ಇನ್ಮುಂದೆ ಚಿತ್ರರಂಗದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮಗಳಲ್ಲಿ ನಾನು ಇರಲ್ಲ- ನಟ ಜಗ್ಗೇಶ್
ನವರಸನಾಯಕ ಜಗ್ಗೇಶ್ ಆಡಿಯೋ ಲೀಕ್ ವಿವಾದ ಸ್ಯಾಂಡಲ್ ವುಡ್ ನೆಮ್ಮದಿಗೆ ಬೆಂಕಿ ಇಟ್ಟಿದೆ. ರೊಚ್ಚಿಗೆದ್ದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹಿರಿಯ ನಟ ಜಗ್ಗೇಶ್ ವಿರುದ್ಧ ಮುಗಿಬಿದ್ದಿದ್ದಾರೆ. ಈ ಬಗ್ಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬೇಸರ, ಅಸಮಾಧಾನ ಹೊರಹಾಕಿದ್ದಾರೆ.
ಜಗ್ಗೇಶ್ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಂತೆ ಈ ವಿವಾದ ಮತ್ತಷ್ಟು ದೊಡ್ಡದಾಗಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಇಬ್ಬರ ನಟರ ನಡುವೆ ಏನೇ ಇರಬಹುದು, ಆದರೆ ಒಬ್ಬ ಹಿರಿಯ ನಟ, 40 ವರ್ಷಗಳಿಂದ ಕಲಾ ಸೇವೆ ಮಾಡಿರುವ ನಟನಿಗೆ ಚಿತ್ರೀಕರಣ ಸ್ಥಳದಲ್ಲಿ ಮುತ್ತಿಗೆ ಹಾಕಿ ಅವಮಾನ ಮಾಡಿದ್ದು ಸರಿಯಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಜಗ್ಗೇಶ್ ವಿಡಿಯೋ ಮೂಲಕ ಮಾತನಾಡಿದ್ದಲ್ಲದೆ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಇನ್ಮುಂದೆ ಚಿತ್ರರಂಗದ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗುವುದಿಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. ಯಾವುದೇ ಸಂಭ್ರಮದಲ್ಲೂ ತನ್ನ ಹಾಜರಾತಿ ಇರುವುದಿಲ್ಲ ಎನ್ನುವ ಬೇಸರದ ಮಾತನ್ನು ನುಡಿದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, 'ಆತ್ಮೀಯರೆ ನನಗೆ ನೀವು ನಿಮಗೆ ನಾನು ಇನ್ನುಮುಂದೆ. ಇನ್ನು ಮುಂದೆ ನನ್ನ ಉದ್ಯಮದ ಯಾರ ಹುಟ್ಟುಹಬ್ಬ, ಸಿನಿಮಾ, ಸ್ನೇಹ, ಕಾರ್ಯಕ್ರಮ, ಭೇಟಿ, ಹರಟೆ ನನ್ನಿಂದ ಇರುವುದಿಲ್ಲ. ಮುಂದೆ ನನ್ನ ಸಿನಿಮಾ ನನ್ನ ztv showಗೆ ಮೀಸಲು ಬದುಕು. ಕಾರಣ ತುಂಬ ತಾಮಸವಾಗಿದೆ ನಮ್ಮರಂಗ, ದೊಡ್ಡವರು ಬದುಕಿದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಪುರುಷರ ಸಾಮ್ರಾಜ್ಯ ಆಗಿದೆ ರಂಗ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಗ್ಗೇಶ್ ಸದ್ಯ ತೋತಾಪುರಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಚಿತ್ರೀಕರಣ ಸಹ ನಡೆಯುತ್ತಿದೆ. ಆದರೀಗ ಭುಗಿಲೆದ್ದಿರುವ ವಿವಾದದಿಂದ ಜಗ್ಗೇಶ್ ಅವರಿಗೆ ಚಿತ್ರೀಕರಣದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಈ ವಿವಾದ ಎಲ್ಲಾ ತಣ್ಣಗಾದ ಮೇಲೆ ಮತ್ತೆ ಚಿತ್ರೀಕರಣದಲ್ಲಿ ಜಗ್ಗೇಶ್ ಭಾಗಿಯಾಗಲಿದ್ದಾರೆ.


Click it and Unblock the Notifications











