದು, ನಾನು ಕೊರೊನಾ ಸೋಂಕಿತೆ, ಈಗ ಸಂಪೂರ್ಣ ಗುಣಮುಖಳಾಗಿದ್ದೇನೆ.

ಎಲ್ಲರಂತೆ ನನಗೂ ಭಯವಿತ್ತು
ಹಾಗೆ ನೋಡಿದರೆ, ನನ್ನ ಜೀವನದಲ್ಲಿ ಎಷ್ಟೋ ಕಷ್ಟ ಎದುರಿಸಿದ್ದೇನೆ. ಅದೆಕ್ಕೆಲ್ಲಾ ಹೋಲಿಸಿದರೆ ಇದು ಅಂತಹ ಕಷ್ಟ ಅಲ್ಲ ಎನಿಸುತ್ತದೆ. ಆದರೂ ಕೋವಿಡ್ ಪಾಸಿಟಿವ್ ಎಂದು ಮೊದಲು ರಿಸಲ್ಟ್ ಬಂದಾಗ ಎಲ್ಲರಂತೆ ಭಯ ಗೊಂದಲ. ಏನಾಗಿಬಿಡುತ್ತದೆ ಎಂಬುದು ಕಾಡುತ್ತಿತ್ತು. ನನಗೆ ಇರುವ ಜವಾಬ್ದಾರಿ, ನನ್ನ ಸುತ್ತಮುತ್ತ ಫ್ಯಾಮಿಲಿಯನ್ನು ಹೇಗೆ ನಿಭಾಯಿಸಬಹುದು ಎನ್ನುವ ಗೊಂದಲ, ಒಂದಷ್ಟು ಭಯ ಎಲ್ಲರ ಹಾಗೆ ನನಗೂ ಇತ್ತು.

ಸ್ವಯಂ ದಿಗ್ಬಂಧನಕ್ಕೆ ಒಳಗಾದೆ
ಮೊದಲು ಮಾಡಬೇಕಿದ್ದು ನನ್ನಲ್ಲಿ ನಾನು ಧೈರ್ಯ ತುಂಬಿಸಿಕೊಳ್ಳುವ ಕೆಲಸ. ಆ ಯೋಚನೆ ಬಂದ ಮೇಲೆ ವೈದ್ಯರನ್ನು ಸಂರ್ಪಕಿಸಿದೆ. ಮೊದಲ ಹೆಜ್ಜೆ, ಜ್ವರ ಬಂದಾಗ ಸ್ವ್ಯಾಬ್ ಟೆಸ್ಟ್ಗೆ ಒಳಗಾದೆ. ವರದಿ ಪಾಸಿಟಿವ್ ಎಂದು ಬಂದಿತ್ತು. ಆರೋಗ್ಯ ತಪ್ಪಿದ ಸಂದರ್ಭದಿಂದಲೇ ವೈದ್ಯರ ಸಲಹೆ ಮೇರೆಗೆ ಸ್ವಯಂ ಐಸೋಲೇಷನ್ ಆಗಿದ್ದೆ. ಮುಂದಿನ ಜವಾಬ್ದಾರಿ ನನ್ನ ಜತೆ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ವಿಷಯ ತಿಳಿಸಬೇಕಿತ್ತು. ಸಾಮಾಜಿಕ ಜಾಲತಾಣ, ಫೋನ್ ಮೂಲಕ ಎಲ್ಲರಿಗೂ ವಿಷಯ ತಿಳಿಸಿದೆ. ಇದು ನನ್ನ ಜವಾಬ್ದಾರಿಯಾಗಿತ್ತು.

ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ
ಬಳಿಕ ನನ್ನ ಯುದ್ಧ ಶುರುವಾಯ್ತು. ಮನೆಯ ಕೊಠಡಿಯೊಂದರಲ್ಲಿ ಕ್ವಾರೆಂಟೈನ್ ಆಗಿದ್ದೆ. ಮನೆ ಬಿಟ್ಟು ಎಲ್ಲೂ ಹೊರಬರಲಿಲ್ಲ. ಲಕ್ಷಣಗಳು ಲಘುವಾಗಿದ್ದರಿಂದ ಮನೆಯಲ್ಲಿಯೇ ಇಡಿ ಎಂದು ವೈದ್ಯರು ತಿಳಿಸಿದ್ದರು. ವೈದ್ಯರ ಸಲಹೆಗಳನ್ನು ತಪ್ಪದೆ ಪಾಲಿಸಬೇಕು. ಅವರು ಹೇಳಿದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ. ಯೋಗ, ಪ್ರಾಣಾಯಾಮಗಳನ್ನು ಮಾಡುತ್ತಿದ್ದೆ.

