ವಿವಾದದ ಕೇಂದ್ರಬಿಂದು - ಯಾರೀ ಡಾ.ಸುರೇಶ್ ಶರ್ಮಾ?
ಡಾ.ಸುರೇಶ್ ಶರ್ಮಾ....ಅಂದ ತಕ್ಷಣ ಈಗ ಎಲ್ಲರಿಗೂ ಥಟ್ ಅಂತ ನೆನಪಾಗುವುದು ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಒಂದು ಕೋಟಿ ರೂಪಾಯಿ ವಿವಾದ.
ಒಂದು ಕೋಟಿ ರೂಪಾಯಿ ಸಾಲ ಕೊಟ್ಟು ಈಗ ಗಾಂಧಿನಗರದಲ್ಲಿ ಬ್ರೇಕಿಂಗ್ ನ್ಯೂಸ್ ಮಾಡಿರುವ ಡಾ.ಸುರೇಶ್ ಶರ್ಮಾ ಯಾರು? ಈ ಡೌಟ್ ನಿಮ್ಮನ್ನ ಕಾಡಿರಬಹುದು.
ಆಗೊಮ್ಮೆ ಈಗೊಮ್ಮೆ ಕೆಲ ಚಿತ್ರಗಳಲ್ಲಿ ಡಾ.ಸುರೇಶ್ ಶರ್ಮಾ ಅವರನ್ನ ನೀವು ನೋಡಿರಲೂಬಹುದು. ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಡಾ.ಸುರೇಶ್ ಶರ್ಮಾ, ಒಂದು ಕೋಟಿ ಸಾಲ ಕೊಡುವಷ್ಟು ಶ್ರೀಮಂತ ವ್ಯಕ್ತಿನಾ? ಅಸಲಿಗೆ ಅವರ ಹಿನ್ನಲೆ ಏನು? ಈ ಎಲ್ಲಾ ಪ್ರಶ್ನೆಗಳಿಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಉತ್ತರ ಕಂಡುಕೊಂಡಿದೆ. ಮುಂದೆ ಓದಿ.....

25 ವರ್ಷಗಳಿಂದ ಚಿತ್ರರಂಗದ ಒಡನಾಟ
ನಂಬುವುದಕ್ಕೆ ಕೊಂಚ ಕಷ್ಟವಾದರೂ, ಇದೇ ಸತ್ಯ. ಡಾ.ಸುರೇಶ್ ಶರ್ಮಾ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಸುಮಾರು 25 ವರ್ಷಗಳ ಹಿಂದೆ. 'ರಣರಂಗ' ಸೇರಿದಂತೆ ಹಲವಾರು ಚಿತ್ರಗಳಿಗೆ ಕಥೆ ರಚಿಸಿದ್ದ ಎನ್.ಟಿ.ಜಯರಾಮ ರೆಡ್ಡಿ, ಡಾ.ಸುರೇಶ್ ಶರ್ಮಾ ಅವರನ್ನ ಚಿತ್ರರಂಗಕ್ಕೆ ಪರಿಚಯಿಸಿದರು. [ಡಾ.ಸುರೇಶ್ ಶರ್ಮಾ ಸುಳ್ಳು ಹೇಳುತ್ತಿದ್ದಾರಾ?]

ಕಾಲೇಜು ದಿನಗಳಿಂದಲೂ ನಟನೆ ಆಸಕ್ತಿ
ಕಾಲೇಜಿನಲ್ಲಿ ಓದುವಾಗ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಡಾ.ಸುರೇಶ್ ಶರ್ಮಾ ಅವರಿಗೆ ನಟನೆಯ ಗೀಳು ಇತ್ತು. ಹಾಗೇ, ಎನ್.ಟಿ.ಜಯರಾಮ ರೆಡ್ಡಿ ಕೂಡ ಅವರ ಸ್ನೇಹಿತರಾಗಿದ್ದರು. ಅವರ ಸಹಕಾರದ ಮೇರೆಗೆ ಚಿತ್ರರಂಗಕ್ಕೆ ಡಾ.ಸುರೇಶ್ ಶರ್ಮಾ ಕಾಲಿಟ್ಟರು. [ಕೋಟಿ ರೂಪಾಯಿ ಪಂಗನಾಮ ಹಾಕಿದ ಪೂಜಾಗಾಂಧಿ!?]

