Don't Miss!
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಂಗ್ರೆಸ್ ಎಂಪಿಯಿಂದ ನಟಿಗೆ ಲೈಂಗಿಕ ಕಿರುಕುಳ?
ಶುಕ್ರವಾರ ಸಂಜೆ ನಡೆದ ಬೋಟ್ ರೇಸ್ ಸಮಯದಲ್ಲಿ ರತಿ ವರ್ಚಸ್ಸಿನ ಖ್ಯಾತ ಮಲಯಾಳಂ ನಟಿ ಶ್ವೇತಾ ಮೆನನ್ಗೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಕಾಂಗ್ರೆಸ್ ಸಂಸದ ಎನ್ ಪೀತಾಂಬರ ಕುರುಪ್ ಅವರು ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ.
ಕೊಲ್ಲಂನಲ್ಲಿ ಶುಕ್ರವಾರ ಸಂಜೆ ಪ್ರೆಸಿಡೆಂಟ್ಸ್ ರೇಸ್ ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ಕನ್ನಡ ಸಿನೆಮಾ 'ಓಂಕಾರ'ದಲ್ಲಿ ಪುಟ್ಟ ಪಾತ್ರ ಮಾಡಿದ್ದ ಬಹುಭಾಷಾ ತಾರೆ ಶ್ವೇತಾ ಮೆನನ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಈ ಸಮಯದಲ್ಲಿ ಅವರ ದೇಹವನ್ನು ಸ್ಪರ್ಶಿಸಿ ಅವಮಾನಿಸಲಾಗಿದೆ ಎಂದು ದೂರು ನೀಡಲಾಗಿದೆ.
"ನನಗೆ ಈ ಘಟನೆಯಿಂದ ತುಂಬಾ ನೋವಾಗಿದೆ. ನನಗೆ ಆದ ಅವಮಾನದಿಂದ ನಿಜಕ್ಕೂ ತಲೆತಗ್ಗಿಸುವಂತಾಗಿದೆ. ಜಿಲ್ಲಾಧಿಕಾರಿಗೆ ಈ ಕುರಿತು ದೂರು ನೀಡಿದ್ದೇನೆ" ಎಂದು ಯಾರ ಹೆಸರನ್ನೂ ಹೇಳದೆ ಹಿಂದಿ ಚಿತ್ರಗಳಲ್ಲಿಯೂ ನಟಿಸಿರುವ ಶ್ವೇತಾ ಮೆನನ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅವರು ಯಾರ ಹೆಸರು ಹೇಳದಿದ್ದರೂ ಮಾಧ್ಯಮದ ತೋರುಬೆರಳು 73 ವರ್ಷದ ಕೊಲ್ಲಂ ಸಂಸದ ಪೀತಾಂಬರ ಕುರುಪ್ ಅವರತ್ತ ನೆಟ್ಟಿದೆ. ಈ ಆರೋಪವನ್ನು ಶನಿವಾರ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. "ಈ ಆರೋಪ ಸಂಪೂರ್ಣ ಶುದ್ಧ ಸುಳ್ಳು. ಈ ಆರೋಪ ಮಾಡಿದಾಗಿನಿಂದ ಇದನ್ನು ತಳ್ಳಿಹಾಕುತ್ತಲೇ ಇದ್ದೇನೆ" ಎಂದು ಕುರುಪ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಮಾಧ್ಯಮದವರು ಸೆರೆ ಹಿಡಿದಿರುವ ವಿಡಿಯೋ ತುಣುಕಿನಲ್ಲಿ ಪೀತಾಂಬರ ಕುರುಪ್ ಅವರು ಶ್ವೇತಾ ಮೆನನ್ ಅವರನ್ನು ಉದ್ದೇಶಪೂರ್ವಕವಾಗಿ ಸ್ಪರ್ಶಿಸಿರುವುದು ಕಂಡುಬಂದಿದೆ. ಹೀಗಾಗಿ ಅವರ ಹೆಗಲ ಮೇಲೆಯೇ ಸಹಜವಾಗಿ ಆರೋಪ ಏರಿ ಕುಳಿತಿದೆ. ಇದನ್ನು ತಳ್ಳಿಹಾಕಿರುವ ಅವರು, ತಮ್ಮ ಹೆಸರನ್ನು ಈ ವಿವಾದದಲ್ಲಿ ಎಳೆದು ತರುತ್ತಿರುವುದು ನಿಜಕ್ಕೂ ದುರಾದೃಷ್ಟದ್ದು ಎಂದು ಕಿಡಿ ಕಾರಿದ್ದಾರೆ.
"ಚುನಾವಣೆ ಹತ್ತಿರ ಬರುತ್ತಿರುವುದರಿಂದ ಉದ್ದೇಶಪೂರ್ವಕವಾಗಿಯೇ ತಮ್ಮ ಹೆಸರನ್ನು ಈ ವಿವಾದದಲ್ಲಿ ಸಿಲುಕಿಸಲಾಗಿದೆ. ಇದರಿಂದ ನನಗೆ ಕೂಡ ತುಂಬಾ ನೋವಾಗಿದೆ. ನಾನು ನಿರಪರಾಧಿ ಎಂದು ಖಂಡಿತ ಸಾಬೀತುಪಡಿಸುತ್ತೇನೆ" ಎಂದು ಕುರುಪ್ ಅವರು ಮಾಧ್ಯಮಗಳಿಗೆ ಉತ್ತರ ನೀಡಿದ್ದಾರೆ.
ಈ ಘಟನೆಯನ್ನು ವಿರೋಧಿಸಿ ಮಲಯಾಳಂ ಚಿತ್ರರಂಗ ಪ್ರತಿಭಟನೆ ನಡೆಸಿತು. ಕೆಲ ಮಹಿಳಾ ಸಂಘಟನೆಗಳು ಕೂಡ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ. ಆದರೆ, ದೂರನ್ನು ಜಿಲ್ಲಾಧಿಕಾರಿಗೆ ಮೌಖಿಕವಾಗಿ ಹೇಳಿದ್ದರಿಂದ ಮತ್ತು ಮಾಧ್ಯಮದವರು ದೂರುತ್ತಿರುವುದರ ಆಧಾರದ ಮೇಲೆ ದೂರನ್ನು ದಾಖಲಿಸಲಾಗುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ವಿವಾದಕ್ಕೆ ಕೊಟ್ಟಾಯಂನಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಅವರು, ನಟಿ ಶ್ವೇತಾ ಮೆನನ್ ರಿಂದ ನನಗೆ ಯಾವುದೇ ದೂರು ಬಂದಿಲ್ಲ. ದೂರು ಬಂದ ನಂತರ ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.