ಆತ್ಮಹತ್ಯೆಗೆ ಯತ್ನಿಸಿದ ವಿಂಧ್ಯಾ 'ಮನದ ಮರೆಯಲ್ಲಿ'
ಮಧುಮೇಹ ರೋಗಿಗಳು ಬಳಸುವ ಗುಳಿಗೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಉದಯೋನ್ಮುಖ ನಟಿ ವಿಂಧ್ಯಾ ಅಭಿನಯದ 'ಮನದ ಮರೆಯಲ್ಲಿ' ಚಿತ್ರ ಈ ವಾರ (ಮಾ.21) ತೆರೆಕಾಣುತ್ತಿದೆ. ಈಗ ವಿಂಧ್ಯಾ ಪ್ರಾಣಾಪಾಯದಿಂದ ಪಾರಾಗಿದ್ದು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಅಭಿನಯದ ಚೊಚ್ಚಲ ಚಿತ್ರ ತೆರೆಕಾಣುತ್ತಿದೆ.
ಈ ಚಿತ್ರದ ಕಥಾವಸ್ತು ಏನೆಂದರೆ.. ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು ನೇತ್ರದಾನದ ಬಗ್ಗೆ ಹೇಳುತ್ತಿದ್ದ ಮಾತುಗಳೇ ಚಿತ್ರವೊಂದಕ್ಕೆ ಸ್ಫೂರ್ತಿ. ಕೇವಲ ನೇತ್ರದಾನ ಮಾಡಿ ಎಂದು ಅಣ್ಣಾವ್ರು ಹೇಳದೆ ಸ್ವತಃ ಅದನ್ನು ಪಾಲಿಸಿದರು. ಮರಣಾನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿ ಆದರ್ಶ ಮೆರೆದರು. [ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?]

'ಒಲವೇ ಮಂದಾರ'ದ ಶ್ರೀಕಾಂತ್ (ಶ್ರೀಕಿ) ಚಿತ್ರದ ನಾಯಕ ನಟ. ರಾಜ್ ಕಿಶೋರ್, ಎಚ್ ವಾಸು, ಬಿ ಮಲ್ಲೇಶ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಎ.ಹೆಚ್. ರಾಜೀವ್ ನೇತ್ರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ನಿರ್ದೇಶಕರೇ ಹೊತ್ತಿದ್ದಾರೆ.
ಖ್ಯಾತ ನಟ ಅನಂತಾನಾಗ್ ವೈದ್ಯರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನವೀನ್ ಸುವರ್ಣ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಎಂ.ಎಸ್.ತ್ಯಾಗರಾಜ್ ಸಂಗೀತವಿದೆ. ಎಂ.ಯೋಗೇಂದ್ರ ನೃತ್ಯ ನಿರ್ದೇಶನ ಹಾಗೂ ಎನ್.ಕೆ.ಕುಮಾರ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಬೆಂಗಳೂರು, ಮಡಿಕೇರಿಯಲ್ಲಿ ಒಂದೇ ಹಂತದ ಚಿತ್ರೀಕರಣ ಮಾಡಲಾಗಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