ಎಸ್.ನಾರಾಯಣ್ ಜೊತೆ ಒಡನಾಟ
ಡಾ.ಸುರೇಶ್ ಶರ್ಮಾ ಹೆಚ್ಚಾಗಿ ಕಾಣಿಸಿಕೊಂಡಿದ್ದು ಎಸ್.ನಾರಾಯಣ್ ಅವರ ಸಿನಿಮಾಗಳಲ್ಲಿ. 'ತವರಿನ ತೊಟ್ಟಿಲು', 'ವೀರಪ್ಪ ನಾಯ್ಕ', 'ಶಬ್ದವೇಧಿ', 'ಭಾಮ ಸತ್ಯಭಾಮ' ಸೇರಿದಂತೆ ಎಸ್.ನಾರಾಯಣ್ ನಟಿಸಿ, ನಿರ್ದೇಶಿಸಿರುವ ಹಲವಾರು ಚಿತ್ರಗಳಲ್ಲಿ ಡಾ.ಸುರೇಶ್ ಶರ್ಮಾ ಅಭಿನಯಿಸಿದ್ದಾರೆ. [ಪೂಜಾ ಗಾಂಧಿ ಮುಚ್ಚಿಡುತ್ತಿರುವ 'ಆ' ವಿಷಯವೇನು?]

ಸೀರಿಯಲ್ ನಲ್ಲೂ ಅಭಿನಯ
ಎಸ್.ನಾರಾಯಣ್ ಸಾರಥ್ಯದಲ್ಲಿ ಮೂಡಿಬಂದ 'ಪಾರ್ವತಿ' ಸೀರಿಯಲ್ ನಲ್ಲಿ ಡಾ.ಸುರೇಶ್ ಶರ್ಮಾ ಪ್ರಧಾನ ಭೂಮಿಕೆಯಲ್ಲಿದ್ದರು.

ಹಲವರಿಗೆ ಆರ್ಥಿಕ ಸಹಾಯ
ಎಸ್.ನಾರಾಯಣ್ ಸೇರಿದಂತೆ ಹಲವಾರು ನಿರ್ದೇಶಕ, ನಿರ್ಮಾಪಕ ಮತ್ತು ತಾಂತ್ರಿಕ ವರ್ಗದವರಿಗೆ ಡಾ.ಸುರೇಶ್ ಶರ್ಮಾ ಆರ್ಥಿಕ ಸಹಾಯ ಮಾಡಿದ್ದಾರೆ. [ಆ ಒಂದು ಕೋಟಿ ರೂಪಾಯಿ ಎಲ್ಲಿ ಹೋಯ್ತು.?]

ಸುರೇಶ್ ಶರ್ಮಾ 'ಡಾಕ್ಟರ್'!
ಮೂಲತಃ ಸುರೇಶ್ ಶರ್ಮಾ ವೈದ್ಯ. ಪ್ರಾಣಿಗಳ ಆರೋಗ್ಯಕ್ಕೆ ಸಂಬಂಧಪಟ್ಟ ಔಷಧಿ ತಯಾರಿಕಾ ಸಂಸ್ಥೆ 'VESPER' ಸಮೂಹಕ್ಕೆ ಡಾ.ಸುರೇಶ್ ಶರ್ಮಾ ಹೆಡ್. ಬೆಂಗಳೂರಿನ ವಿದ್ಯಾರಣ್ಯಪುರ ಬಳಿಯ ಸಿಂಗಾಪುರದಲ್ಲಿ 'VESPER' ಸಂಸ್ಥೆಯನ್ನ 1978ರಲ್ಲಿ ಡಾ.ಸುರೇಶ್ ಶರ್ಮಾ ಸ್ಥಾಪಿಸಿದರು. ವೈದ್ಯಕೀಯ ವಲಯದಲ್ಲಿ ತಮ್ಮ ಔಷಧಿ ಉತ್ಪನ್ನಗಳ ಮೂಲಕ ಡಾ.ಸುರೇಶ್ ಶರ್ಮಾ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಭಾರತದಾದ್ಯಂತ 'VESPER' ಔಷಧಿ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ.

ಶ್ರೀಮಂತ ಕುಳ
ವೈದ್ಯ ವೃತ್ತಿಯಲ್ಲಿರುವ ಡಾ.ಸುರೇಶ್ ಶರ್ಮಾ ಶ್ರೀಮಂತ ಕುಳ. ಸ್ವಲ್ಪ ನಟನೆಯ ಹುಚ್ಚು ಇರುವ ಸುರೇಶ್ ಶರ್ಮಾ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ತಮ್ಮ ಪುತ್ರ ಧ್ರುವ ಶರ್ಮಾ ರನ್ನೂ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. [ನಟಿ ಪೂಜಾ ವಿರುದ್ಧ ಸುರೇಶ್ ಶರ್ಮಾ ನೀಡಿರುವ ದೂರಿನಲ್ಲೇನಿದೆ?]

ಧ್ರುವ ಶರ್ಮಾ ತಂದೆ
ಕಿವಿ ಕೇಳಿಸದೆ, ಮಾತನಾಡುವುದಕ್ಕೆ ಬಾರದೆ ಇದ್ದರೂ ನಟನೆಯಲ್ಲಿ ಸೈ ಎನಿಸಿಕೊಂಡಿರುವ ಪ್ರತಿಭಾವಂತ ಧ್ರುವ ಶರ್ಮಾ. ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ದೋಜರ್ಸ್ ಪರವಾಗಿ ಆಡಿ ಕಿಚ್ಚ ಸುದೀಪ್ ರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಧ್ರುವ ಶರ್ಮಾ ತಂದೆ ಈ ಡಾ.ಸುರೇಶ್ ಶರ್ಮಾ.

ಮಗನಿಗಾಗಿ ಚಿತ್ರ ನಿರ್ಮಿಸಿದರು
ಪುತ್ರ ಧ್ರುವ ಶರ್ಮಾ ಅವರನ್ನ 'ಸ್ನೇಹಾಂಜಲಿ' ಚಿತ್ರದ ಮುಖಾಂತರ ಪರಿಚಯಿಸಿದ ಸುರೇಶ್ ಶರ್ಮಾ, ಮಗನಿಗಾಗಿ ಕನ್ನಡ ಮತ್ತು ಮಲೆಯಾಳಂನಲ್ಲಿ 'ಹಿಟ್ ಲಿಸ್ಟ್' ಅನ್ನುವ ಚಿತ್ರ ನಿರ್ಮಾಣ ಮಾಡಿದರು. ಪುತ್ರಿ ರೂಬಿ ಹೆಸರಲ್ಲಿ 'Ruby Cinekraft' ಬ್ಯಾನರ್ ನಡಿ ಡಾ.ಸುರೇಶ್ ಶರ್ಮಾ ನಿರ್ಮಾಪಕನಾದರು.

ಅನೇಕ ಚಿತ್ರಗಳಿಗೆ ಫೈನಾನ್ಶಿಯರ್
ಪೂಜಾ ಗಾಂಧಿ ಅಭಿನಯದ 'ತಿಪ್ಪಜ್ಜಿ ಸರ್ಕಲ್' ಸೇರಿದಂತೆ ಅನೇಕ ಕನ್ನಡ ಚಿತ್ರಗಳಿಗೆ ಡಾ.ಸುರೇಶ್ ಶರ್ಮಾ ಫೈನಾನ್ಸ್ ಮಾಡಿದ್ದಾರೆ. ಅಲ್ಲದೇ, 'ತಿಪ್ಪಜ್ಜಿ ಸರ್ಕಲ್' ಚಿತ್ರದಲ್ಲಿ ಸಾಹುಕಾರನ ಪಾತ್ರ ಮಾಡಿದ್ದಾರೆ. ಅದೇ ಚಿತ್ರದ ಮೂಲಕ ಡಾ.ಸುರೇಶ್ ಶರ್ಮಾ ಅವರಿಗೆ ಪೂಜಾ ಗಾಂಧಿ ಪರಿಚಯವಾಗಿದ್ದು. ಆಮೇಲಿನ ಕಥೆ ನಿಮಗೆ ಗೊತ್ತಲ್ಲಾ.!?


Click it and Unblock the Notifications











