ಸ್ವತಂತ್ರ ಹಕ್ಕಿ ಶ್ವೇತಾ ಬಸು ಪ್ರಸಾದ್ ಗೆ ಕಡೆಗೂ ಕರೆಬಂತು
ಟಾಲಿವುಡ್ ತಾರೆ ಶ್ವೇತಾ ಬಸು ಪ್ರಸಾದ್ ವೇಶ್ಯಾವಾಟಿಕೆ ಆರೋಪ ಹೊತ್ತು ಬಂಧಿತಳಾಗಿದ್ದ ಕೆಲ ಸಮಯ ಮಾವನ ಮನೆ ಸೇರಿ ವನವಾಸ ಅನುಭವಿಸಿ ಬಂದದ್ದು ಗೊತ್ತೇ ಇದೆ. ಪುನರ್ವಸತಿ ಕೇಂದ್ರದಲ್ಲಿ ಶ್ವೇತಾ ಅವರು ಕಾಲ ತಳ್ಳುವಂತಾಗಿತ್ತು. ಇದೀಗ ಅವರು ಮತ್ತೆ ಸ್ವತಂತ್ರ ಹಕ್ಕಿಯಾಗಿ ಹಾರಾಡುತ್ತಿದ್ದಾರೆ.
ಶ್ವೇತಾ ಬಸು ಪ್ರಸಾದ್ ಪರಿಸ್ಥಿತಿಯನ್ನು ನೋಡಿದ ಕೆಲವರು ಆಕೆಗೆ ತಾವು ಚಾನ್ಸ್ ಕೊಡ್ತೀವಿ ಎಂದು ಮುಂದೆಬಂದರು. ಈಗ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಹನ್ಸಲ್ ಮೆಹತಾ ಎಂಬುವವರು ಶ್ವೇತಾಗೆ ಚಾನ್ಸ್ ಕೊಡಲು ಮುಂದೆ ಬಂದಿದ್ದಾರೆ. ತಮ್ಮ ಚಿತ್ರದಲ್ಲಿ ಶ್ವೇತಾಗೆ ಅವಕಾಶಕೊಡುವುದಾಗಿ ಹೇಳಿದ್ದಾರೆ.

ತಾನು ನಿರ್ದೇಶಿಸುತ್ತಿರುವ ಸಾಕ್ಷ್ಯಚಿತ್ರದಲ್ಲಿ ಶ್ವೇತಾ ಪ್ರಸಾದ್ ಬಸು ಅವರಿಗೆ ಚಾನ್ಸ್ ಕೊಡ್ತೀನಿ ಎಂದು ಪ್ರಕಟಿಸಿದ್ದಾರೆ. ಶ್ವೇತಾ ಸಹ ಈ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಹಿಂದೂಸ್ತಾನಿ ಕ್ಲಾಸಿಕಲ್ ಸಂಗೀತದ ಬಗ್ಗೆ ಅವರು ತೆಗೆಯುತ್ತಿರುವ ಸಾಕ್ಷ್ಯಚಿತ್ರದಲ್ಲಿ ಶ್ವೇತಾ ಬಸು ನಟಿಸಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶ್ವೇತಾ ಅವರು, "ಈ ಡಾಕ್ಯುಮೆಂಟರಿಯಲ್ಲಿ ಅಭಿನಯಿಸುತ್ತಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ಸ್ವಲ್ಪ ಎಕ್ಸೈಟ್ ಕೂಡ ಆಗಿದ್ದೇನೆ" ಎಂದಿದ್ದಾರೆ. ಇದರ ಜೊತೆಗೆ ಸಾಕಷ್ಟು ತೆಲುಗು ಹೀರೋಗಳು ಶ್ವೇತಾಗೆ ಅವಕಾಶ ಕೊಡಲು ಮುಂದೆ ಬಂದಿದ್ದಾರೆ.
ಹೈದರಾಬಾದ್ ಬಂಜಾರ ಹಿಲ್ಸ್ ಸ್ಟಾರ್ ಹೋಟೆಲ್ ವೊಂದರಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯಲ್ಲಿ ಶ್ವೇತಾ ಅವರನ್ನು ಬಂಧಿಸಲಾಗಿತ್ತು. ಏತನ್ಮಧ್ಯೆ ಶ್ವೇತಾ ಬಸು ಅವರ ಬೆಂಬಲಕ್ಕೆ ಟಾಲಿವುಡ್ ಚಿತ್ರರಂಗವೂ ನಿಂತಿದೆ. ಅವಕಾಶಗಳಿಲ್ಲದೆ ಆರ್ಥಿಕ ಮುಗ್ಗಟ್ಟಿನ ಕಾರಣ ಅವರು ಈ ಕತ್ತಲ ಕೂಪಕ್ಕೆ ಇಳಿದಿದ್ದರು ಎಂದು ಚಿತ್ರರಂಗದ ಕಡೆಯಿಂದ ಅನುಕಂಪ ವ್ಯಕ್ತವಾಗಿತ್ತು.


Click it and Unblock the Notifications











