ಕುಚೇಲನಾಗಿದ್ದ ನನ್ನನ್ನು ಕುಬೇರನಾಗಿಸಿದ ಸಿನಿಮಾ ಜೋಗಿ: ಆದಿ ಲೋಕೇಶ್ ಬಿಚ್ಚಿಟ್ಟ ನೆನಪುಗಳು
'ನನಗೆ, ನನ್ನಂಥಹಾ ಹಲವರಿಗೆ ಜೀವನ ಕೊಟ್ಟ ಸಿನಿಮಾ ಸಾರ್ ಅದು..' ಉತ್ಸಾಹದಿಂದ ಜೋಗಿ ಕುರಿತು ನೆನಪಿನ ಸುರಳಿ ಬಿಚ್ಚಲು ಕುಳಿತರು ನಟ ಆದಿ ಲೋಕೇಶ್.
ಜೋಗಿ ಸಿನಿಮಾದ ಖಳನಾಯಕ ಬಿಡ್ಡ ಪಾತ್ರದಲ್ಲಿ ಮಿಂಚಿದ್ದ ಆದಿ ಲೋಕೇಶ್ ಸಿನಿಮಾ ಬಿಡುಗಡೆ ಆಗುತ್ತಲೇ ಸ್ಟಾರ್ ಆಗಿಬಿಟ್ಟರು. ಖಳ ಪಾತ್ರಧಾರಿಯಾಗಿ ಅವರು ಮೂಡಿಸಿದ್ದ ಛಾಪು ನಾಯಕನ ಪಾತ್ರಗಳನ್ನು ಅವರಿಗಾಗಿ ತಂದುಕೊಟ್ಟಿತ್ತು.
ಇದೀಗ ಜೋಗಿ ಸಿನಿಮಾ ಬಿಡುಗಡೆ ಆಗಿ 15 ವರ್ಷ ಆದ ಹಿನ್ನೆಲೆಯಲ್ಲಿ 'ಫಿಲ್ಮೀಬೀಟ್' ತಂಡದೊಂದಿಗೆ ಉತ್ಸಾಹದಿಂದ ಮಾತನಾಡಿದ ಆದಿ ಲೋಕೇಶ್, 'ನನ್ನಂತಹಾ ಸಾಮಾನ್ಯ ನಟನಿಗೆ ಜೀವನ ಕಲ್ಪಿಸಿಕೊಟ್ಟಿ ಸಿನಿಮಾ ಅದು' ಎನ್ನುತ್ತಾ ಮಾತಿನಲ್ಲಿ ಋಣತೀರಿಸಿದರು ಆದಿ ಲೋಕೇಶ್.
ನಾನು ಕಲಾವಿದ ಮೈಸೂರು ಲೋಕೇಶ್ ಮಗ ಎಂಬುದು ಹಲವರಿಗೆ ಗೊತ್ತೇ ಇರಲಿಲ್ಲ. ಗೊತ್ತಿದ್ದವರಾರೂ ನನಗೇನು ಕರೆದು ಪಾತ್ರವನ್ನು ಕೊಟ್ಟಿರಲಿಲ್ಲ. ಆದರೆ ಪ್ರೇಮ್ ನನ್ನ ಮೇಲೆ ನಂಬಿಕೆ ಇಟ್ಟು ಬಿಡ್ಡ ಪಾತ್ರ ನೀಡಿದರು. ಕಷ್ಟಪಟ್ಟು, ಅತ್ಯುತ್ಸಾಹದಿಂದ ಸಿನಿಮಾ ಮಾಡಿದೆವು. ನಮ್ಮ ಶ್ರಮಕ್ಕೆ ಭಾರಿ ಪ್ರತಿಫಲವೇ ದೊರಕಿತು ಎಂದು ಆದಿ ಲೋಕೇಶ್.