ಜನರಿಗೆ ಚಿರ ಋಣಿ
ಇವುಗಳ ಜತೆ ಸಾಂಪ್ರದಾಯಿಕ ಔಷಧಗಳನ್ನೂ ತೆಗೆದುಕೊಳ್ಳುತ್ತಿದ್ದೆ. ತುಳಸಿ ನೀರು, ಕಷಾಯಗಳನ್ನು ತೆಗೆದುಕೊಳ್ಳುತ್ತಿದ್ದೆ. ನಾನು ಹುಷಾರಾಗಲೆಂದು ಪ್ರೀತಿಯ ಜನ ಆಶೀರ್ವಾದ ಮಾಡಿದರು. ಸಾವಿರಾರು ಲಕ್ಷಾಂತರ ಜನ ಹಾರೈಸಿದರು. ಪೂಜೆಗಳನ್ನು ಸಲ್ಲಿಸಿದರು. ಅವರ ಪ್ರೀತಿಗೆ ಚಿರರುಣಿ. ಇನ್ನು ಮಗ ಅಭಿಷೇಕ್, ಚಿಕ್ಕಂದಿನಲ್ಲಿ ಅವನನ್ನು ನಾನು ಹೇಗೆ ನೋಡಿಕೊಂಡೆನೋ, ಹಾಗೆಯೇ ದಿನವೂ ಫೋನ್ ಮಾಡಿ ಧೈರ್ಯ ತುಂಬುತ್ತಿದ್ದ. ಒಂದೇ ಮನೆಯಲ್ಲಿ ಇದ್ದರೂ ಪ್ರತಿ ದಿನ ಫೋನ್ನಲ್ಲಿ ಮಾತಾಡುತ್ತಿದ್ದೆವು.

ಅನುಕಂಪದಿಂದ ನೋಡಿ
ನಾನು ಕೊರೊನಾವನ್ನು ಸೋಲಿಸಿದ್ದೇನೆ. ನಾನೀಗ ಸಂಪೂರ್ಣ ಹುಷಾರಾಗಿದ್ದೇನೆ. ಈ ಕೊರೊನಾ ವೈರಸ್ ಒಂದಷ್ಟು ತಿಂಗಳಿನಿಂದ ಎಲ್ಲರ ನೆಮ್ಮದಿ ಹಾಳು ಮಾಡಿದೆ. ಕೊರೊನಾ ಬರುವುದು ಸಾಮಾಜಿಕ ಅಪರಾಧ ಅಲ್ಲ. ಹಾಗೆ ಬಂದ ರೋಗಿಗಳನ್ನು ಕೆಟ್ಟದಾಗಿ ನೋಡುವುದು ತಪ್ಪು. ಕೊರೊನಾ ಬಂದಿದೆ, ಹೋರಾಡಬೇಕು. ಕೊರೊನಾ ಪಾಸಿಟವ್ ಇರುವವರನ್ನು ಸ್ವಲ್ಪ ಅನುಕಂಪ, ಒಳ್ಳೆಯ ಮನಸಿಂದ ಅರ್ಥ ಮಾಡಿಕೊಂಡು ಸ್ವೀಕರಿಸಬೇಕು. ಭಯದಿಂದ ಯಾರೂ ಏನೂ ಸಾಧಿಸಿಲ್ಲ. ಧೈರ್ಯವಾಗಿದ್ದರೆ ಎಲ್ಲರೂ ಮಹಾಮಾರಿಯಿಂದ ವಿಮುಕ್ತರಾಗುತ್ತೇವೆ ಎಚ್ಚರಿಕೆಯಿಂದ ಇರಿ. ಭಯ ಪಡಬೇಡಿ. ಆತಂಕ ಪಡಬೇಡಿ ಎಂದು ಸುಮಲತಾ ಸಲಹೆ ನೀಡಿದ್ದಾರೆ.


Click it and Unblock the Notifications











