"ನಾವು ಭಾರತೀಯರು ಎನ್ನುವುದಕ್ಕು ಮುನ್ನ ಕನ್ನಡಿಗರು, ನಮಗೆ ಪ್ರತ್ಯೇಕ ಬಾವುಟ ಇದೆ": ರಮ್ಯಾ
'RRR' ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದ್ದಕ್ಕೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿ ಅಭಿನಂದಿಸಿದ್ದರು. "ತೆಲುಗು ಬಾವುಟ ಎತ್ತರದಲ್ಲಿ ಹಾರಾಡುತ್ತಿದೆ" ಎಂದು ಬರೆದುಕೊಂಡಿದ್ದರು. ಇದಕ್ಕೆ ಗಾಯಕ ಅದ್ನಾನ್ ಸಾಮಿ ಚಕಾರ ಎತ್ತಿದ್ದರು. "ತೆಲುಗು ಬಾವುಟ ಎನ್ನಬೇಡಿ, ನಾವೆಲ್ಲಾ ಭಾರತೀಯರು, ವಿಭಜಿಸಿ ಮಾತನಾಡಬೇಡಿ" ಎಂದು ಪಾಠ ಮಾಡಿದ್ದರು. ಅದ್ನಾನ್ ಸಾಮಿ ಹೇಳಿಕೆಗೆ ನಟಿ ರಮ್ಯಾ ಈಗ ತಿರುಗೇಟು ನೀಡಿದ್ದಾರೆ.
"ಹೌದು, ನಾವು ಭಾರತೀಯರು, ಆದರೆ ನಾವು ಕನ್ನಡಿಗರು, ತಮಿಳರು, ತೆಲುಗರು, ಬೆಂಗಾಲಿಗರು ಆಗಿದ್ದೇವೆ" ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಏನಿದು ಚರ್ಚೆ ಎನ್ನುವುದನ್ನು ನೋಡುವುದಾದರೆ, ನಿನ್ನೆಯಷ್ಟೆ ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿತ್ತು. ಪ್ರಧಾನಿ ಮೋದಿ ಸೇರಿದಂತೆ ಗಣ್ಯರು, ಸಿನಿರಸಿಕರು, ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತಂಡಕ್ಕೆ ಅಭಿನಂದನೆ ತಿಳಿಸಿದ್ದರು. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿ, "ತೆಲುಗು ಬಾವುಟ ಎತ್ತರದಲ್ಲಿ ಹಾರಾಡುತ್ತಿದೆ. ಆಂಧ್ರ ಪ್ರದೇಶ ಪರವಾಗಿ ಎಂ.ಎಂ ಕೀರವಾಣಿ, ರಾಜಮೌಳಿ, ತಾರಕ್, ಚರಣ್ ಹಾಗೂ ಇಡೀ 'RRR' ತಂಡಕ್ಕೆ ಅಭಿನಂದನೆ. ನಿಮ್ಮ ಬಗ್ಗೆ ಹೆಮ್ಮೆ ಇದೆ" ಎಂದಿದ್ದರು.
ಸಿಎಂ ಜಗನ್ ಟ್ಟೀಟ್ನ ರೀಟ್ವೀಟ್ ಮಾಡಿ, ಗಾಯಕ ಅದ್ನಾನ್ ಸಾಮಿ ಒಂದು ಪೋಸ್ಟ್ ಮಾಡಿದ್ದರು. "ತೆಲುಗು ಬಾವುಟನಾ? ನೀವು ಹೇಳುತ್ತಿರುವುದು ಭಾರತದ ಬಾವುಟ ಅಲ್ಲವೇ? ಪ್ರಪಂಚದ ವಿಷಯಕ್ಕೆ ಬಂದರೆ ನಾವೆಲ್ಲಾ ಒಂದೇ ದೇಶ. ಮೊದಲು ನಾವು ಭಾರತೀಯರು. ದಯವಿಟ್ಟು ನೀವು ಭಾರತ ಬಿಟ್ಟು ಬೇರೆ ಇರಲು ಪ್ರಯತ್ನಿಸಬೇಡಿ, ನಾವು 1947ರಲ್ಲಿ ನೋಡಿದ ವಿಭಜನೆ ವಾದ ಒಳ್ಳೆದಲ್ಲ, ಧನ್ಯವಾದಗಳು. ಜೈ ಹಿಂದ್" ಎಂದು ಬರೆದುಕೊಂಡಿದ್ದರು. ಅದ್ನಾನ್ ಸಾಮಿ ಪೋಸ್ಟ್ ಬಗ್ಗೆ ಪರ ವಿರೋಧ ಚರ್ಚೆ ನಡೆದಿತ್ತು.

ಇದೀಗ ಅದ್ನಾನ್ ಸಾಮಿ ಟ್ವೀಟ್ಗೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ. "ಹೌದು, ನಾವು ಭಾರತೀಯರು, ಆದರೆ ನಾವು ಕನ್ನಡಿಗರು, ತಮಿಳರು, ತೆಲುಗರು, ಬೆಂಗಾಲಿಗರು ಮುಂತಾದವರು ಆಗಿದ್ದೇವೆ. ನಮ್ಮದೇ ಆದ ಭಾಷೆಯನ್ನು ಹೊಂದಿರುವಂತೆಯೇ ನಾವೆಲ್ಲರೂ ನಮ್ಮ 'ಧ್ವಜ'ಗಳನ್ನು ಹೊಂದಿದ್ದೇವೆ. ನಾವು ಭಾರತೀಯರಾಗಿ ಮತ್ತು ಅದರ ಜೊತೆಗೆ ವಿವಿಧ ಸಂಸ್ಕೃತಿ, ಭಾಷೆ, ಧ್ವಜದಿಂದ ಬೇರೂರಿರುವ ಜನರು ಎಂದು ಹೆಮ್ಮೆಪಡುತ್ತೇವೆ. ವಿವಿಧತೆಯಲ್ಲಿ ಏಕತೆ ಬಹಳ ಮುಖ್ಯ" ಎಂದಿದ್ದಾರೆ. ನಟಿ ರಮ್ಯಾ ಟ್ವೀಟ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Click it and Unblock the Notifications