'ಚಿಂದೋಡಿ ಲೀಲಾ ಕಂಪೆನಿಯಲ್ಲಿ ನಾಟಕ ಮಾಡುತ್ತಿದ್ದೆ'
ಚಿಂದೋಡಿ ಲೀಲಾ ಅವರ ಕಂಪೆನಿಯಲ್ಲಿ ನಾಟಕ ಮಾಡುತ್ತಿದ್ದೆ. ಸುಮಾರಾಗಿ ಸಂಪಾದನೆಯೂ ಇತ್ತು, ಹಾಗಾಗಿ ಸಿನಿಮಾ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಸಿನಿಮಾಕ್ಕೆ ಬಂದ ನಂತರ ಅಷ್ಟೇನೂ ಹೇಳಿಕೊಳ್ಳುವಂತಹಾ ಅವಕಾಶಗಳು ದೊರೆತಿರಲಿಲ್ಲ. ಆಗ ಕೈಹಿಡಿದಿದ್ದು ಜೋಗಿ.

'ಪವಿತ್ರಾ ಲೋಕೇಶ್ ಬಾಯ್ಫ್ರೆಂಡ್ ಎಂದುಕೊಂಡಿದ್ದರು ಪ್ರೇಮ್'
'ನನ್ನನ್ನು, ನನ್ನ ಅಕ್ಕ ಪವಿತ್ರಾ ಲೋಕೇಶ್ ಅವರ ಬಾಯ್ಫ್ರೆಂಡ್ ಎಂದುಕೊಂಡು ಬಿಟ್ಟಿದ್ದರಂತೆ ನಿರ್ದೇಶಕ ಪ್ರೇಮ್. ಅಕ್ಕನೇ ಪ್ರೇಮ್ಗೆ ನನ್ನನ್ನು ಪರಿಚಯ ಮಾಡಿಸಿದ್ದು. ಎಕ್ಸ್ಕ್ಯೂಸ್ ಮೀ ಸಿನಿಮಾದಲ್ಲಿಯೂ ಅವಕಾಶ ಕೊಟ್ಟರು. ನನ್ನ ಮೇಲೆ ನಂಬಿಕೆ ಇಟ್ಟು ಜೋಗಿ ಸಿನಿಮಾದಲ್ಲಿ ಮುಖ್ಯ ಖಳನ ಪಾತ್ರವನ್ನೇ ಕೊಟ್ಟುಬಿಟ್ಟರು, ಅಲ್ಲಿಂದ ನನ್ನ ಜೀವನವೇ ಬದಲಾಗಿ ಹೋಯ್ತು' ಎಂದು ಆ ದಿನಗಳನ್ನು ನೆನಪಿಸಿಕೊಂಡರು ಆದಿ ಲೋಕೇಶ್.

'ನನ್ನನ್ನು ತಳ್ಳಿದ ಜನರೇ ಹಾರ ಹಾಕಿ ಮೆರವಣಿಗೆ ಮಾಡಿದರು'
'ಸಿನಿಮಾ ಬಿಡುಗಡೆ ಆದ ದಿವಸ ಆರ್.ಟೊ.ನಗರದಿಂದ ಕಪಾಲಿ ಚಿತ್ರಮಂದಿರಕ್ಕೆ ನಡೆದುಕೊಂಡು ಹೋಗಿದ್ದೆ. ಅದೇ ಸಮಯಕ್ಕೆ ಅಲ್ಲಿಗೆ ಶಿವಣ್ಣ ಬಂದರು, ಜನಜಾತ್ರೆ ಆಗಿಬಿಟ್ಟಿತ್ತು, ಲಾಠಿ ಚಾರ್ಜ್ ಆಯಿತು. ನನ್ನನ್ನೂ ಸಹ ತಳ್ಳಾಡಿದರು. ಪೊಲೀಸರಂತೂ ನನ್ನನ್ನು ಒಳಗೆ ಸಹ ಬಿಡುಲಿಲ್ಲ. ಬೇಸರವಾಗಿ ಹೊರಟುಹೋಗಿದ್ದೆ. ಮತ್ತೆ ಸಂಜೆ ವೇಳೆಗೆ ಬಂದಾಗ ಪರಿಸ್ಥಿತಿ ಬದಲಾಗಿ ಹೋಗಿತ್ತು. ನನ್ನನ್ನು ತಳ್ಳಾಡಿದ ಜನರೇ ಭುಜದ ಮೇಲೆ ಹೊತ್ತುಕೊಂಡು ಮೆರೆದರು. ಹಾರ ಹಾಕಿ ಸನ್ಮಾನಿಸಿದರು' ಒಂದೇ ದಿನದಲ್ಲಿ ತಮ್ಮ ಅದೃಷ್ಟ ಬದಲಾದುದನ್ನು ನೆನಪಿಸಿಕೊಂಡರು ಆದಿ ಲೋಕೇಶ್.

