ಐಟಂ ಹಾಡಿಗೆ ಬಂದ ಪಲ್ಲಕ್ಕಿ ತಾರೆ ರಮಣಿತು ಚೌಧರಿ
ನಟ ರಮೇಶ್ ಅರವಿಂದ್ ಜೊತೆಗಿನ 'ಪ್ರೀತಿಯಿಂದ ರಮೇಶ್' ಚಿತ್ರದ ಬಳಿಕ ರಮಣಿತು ಚೌಧರಿ ಗಾಂಧಿನಗರದಿಂದ ಕಾಣೆಯಾಗಿದ್ದರು. ಈಗ ಐಟಂ ಹಾಡಿನ ಮೂಲಕ ಮತ್ತೆ ಗಾಂಧಿನಗರಕ್ಕೆ ಅಡಿಯಿಡುತ್ತಿದ್ದಾರೆ. ಇದು ಆಕೆಯ ಸೆಕೆಂಡ್ ಇನ್ನಿಂಗ್ಸ್.
"ನಾಯಕಿ ಪಾತ್ರಕ್ಕಿಂತಲೂ ಐಟಂ ಹಾಡಿಗೆ ಹೆಚ್ಚಿನ ಸಂಭಾವನೆ ಸಿಗುತ್ತದೆ. ಹಾಗಾಗಿ ನಾಯಕಿ ಪಾತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ಐಟಂ ಹಾಡಿಗೆ ಅವಕಾಶ ಬಂದಿದೆ. ಕೂಡಲೆ ಸಹಿ ಹಾಕಿದ್ದೇನೆ" ಎಂದಿದ್ದಾರೆ ರಮಣೀತೋ ಚೌದರಿ.
ಇನ್ನು 'ಅಗಮ್ಯ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಉಮೇಶ್ ಗೌಡ. ಇವರು ಬಯೋಕಾನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚಲನಚಿತ್ರ ನಿರ್ದೇಶನ ಹಾಗೂ ತಂತ್ರಜ್ಞಾನ ಕೋರ್ಸ್ ಮಾಡಿ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ದಾದಾಗಿರಿ, ಪಯಣ, ಸಂಗಾತಿ ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿದೆ.
ತಮ್ಮ ಚಿತ್ರದ ಬಗ್ಗೆ ವಿವರ ನೀಡಿರುವ ಉಮೇಶ್, ಇದೊಂದು ದೆವ್ವ ಭೂತದ ಕತೆ. ಒಂದು ಮನೆಗೆ ಕಾಲೇಜು ಯುವಕರ ಗುಂಪೊಂದು ಬಾಡಿಗೆಗೆ ಬರುತ್ತದೆ. ಆದರೆ ಆ ಮನೆಯ ಸೊಸೆ ಸತ್ತು ಹೋಗಿ ದೆವ್ವವಾಗಿ ಕಾಡುತ್ತಿರುತ್ತಾಳೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಈ ಆರು ಮಂದಿ ಕಾಲೇಜು ಯುವಕರ ಅನುಭವವೇ ಚಿತ್ರದ ಕಥಾವಸ್ತು. ಸಾಮಾನ್ಯವಾಗಿ ಚಿತ್ರದ ಕ್ಲೈಮ್ಯಾಕ್ಸ್ ಹೀಗೆ ಆಗುತ್ತದೆ ಎಂದು ಹೆಚ್ಚು ಕಡಿಮೆ ಎಲ್ಲರೂ ಊಹಿಸಬಹುದು. ಆದರೆ ನಮ್ಮ ಚಿತ್ರದ ಕ್ಲೈಮ್ಯಾಕ್ಸ್ ಊಹಿಸಲು ಯಾರಿಂದಲೂ ಸಾಧ್ಯವಾಗಲ್ಲ. ಅದಕ್ಕೆ ಚಿತ್ರದ ಟ್ಯಾಗ್ ಲೈನ್ 'ತರ್ಕಕ್ಕೆ ನಿಲುಕದ್ದು' ಎಂದಿಟ್ಟಿದ್ದೇವೆ ಎನ್ನುತ್ತಾರೆ ಉಮೇಶ್.
ಈಗಾಗಲೆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಚಿತ್ರದ ಮೂಲಕ 1970ರ ದಶಕದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ತಲ್ಲಣಗೊಳಿಸಿದ ದಿವಂಗತ ಡಾನ್ ಎಂಪಿ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications












