ಕೊನೆಗೂ ಕನ್ನಡ ಸಿನಿಮಾಗೆ ಕೈ ಕೊಟ್ಟ ಕನ್ನಡತಿ 'ಕಿರಿಕ್' ಸಂಯುಕ್ತ
'ಡೇಟ್ಸ್ ಹೊಂದಾಣಿಕೆ ಆಗಲ್ಲ' ಎಂದು 'ಕಾಲೇಜ್ ಕುಮಾರ್' ಚಿತ್ರತಂಡದ ಜೊತೆಗೆ ಕಿರಿಕ್ ಮಾಡಿಕೊಂಡಿದ್ದ ಸಂಯುಕ್ತ ಹೆಗಡೆ ಇತ್ತ ತಮಿಳು ಸಿನಿಮಾದಲ್ಲಿ ಅಭಿನಯಿಸುವ ಆಸೆಯಿಂದ 'ವಾಸು.. ನಾನ್ ಪಕ್ಕಾ ಕಮರ್ಶಿಯಲ್' ಎಂಬ ಕನ್ನಡ ಚಿತ್ರಕ್ಕೆ ಕೈ ಎತ್ತಿದ್ದಾರೆ.
'ಕಾಲೇಜ್ ಕುಮಾರ್' ಹಾಗೂ ಸಂಯುಕ್ತ ವಿವಾದ ಭುಗಿಲೇಳುತ್ತಿದ್ದಂತೆಯೇ, ಸಿನಿಮಾದಲ್ಲಿ ನಟಿಸುವುದಾಗಿ ಸಂಯುಕ್ತ ಒಪ್ಪಿಕೊಂಡಿದ್ದಾರೆ. ಆದ್ರೆ, ಆಕೆ 'ವಾಸು.. ನಾನ್ ಪಕ್ಕಾ ಕಮರ್ಶಿಯಲ್' ಚಿತ್ರದಲ್ಲಿ ನಟಿಸಲು ಒಲ್ಲೆ ಎಂದಿದ್ದಾರೆ.
'ವಾಸು... ನಾನ್ ಪಕ್ಕಾ ಕಮರ್ಶಿಯಲ್' ಚಿತ್ರದಲ್ಲಿ ನಟಿಸಲು ಅಡ್ವಾನ್ಸ್ ಪಡೆದಿದ್ದ ಸಂಯುಕ್ತ, ಈಗ ಅಡ್ವಾನ್ಸ್ ವಾಪಸ್ ಕೊಡುವುದಾಗಿ ಹೇಳಿದ್ದಾರೆ. ಸಂಯುಕ್ತ ತಂಟೆ ಬೇಡ ಎಂದು ಚಿತ್ರತಂಡ ಬೇರೆ ನಾಯಕಿ ಹುಡುಕಿಕೊಂಡಿದೆ.

ಖಾಲಿ ಇದ್ದ ಆಫರ್ ಕೊಟ್ಟಿದ್ದು ಈ ಚಿತ್ರ
'ಕಿರಿಕ್ ಪಾರ್ಟಿ' ಚಿತ್ರದ ಬಳಿಕ 'ರೋಡೀಸ್' ರಿಯಾಲಿಟಿ ಶೋನಲ್ಲಿ ಸಂಯುಕ್ತ ಭಾಗವಹಿಸಿದ್ದರು. ಅದು ಮುಗಿದ ನಂತರ ಖಾಲಿ ಕುಳಿತಿದ್ದ ಸಂಯುಕ್ತಗೆ ಅವಕಾಶ ನೀಡಿದ್ದು 'ವಾಸು.. ನಾನ್ ಪಕ್ಕಾ ಕಮರ್ಶಿಯಲ್' ಚಿತ್ರತಂಡ. ಆಗ ಖುಷಿಯಿಂದ ಒಪ್ಪಿಕೊಂಡ ಸಂಯುಕ್ತ, ಅಡ್ವಾನ್ಸ್ ರೂಪದಲ್ಲಿ ಹಣ ಕೂಡ ಪಡೆದಿದ್ದರು.

ಮಾತುಕಥೆ ನಡೆದಿತ್ತು
ಸಂಯುಕ್ತಗೆ ಜೂನ್ ಮತ್ತು ಜುಲೈ ನಲ್ಲಿ ಯಾವ ಯಾವ ದಿನ ಸಿನಿಮಾದ ಚಿತ್ರೀಕರಣ ನಡೆಯುತ್ತದೆ ಎಂಬುದರ ಕುರಿತು 'ವಾಸು' ಅಂಡ್ ಟೀಂ ಮೊದಲೇ ತಿಳಿಸಿತ್ತು. ಆ ದಿನಗಳಲ್ಲಿ ಶೂಟಿಂಗ್ ಗೆ ಹಾಜರ್ ಆಗುತ್ತೇನೆ ಎಂದು ಸಂಯುಕ್ತ ಒಪ್ಪಿಕೊಂಡಿದ್ದರು.