ರಾತ್ರಿ 3 ಗಂಟೆ ವರೆಗೆ ಚಿತ್ರೀಕರಣ ಮಾಡಿದ್ದೂ ಇದೆ: ಆದಿ ಲೋಕೇಶ್
ಚಿತ್ರೀಕರಣದ ಸಮಯವನ್ನು ನೆನಪಿಸಿಕೊಂಡ ಆದಿ ಲೋಕೇಶ್, 'ಸಿನಿಮಾ ಮಾಡಿ 15 ವರ್ಷ ಎನಿಸುತ್ತಿಲ್ಲ. ಚಿತ್ರೀಕರಣ ಮಾಡಿದ ಸ್ಥಳಗಳು, ಆಗ ನಡೆದ ಘಟನೆಗಳು ಎಲ್ಲವೂ ಕಣ್ಣ ಮುಂದೆಯೇ ಇವೆ. ರಾತ್ರಿ 3 ಗಂಟೆ ವರೆಗೂ ಚಿತ್ರೀಕರಣ ಮಾಡಿದ್ದಿದೆ. ಟೀ, ಬನ್ನು ತಿಂದುಕೊಂಡು ಚಿತ್ರೀಕರಣ ಮಾಡುತ್ತಿದ್ದೆವು. ಆದರೆ ಚಿತ್ರತಂಡದಲ್ಲಿ ಅದ್ಭುತವಾದ ಉತ್ಸಾಹವಿತ್ತು, ಎಲ್ಲರಿಗೂ ಗೊತ್ತಿತ್ತು ಇದೊಂದು ದೊಡ್ಡ ಹಿಟ್ ಆಗುತ್ತದೆಯೆಂದು' ಎಂದು ಚಿತ್ರೀಕರಣದ ದಿನಗಳನ್ನು ನೆನೆದರು ಆದಿ ಲೋಕೇಶ್ ಅಲಿಯಾಸ್ ಬಿಡ್ಡಾ.

'ಫುಟ್ಪಾತ್ ನಲ್ಲಿ ನಮ್ಮ ಜೊತೆ ಕೂತು ಟೀ ಕುಡೀತಿದ್ರು ಶಿವಣ್ಣ'
ಶಿವರಾಜ್ ಕುಮಾರ್ ಅವರು ಹಿರಿಯ, ಅನುಭವಿ, ಸ್ಟಾರ್ ನಟರಾಗಿದ್ದರೂ ಸಹ ನಮ್ಮಂಥಹಾ ಹೊಸಬರೊಂದಿಗೆ ಗೆಳೆಯರಂತೆ ಬೆರೆಯುತ್ತಿದ್ದರು. ಮಾಗಡಿ ರಸ್ತೆಯಲ್ಲಿ ಫುಟ್ಪಾತ್ ಮೇಲೆ ಕೂತು ನನ್ನೊಂದಿಗೆ ಟೀ, ಬನ್ನು ತಿಂದಿದ್ದು ನನಗಿನ್ನೂ ನೆನಪಿದೆ. ಹಮ್ಮು-ಬಿಮ್ಮು ಇಲ್ಲದ, ಅತ್ಯಂತ ಸರಳ ನಟ ಅವರು, ನಮ್ಮಂಥಹಾ ಹೊಸಬರಿಗೆ ಧೈರ್ಯ ತುಂಬಿ ಸುಲಭವಾಗಿ ನಟಿಸುವಂತೆ ಮಾಡಿದರು.

