ಆ ರಾತ್ರಿ ವಾಸ್ತವವಾಗಿ ನಡೆದಿದ್ದು ಏನು? ನಟಿ ಶರ್ಮಿಳಾ ಮಾಂಡ್ರೆ ಹೇಳಿದ ಸಂಗತಿ...
ನಟಿ ಶರ್ಮಿಳಾ ಮಾಂಡ್ರೆ ಕೆಲವು ತಿಂಗಳ ಹಿಂದೆ ವಿವಾದಕ್ಕೆ ಸಿಲುಕಿದ್ದರು. ಅವರು ಸ್ನೇಹಿತರೊಂದಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರು ಅಪಘಾತಕ್ಕೀಡಾಗಿತ್ತು. ಲಾಕ್ ಡೌನ್ ಕಠಿಣವಾಗಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಶರ್ಮಿಳಾ ಮಾಂಡ್ರೆ ತಮ್ಮ ಸ್ನೇಹಿತರ ಜತೆ ಜಾಲಿರೈಡ್ ಹೋಗುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು.
Recommended Video
ಈ ಅಪಘಾತ ನಡೆದಿದ್ದು ಬೆಂಗಳೂರಿನ ವಸಂತನಗರ ಸಮೀಪದ ಫ್ಲೈ ಓವರ್ ಕೆಳಗೆ. ಮಧ್ಯರಾತ್ರಿ ವೇಳೆ ಕಾರಲ್ಲಿ ಪ್ರಯಾಣಿಸುವಾಗ ವೇಗವಾಗಿ ಸಾಗುತ್ತಿದ್ದ ಜಾಗ್ವಾರ್ ಕಾರು ಫ್ಲೈ ಓವರ್ನ ಪಿಲ್ಲರ್ಗೆ ಅಪ್ಪಳಿಸಿತ್ತು. ಈ ಘಟನೆ ತೀವ್ರ ವಿವಾದ ಸೃಷ್ಟಿಸಿತ್ತು. ಲಾಕ್ ಡೌನ್ ವೇಳೆ ಹೊರ ಹೋಗಿದ್ದು ಏಕೆ? ಅವರ ಬಳಿಕ ತುರ್ತು ಸೇವೆಯ ಪಾಸ್ ಹೇಗೆ ಬಂದಿದ್ದು? ಅಪಘಾತದ ಬಳಿಕ ಅವರು ಪರಾರಿಯಾದ್ದೇಕೆ ಎಂದು ಅನೇಕ ಪ್ರಶ್ನೆಗಳು ಮೂಡಿದ್ದವು. ಜತೆಗೆ ರಾಜಕೀಯ ವ್ಯಕ್ತಿಯೊಬ್ಬರ ಅಪಾರ್ಟ್ ಮೆಂಟ್ನಲ್ಲಿ ಅಂದು ಪಾರ್ಟಿ ಮುಗಿಸಿ ವಾಪಸಾಗುತ್ತಿದ್ದರು. ಅವರ ಕಾರ್ನಲ್ಲಿ ಮಾದಕವಸ್ತುಗಳು ಸಹ ಸಿಕ್ಕಿದ್ದವು ಎಂದೂ ಆರೋಪಿಸಲಾಗಿತ್ತು.
ಈ ಎಲ್ಲ ಆರೋಪಗಳು, ಅನುಮಾನಗಳಿಗೆ ನಟಿ ಶರ್ಮಿಳಾ ಮಾಂಡ್ರೆ 'ಫಿಲ್ಮಿಬೀಟ್'ಗೆ ಕೊಟ್ಟ ಎಕ್ಸ್ಕ್ಲ್ಯೂಸಿವ್ ಸಂದರ್ಶನದಲ್ಲಿ ವಿವರಣೆ ನೀಡಿದ್ದಾರೆ. ಮುಂದೆ ಓದಿ...

