'ನಾಗಮಂಡಲ' ವಿಜಯಲಕ್ಷ್ಮಿ ಬೆಳ್ಳಿತೆರೆಗೆ ರೀ ಎಂಟ್ರಿ
ನಾಗಮಂಡಲ ಕನ್ನಡ ಚಿತ್ರದ ಬೆಡಗಿ ವಿಜಯಲಕ್ಷ್ಮಿ ತಮಿಳುನಾಡು ಸೇರಿ ಜನಪ್ರಿಯ ನಟಿಯಾಗಿ ಬೆಳೆದಿದ್ದು ಈಗ ಹಳೆ ಕಥೆ. ಈಗ ಮತ್ತೊಮ್ಮೆ ಬೆಳ್ಳಿತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡ ಸಿನಿ ರಸಿಕರು ಹೌದಾ ಎಂದು ಮುಖ ಅರಳಿಸುವ ಮುನ್ನ ಸಮಾಧಾನ ಮಾಡಿಕೊಳ್ಳಿ. ವಿಜಯಲಕ್ಷ್ಮಿ ತಮಿಳು ಚಿತ್ರವೊಂದರ ಮೂಲಕ ಪುನರ್ ಪ್ರವೇಶ ಪಡೆಯುತ್ತಿದ್ದಾರೆ.
ಟಿಎಸ್ ನಾಗಾಭರಣ ಅವರ ನಿರ್ದೇಶನದ ನಾಗಮಂಡಲ ಚಿತ್ರದಲ್ಲಿ ಮಲೆನಾಡಿನ ಮುಗ್ಧ ಬಾಲೆಯಾಗಿ ಕಾಣಿಸಿಕೊಂಡು ಹೆಸರುವಾಸಿಯಾಗಿದ್ದ ವಿಜಯಲಕ್ಷ್ಮಿ ನಂತರ 25ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು.
ತಮಿಳಿನಲ್ಲಿ ಫ್ರೆಂಡ್ಸ್ ಚಿತ್ರದಲ್ಲಿ ಸೂರ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆಗಿನ್ನೂ ಸೂರ್ಯ ಸೂಪರ್ ಸ್ಟಾರ್ ಎನಿಸಿರಲಿಲ್ಲ. ಫ್ರೆಂಡ್ಸ್ ಚಿತ್ರದಲ್ಲಿ ವಿಜಯ್ ತಂಗಿಯಾಗಿ 'ಅಮುದ' ಎಂಬ ಹೆಸರಿನ ಪಾತ್ರ ನಿರ್ವಹಿಸಿ ತಮಿಳರ ಮನಗೆದ್ದಿದ್ದರು. ಈಗ ಅದೇ ಹೆಸರಿನ ಪಾತ್ರದ ಮೂಲಕ ಕತೆ ಹೇಳಲು ಬಂದಿದ್ದಾರೆ.

ಹೌದು, ವಿಜಯಲಕ್ಷ್ಮಿ ರೀ ಎಂಟ್ರಿಗೆ ಕಾರಣವಾದ ಚಿತ್ರದ ಹೆಸರು' ಕಥಾ ಸೊಲ್ಲಾ ಪೊರೊಮ್' ಇದು ಮಕ್ಕಳ ಚಿತ್ರ. ವಿಜಯಲಕ್ಷ್ಮಿ ಅಲ್ಲದೆ ಆಡುಕಾಲಂ ನರೇನ್ ಹಾಗೂ ಕಾಲಿ ವೆಂಕಟ್ ಮುಖ್ಯ ಪಾತ್ರದಲ್ಲಿದ್ದಾರೆ. ಕಲ್ಯಾಣ್ ನಿರ್ದೇಶನ ಚಿತ್ರಕ್ಕಿದೆ.
ತಮಿಳು ಕಿರುತೆರೆಯಲ್ಲಿ ಸಾವಿತ್ರಿ, ಚೆಲ್ಲಾಮೆ, ವಾಳವೈ ಮಾಟ್ರಲಾಂ ವಾಂಗ, ಮುಂಧಾನೈ ಮುಂಡಿಚ್ಚು ಮುಂತಾದ ಧಾರಾವಾಹಿ, ರಿಯಾಲಿಟಿಶೋ ಗಳ ಮೂಲಕ ಕೂಡಾ ಅಲ್ಲಿನ ಜನಕ್ಕೆ ಹತ್ತಿರವಾದರು. ಕನ್ನಡ ಟಿವಿಯಲ್ಲಿ ಕೆಲಕಾಲ ಬಂಗಾರದ ಬೇಟೆ ನಡೆಸಿದರು.
2010ರಲ್ಲಿ ಬಾಸ್ ಎಂಗಿರಾ ಭಾಸ್ಕರನ್ ನಲ್ಲಿ ಕಾಣಿಸಿಕೊಂಡಿದ್ದ ವಿಜಯಲಕ್ಷ್ಮಿ ಸ್ವಲ್ಪ ಗ್ಯಾಪ್ ನಂತರ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. 2006ರಲ್ಲಿ ನಡೆದ ಸರಣಿ ದುರಂತಗಳನ್ನು ಮರೆತು ತಮಿಳುನಾಡಿನಲ್ಲಿ ನೆಲೆಸಿ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹೆಸರು ಗಳಿಸಿದ್ದರು.
ಆತ್ಮಹತ್ಯೆ ಯತ್ನ ಪ್ರಕರಣ, ಅಪ್ಪನ ಸಾವಿನ ನೋವು, ಸೃಜನ್ ಲೋಕೇಶ್ ಜೊತೆ ಡೇಟಿಂಗ್, ನಿಶ್ಚಿತಾರ್ಥ 2007ರಲ್ಲಿ ಮುರಿದು ಬಿದ್ದ ಮುದುವೆ ಎಲ್ಲವೂ ವಿಜಯಲಕ್ಷ್ಮಿ ಅವರ ಬದುಕಿನ ಕಹಿ ಪುಟಗಳಾಗಿ ಬಿಟ್ಟಿವೆ. ವಿಜಯಲಕ್ಷ್ಮಿ ಅವರ ಒಂಟಿತನದ ನೋವನ್ನು ಉತ್ತಮ ಪಾತ್ರಗಳು ನೀಗುವ ಆಶಯ ಅವರ ಅಭಿಮಾನಿಗಳಿಗೆ ಸದಾ ಇದೆ.


Click it and Unblock the Notifications