ಯಾರಿಗೂ ಕತೆಯನ್ನೇ ಹೇಳಿರಲಿಲ್ಲ ಪ್ರೇಮ್: ಆದಿ ಲೋಕೇಶ್
ನಿರ್ದೇಶಕ ಪ್ರೇಮ್ ಬಗ್ಗೆ ಮಾತು ಹೊರಳಿಸಿದ ಆದಿ ಲೋಕೇಶ್, ಅವರೊಬ್ಬ ಅದ್ಭುತ ತಂತ್ರಜ್ಞ, ಜೊತೆಗೆ ಅತ್ಯಂತ ಶ್ರಮಜೀವಿ. ಊಟ, ತಿಂಡಿ ಬಿಟ್ಟು ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತಿದ್ದರು. ಅವರಿಗೆ ಕಲಾವಿದರಿಂದ ಹೇಗೆ ನಟನೆ ತೆಗೆಯಬೇಕೆಂಬುದು ಗೊತ್ತಿತ್ತು. ಯಾರಿಗೂ ಕತೆಯನ್ನೇ ಹೇಳುತ್ತಿರುಲಿಲ್ಲ ಪ್ರೇಮ್. ಸ್ವತಃ ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಸಹ ಮೂರು ಸಾಲಿನಲ್ಲಿ ಕತೆ ಹೇಳಿ ಒಪ್ಪಿಸಿದ್ದರು ಪ್ರೇಮ್ ಎಂದರು ಅವರು.

ಲಕ್ಷಾಂತರ ಹಣ ಒಮ್ಮೆಲೆ ಬಂದುಬಿಟ್ಟಿತು: ಆದಿ ಲೋಕೇಶ್
ನಾಟಕ ಬಿಟ್ಟ ಮೇಲೆ ಹಣಕಾಸು ಮುಗ್ಗಟ್ಟಿನಲ್ಲಿದ್ದ ನನಗೆ ಜೋಗಿ ನಂತರ ಸಿನಿಮಾದ ಭರಪೂರ ಅವಕಾಶಗಳು ಪ್ರಾರಂಭವಾದವು. ರೂಪಾಯಿಗೆ ಕಷ್ಟವಿದ್ದ ನನಗೆ ಒಮ್ಮೆಲೆ ಲಕ್ಷಾಂತರ ಹಣ ಹರಿದುಬಂತು. ಆಗೆಲ್ಲಾ ಜೋಗಿ ನಿರ್ಮಾಪಕ ರಾಮ್ ಪ್ರಸಾದ್ ಅವರು ಸಹಾಯ ಮಾಡಿದರು. ಬ್ಯಾಂಕ್ ಖಾತೆ ಮಾಡಿಸಿಕೊಟ್ಟಿದ್ದು ಸಹ ಅವರೇ. ಉಳಿತಾಯ ಹೇಳಿಕೊಟ್ಟಿದ್ದು ಸಹ ಅವರೇ ಎಂದು ನೆನಪಿಸಿಕೊಂಡರು ಆದಿ.

ಪ್ರಸ್ತುತ 10 ಸಿನಿಮಾ ಆದಿ ಲೋಕೇಶ್ ಕೈಯಲ್ಲಿವೆ
ಪ್ರಸ್ತುತ ಲಾಕ್ಡೌನ್ ಕಾರಣಕ್ಕೆ ಮನೆಯಲ್ಲಿರುವುದಾಗಿ ತಿಳಿಸಿದ ಆದಿ ಲೋಕೇಶ್ ಕೈಯಲ್ಲಿ ಬರೋಬ್ಬರಿ 14 ಸಿನಿಮಾಗಳಿವೆಯಂತೆ. ಅದರಲ್ಲಿ 10 ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿದೆಯಂತೆ. ಮಾತಿನ ಕೊನೆಯಲ್ಲಿ ಕೊರೊನಾ ಕುರಿತು ಸಂದೇಶ ನೀಡಿದ ಆದಿ ಲೋಕೇಶ್, 'ಕೊರೊನಾ ದೊಡ್ಡ ಖಾಯಿಲೆಯಲ್ಲ, ಸುಮ್ಮನೆ ಜನರನ್ನು ಹೆದರಿಸಲಾಗುತ್ತಿದೆ. ಎಲ್ಲರೂ ಧೈರ್ಯದಿಂದಿದ್ದು, ಮಾಸ್ಕ್, ಸಾಮಾಜಿಕ ಅಂತರ ಹಾಗೂ ಬಿಸಿ ನೀರು, ಕಾಳು, ಮೆಣಸು ಇನ್ನಿತರೆ ರೋಗನಿರೋಧಕ ಶಕ್ತಿವರ್ಧಕಗಳನ್ನು ಬಳಸಿದರೆ ಕೊರೊನಾ ದಿಂದ ದೂರ ಉಳಿಯಬಹುದು ಎಂದರು.


Click it and Unblock the Notifications