ಅನಿವಾರ್ಯವಾಗಿ ಹೊರಬರುವಂತಾಗಿತ್ತು
ಅಂದು ರಾತ್ರಿ ಮನೆಯಿಂದ ಹೊರಹೋಗುವ ಅನಿವಾರ್ಯತೆ ಉಂಟಾಗಿದ್ದು ನಿಜ. ಅದು ಏಕೆಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಅತಿ ಅಗತ್ಯ ವಸ್ತು ಬೇಕಿತ್ತು. ನನ್ನ ಬಳಿಯೂ ಕಾರ್ ಇತ್ತು. ಆದರೆ ಪಾಸ್ ಇರದ ಕಾರಣ ಪಾಸ್ ಇರುವ ಸ್ನೇಹಿತನನ್ನು ಕೇಳಿದ್ದೆ. ಅದಕ್ಕಾಗಿ ಕಾರ್ ತೆಗೆದುಕೊಂಡು ಬಂದಿದ್ದರು. ನಾವು ಯಾವುದೇ ನಿಯಮವನ್ನು ಉಲ್ಲಂಘಿಸಿ ಮಜಾ ಮಾಡಲು ಹೋಗುತ್ತಿರಲಿಲ್ಲ ಎಂದು ಶರ್ಮಿಳಾ ಹೇಳಿದ್ದಾರೆ.

ಪ್ರಜ್ಞೆ ಕಳೆದುಕೊಂಡಿದ್ದೆ
ಕಾರ್ನಲ್ಲಿ ನಾಲ್ಕೈದು ಜನರಿದ್ದು ಎಂದೆಲ್ಲ ಹೇಳಲಾಗಿದೆ. ಆದರೆ ನಾವು ಇದ್ದಿದ್ದು ಮೂವರು. ನಾನು ಕಾರು ಓಡಿಸುತ್ತಿರಲಿಲ್ಲ. ಹಿಂದಿನ ಸೀಟ್ನಲ್ಲಿ ಕುಳಿತಿದ್ದೆ. ಕಾರು ಹೇಗೆ ಡಿಕ್ಕಿ ಹೊಡೆಯಿತು, ನನಗೇನಾಯಿತು ಎನ್ನುವುದು ಕೂಡ ಗೊತ್ತಾಗಲಿಲ್ಲ. ಅಪಘಾತವಾದ ತಕ್ಷಣ ಪ್ರಜ್ಞೆ ಕಳೆದುಕೊಂಡಿದ್ದೆ. ಅಲ್ಲಿಂದ ನನ್ನನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಉತ್ತರ ಕೊಡುವ ಸ್ಥಿತಿಯಲ್ಲಿರಲಿಲ್ಲ
ವಾಸ್ತವವಾಗಿ ಆಗಿದ್ದು ಇಷ್ಟೇ. ಆದರೆ ಅದರ ಸುತ್ತಲೂ ಕಥೆಗಳನ್ನು ಸೃಷ್ಟಿಸಿದರು. ಗಳಿಗೆಗೆ ಒಂದು ವರದಿ ಮಾಡಿದರು. ಆದರೆ ಇದ್ಯಾವುದಕ್ಕೂ ನಾನು ಉತ್ತರ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಮುಖದ ಬಳಿ ಮತ್ತು ಕೈಗೆ ಮೂರು ಕಡೆ ಪೆಟ್ಟಾಗಿತ್ತು. ವಿಪರೀತ ನೋವಾಗುತ್ತಿತ್ತು. ಅದರಿಂದ ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕಾಯಿತು.

ಪ್ಲಾಸ್ಟಿಕ್ ಸರ್ಜರಿಯೆಲ್ಲ ಸುಳ್ಳು
ಶರ್ಮಿಳಾ ಮಾಂಡ್ರೆ ಯಾವ ಪ್ರಶ್ನೆಗೂ ಉತ್ತರಿಸುತ್ತಿಲ್ಲ ಎಂದೂ ಆರೋಪಿಸಿದ್ದರು. ಆದರೆ ಅಪಘಾತದ ವೇಳೆ ನನ್ನ ಫೋನ್ ಕೂಡ ಕಳೆದು ಹೋಗಿತ್ತು. ಮೂರು ದಿನಗಳ ಬಳಿಕ ಸಿಕ್ಕಿತು. ಅದರ ತುಂಬಾ ನೂರಾರು ಮಂದಿಯ ಸಂದೇಶಗಳು. ನನ್ನ ಆರೋಗ್ಯ ವಿಚಾರಿಸಿ ಕೇಳುತ್ತಿದ್ದರು. ಅವರಿಗೆಲ್ಲ ಉತ್ತರ ನೀಡಬೇಕಾಯ್ತು. ನನ್ನ ಮುಖ ಕಿತ್ತು ಹೋಗಿದೆ, ಪ್ಲಾಸ್ಟಿಕ್ ಸರ್ಜರಿ ಮಾಡಿಸುತ್ತಿದ್ದೇನೆ ಎಂದೂ ಕಥೆ ಹೊಸೆದರು. ಆದರೆ ಮುಖಕ್ಕೆ ಸಣ್ಣದೊಂದು ಪೆಟ್ಟಾಗಿತ್ತಷ್ಟೇ. ಅದು ಕೆಲವೇ ದಿನಗಳಲ್ಲಿ ಗುಣವಾಗಿತ್ತು.