ಫೋಟೋಶೂಟ್ ಗೆ ಭಾಗಿಯಾಗಿದ್ದರು
ಸಿನಿಮಾ ಒಪ್ಪಿಕೊಂಡು ಫೋಟೊ ಶೂಟ್ ನಲ್ಲಿ ಸಹ ಸಂಯುಕ್ತ ಭಾಗಿಯಾಗಿದ್ದರು. ಇತ್ತೀಚಿಗಷ್ಟೆ ಸಿನಿಮಾದ ಫೋಟೋಶೂಟ್ ನಡೆದಿತ್ತು.

ಇದ್ದಕ್ಕಿದ್ದಂತೆ ಪ್ಲೇಟ್ ಚೇಂಜ್
ಫೋಟೋ ಶೂಟ್ ಆದ ಮರುದಿನ ಇದ್ದಕ್ಕಿದ್ದಂತೆ 'ಕಿರಿಕ್' ಹುಡುಗಿ ಪ್ಲೇಟ್ ಚೇಂಜ್ ಮಾಡಿಬಿಟ್ಟರು. 'ತಮಿಳು ಸಿನಿಮಾವೊಂದರಲ್ಲಿ ನನಗೆ ಚಾನ್ಸ್ ಸಿಕ್ಕಿದೆ, ನೀವು ಹೇಳಿದ ಡೇಟ್ ನಲ್ಲಿ ಚಿತ್ರೀಕರಣಕ್ಕೆ ಬರಲು ಆಗಲ್ಲ'' ಅಂತ 'ವಾಸು' ಚಿತ್ರತಂಡಕ್ಕೆ ಸಂಯುಕ್ತ ಹೇಳಿದ್ದಾರೆ.

ತಮಿಳು ಸಿನಿಮಾ ಆಯ್ಕೆ
'ವಾಸು' ಚಿತ್ರತಂಡ ಚಿತ್ರೀಕರಣಕ್ಕೆ ಎಲ್ಲಾ ತಯಾರಿಗಳನ್ನ ಮಾಡಿಕೊಂಡಿದ್ದು, ಡೇಟ್ ಬದಲಾವಣೆಯಿಂದ ತೊಂದರೆಯಾಗುವುದನ್ನ ತಿಳಿಸಿದರು. ಆಗ ನಿಮಗೆ ತಮಿಳು ಸಿನಿಮಾ ಬೇಕಾ, ಕನ್ನಡ ಸಿನಿಮಾ ಬೇಕಾ ಅಂದಾಗ ತಮಿಳು ಸಿನಿಮಾನೇ ಆಯ್ಕೆ ಮಾಡಿದರು ಸಂಯುಕ್ತ.

ಹೊಸ ನಾಯಕಿ ಎಂಟ್ರಿ
ಸಿನಿಮಾಗಾಗಿ ಪಡೆದ ಅಡ್ವಾನ್ಸ್ ಹಣವನ್ನ ನಿನ್ನೆ ಸಂಯುಕ್ತ ಹಿಂದಿರುಗಿಸಿ ಚಿತ್ರತಂಡಕ್ಕೆ ಕ್ಷಮೆ ಕೇಳಿದ್ದಾರೆ. ಸಿನಿಮಾದಲ್ಲಿ ನಟಿಸುವುದಿಲ್ಲ ಅಂತ ಹೇಳಿದ ಮೇಲೆ ಚಿತ್ರತಂಡ ನಿಶ್ವಿಕಾ ನಾಯ್ಡು ಎನ್ನುವ ಹೊಸ ನಾಯಕಿಯನ್ನ ಆಯ್ಕೆ ಮಾಡಿದ್ದಾರೆ.

ಫಿಲ್ಮಿ ಬೀಟ್ ಗೆ ನಿರ್ಮಾಪಕರ ಸ್ಪಷ್ಟನೆ
''ನಮ್ಮ ಸಿನಿಮಾದ ಪಾತ್ರಕ್ಕೆ ಚೆನ್ನಾಗಿರತ್ತೆ ಅಂತ ಸಂಯುಕ್ತ ಅವರನ್ನ ಆಯ್ಕೆ ಮಾಡಿದ್ವಿ. ಆದರೆ, ಮೊದಲು ಒಪ್ಪಿಕೊಂಡು ಶೂಟಿಂಗ್ 3 ದಿನ ಇರುವಾಗ ಸಿನಿಮಾ ನಿರಾಕರಿಸಿದ್ದರು. ಇದನ್ನ ಸುದ್ದಿ ಮಾಡುವುದು ಬೇಡ ಅಂತ ಸುಮ್ಮನಿದ್ವಿ. ಆದರೆ ಈ ವಿಷಯದಲ್ಲಿ ನಮ್ಮ ತಪ್ಪು ಇಲ್ಲ ಅಂತ ಈಗ ಸ್ಪಷ್ಟನೆ ನೀಡಬೇಕಾಗಿ ಬಂತು ಅಷ್ಟೆ'' - ಶರತ್ ಗೌಡ, ಕಾರ್ಯಕಾರಿ ನಿರ್ಮಾಪಕ


Click it and Unblock the Notifications