ಪರಿಣಾಮದ ಬಗ್ಗೆ ಯೋಚಿಸಲಿಲ್ಲ
ಚಾನೆಲ್ಗಳು ಟಿಆರ್ಪಿಗೋಸ್ಕರ ಏನೇನೋ ಹೇಳಿದರು. ಆದರೆ ವಾಸ್ತವವನ್ನು ನೋಡಲಿಲ್ಲ. ಮುಖ್ಯವಾಗಿ ಸಾರ್ವಜನಿಕ ಜೀವನದಲ್ಲಿರುವ ಒಬ್ಬ ನಟಿಯ ಬದುಕಿನ ಮೇಲೆ ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕೂಡ ಯೋಚಿಸಲಿಲ್ಲ. ಪರಿಸ್ಥಿತಿ ಸರಿಯಿದ್ದಿದ್ದರೆ ನಾನೇ ಪತ್ರಿಕಾಗೋಷ್ಠಿ ಮಾಡಿ ವಿವರಿಸುತ್ತಿದ್ದೆ. ಆದರೆ ಆ ಸನ್ನಿವೇಶದಲ್ಲಿ ನಾನು ಏನು ಮಾಡಲಿ?

ಎರಡೂವರೆ ತಿಂಗಳು ನೋವು
ಕೈಗೆ ಫ್ರ್ಯಾಕ್ಚರ್ ಆಗಿದ್ದರಿಂದ ಒಂದೇ ರೀತಿ ಅದನ್ನು ಇಟ್ಟುಕೊಳ್ಳಬೇಕಿತ್ತು. ಎರಡೂವರೆ ತಿಂಗಳು ಆ ನೋವು ಅನುಭವಿಸಿದೆ. ಎರಡು ಸಿನಿಮಾಗಳನ್ನು ಅರ್ಧ ಮುಗಿಸಿದ್ದೆ. ಆ ಪಾತ್ರಗಳಿಗೆ ನನ್ನ ದೇಹದ ಫಿಟ್ನೆಸ್ ಮತ್ತು ಮುಖದ ಆಕಾರವನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಆದರೆ ವ್ಯಾಯಾಮದಂತಹ ಚಟುವಟಿಕೆಗಳು ಬಹಳ ಕಷ್ಟವಾಗುತ್ತಿತ್ತು. ಅದರಿಂದ ಸುಧಾರಿಸಿಕೊಳ್ಳಲು ಇಷ್ಟು ಸಮಯ ಬೇಕಾಯಿತು.

ಕಾಡಿದ ಮಾನಸಿಕ ಖಿನ್ನತೆ
ಅಪಘಾತದ ಪ್ರಕರಣದ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಏಕೆಂದರೆ ಆ ಘಟನೆ ಉಂಟುಮಾಡಿದ ದೈಹಿಕ ಹಾಗೂ ಮಾನಸಿಕ ಆಘಾತದಿಂದ ಹೊರಬರಲು ಪ್ರಯತ್ನದಲ್ಲಿ ಬಹುತೇಕ ದೂರ ಕ್ರಮಿಸಿದ್ದೇನೆ. ಈಗ ಸಿನಿಮಾಗಳತ್ತ ಮರಳಿ ಹೋಗುತ್ತಿದ್ದೇನೆ ಎನ್ನುತ್ತಾರೆ ಶರ್ಮಿಳಾ ಮಾಂಡ್ರೆ. ಅವುಗಳ ನಡುವೆ ಈ ಕೆಲವು ದಿನಗಳಲ್ಲಿ ಅವರು ಮತ್ತೊಂದು ಸಮಸ್ಯೆಯೊಳಗೂ ಇಳಿದು ಹೊರಬಂದಿದ್ದಾರೆ. ಅದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವ ಮಾನಸಿಕ ಖಿನ್ನತೆ. ಅವರ ಖಿನ್ನತೆಗೆ ಈ ಅಪಘಾತ ಪ್ರಕರಣವೊಂದೇ ಕಾರಣವಲ್ಲ. ಖಿನ್ನತೆ ಅವರನ್ನು ಕಾಡಿದ್ದು ಏಕೆ? ಹೇಗೆ? ಓದಿರಿ ಮುಂದಿನ ಭಾಗದಲ್ಲಿ.


Click it and Unblock the Notifications











