ಅಭಿಮಾನಿಗಳಿಗಾಗಿಯೇ 'ಪುನೀತ್ ನೆನಪು' ಕಾರ್ಯಕ್ರಮಕ್ಕೆ ಸಿದ್ಧತೆ!
ಇಡೀ ಕರುನಾಡನ್ನು ಆಘಾತಕ್ಕೆ ತಳ್ಳಿದೆ ಪುನೀತ್ ರಾಜಕುಮಾರ್ ಅಕಾಲಿಕ ನಿಧನ. ಸಾವಿರಾರು ಅಭಿಮಾನಿಗಳು ಇಂದಿಗೂ ಆ ಶಾಕ್ನಿಂದ ಹೊರ ಬಂದಿಲ್ಲ ಕುಟುಂಬದ ಪರಿಸ್ಥಿತಿಯೂ ಹಾಗೆ ಇದೆ. ಅವರಿಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಅರಮನೆ ಮೈದಾನದಲ್ಲಿ ಗೀತ ನಮನ ಕಾರ್ಯಕ್ರಮ ನಡೆಯುತ್ತಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಇಂದು(ನವೆಂಬರ್ 16) ಪುನೀತ್ ಗೀತ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕರ್ನಾಟಕ ವಾಣಿಜ್ಯ ಚಲನ ಚಿತ್ರ ಮಂಡಳಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಗೀತ ನಮನ ಕಾರ್ಯಕ್ರಮ ಕೇವಲ ಸಿನಿಮಾ ರಂಗ ಮತ್ತು ರಾಜಕೀಯ ಗಣ್ಯರು ಅಂದರೆ, ವಿವಿಐಪಿಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಪುನೀತ್ ರಾಜ್ಕುಮಾರ್ ಅವರಿಗಾಗಿ ಮಾಡುತ್ತಿರುವ ಕಾರ್ಯಕ್ರಮ ಆಗಿರುವುದರಿಂದ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಅವಕಾಶ ನೀಡಬೇಕಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಪುನೀತ್ ಎಲ್ಲರನ್ನೂ ಅಗಲಿ ಎರಡು ವಾರಗಳೇ ಕಳೆದಿವೆ. ಇನ್ನೂ ಕೂಡ ಹಗಲು-ರಾತ್ರಿಯೆನ್ನದೆ ಸಾವಿರಾರು ಜನರು ಪುನೀತ್ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಪುನೀತ್ಗಾಗಿ ಮಾಡುತ್ತಿರುವ ಪುನೀತ್ ನಮನ ಕಾರ್ಯಕ್ರಮಕ್ಕೆ ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಪ್ರವೇಶ ಇಲ್ಲ ಎನ್ನುವುದು ಕೆಲವರಿಗೆ ಬೇಸರ ತಂದಿದೆ. ಆದರೆ ಅಭಿಮಾನಿಗಳು ಮತ್ತು ಸಾರ್ವಜನಿಕರಿಗಾಗಿ ಮತ್ತೊಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ವಾಣಿಜ್ಯ ಮಂಡಳಿ ಚಿಂತನೆ ನಡೆಸಿದೆ.

ಅಭಿಮಾನಿಗಳು, ಸಾರ್ವಜನಿಕರಿಗಾಗಿ ಪುನೀತ್ ನೆನಪು ಕಾರ್ಯಕ್ರಮ!
ಪುನೀತ್ ನಮನ ಕಾರ್ಯಕ್ರಮದ ಬಳಿಕ ಪುನೀತ್ ನೆನಪು ಎನ್ನುವ ಕಾರ್ಯಕ್ರಮವನ್ನು ಮಾಡಲು ವಾಣಿಜ್ಯ ಮಂಡಳಿ ಮುಂದಾಗಿದೆ. ಈ ಕಾರ್ಯಕ್ರಮದ ನಂತರ ಪುನೀತ್ ನೆನಪು ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿಯೇ ಹಮ್ಮಿ ಕೊಳ್ಳಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರಿಗೂ ಕೂಡ ಅವಕಾಶವಿರುತ್ತದೆ.

ಪುನೀತ್ ನೆನಪು ಕಾರ್ಯಕ್ರಮಕ್ಕೆ ಶಿವಣ್ಣ ಗ್ರೀನ್ ಸಿಗ್ನಲ್!
ಈ ವಿಚಾರವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಖಚಿತ ಪಡಿಸಿದ್ದಾರೆ. ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ. ಈ ಬಗ್ಗೆ ವಾಣಿಜ್ಯ ಮಂಡಳಿ ಪರವಾಗಿ ನಟ ಶಿವರಾಜ್ ಕುಮಾರ್ ಜೊತೆಗೆ ಮಾತನಾಡಿದ್ದಾರೆ ಸಾರಾ ಗೋವಿಂದು. ಶಿವರಾಜ್ಕುಮಾರ್ ಅವರು ಕೂಡ ಪುನೀತ್ ನೆನಪು ಕಾರ್ಯಕ್ರಮ ಮಾಡಲು ಒಪ್ಪಿಕೊಂಡಿದ್ದಾರೆ. ಹಾಗಾಗಿ ಸದ್ಯದಲ್ಲಿಯೇ ಪುನೀತ್ ನೆನಪು ಕಾರ್ಯಕ್ರಮದ ಕುರಿತು ರೂಪು ರೇಷೆಗಳು ಸಿದ್ಧಗೊಳ್ಳಲಿವೆ.

ಅದ್ಧೂರಿಯಾಗಿ ನಡೆಯಲಿದೆ ಪುನೀತ್ ನೆನಪು ಕಾರ್ಯಕ್ರಮ!
ಪುನೀತ್ ನಮನ ಕಾರ್ಯಕ್ರಮಕ್ಕಿಂತಲೂ, ಪುನೀತ್ ನೆನಪು ಕಾರ್ಯಕ್ರಮ ವಿಭಿನ್ನವಾಗಿ ಇರಲಿದೆ. ಪುನೀತ್ ನಮನದಲ್ಲಿ ಎರಡು ಹಾಡುಗಳು ಮತ್ತು ಶ್ರದ್ಧಾಂಜಲಿ ಸಲ್ಲಿಕೆ ಇರುತ್ತದೆ. ಆದರೆ ಪುನೀತ್ ನೆನಪು ಕಾರ್ಯಕ್ರಮದಲ್ಲಿ ಹಲವು ವಿಶೇಷತೆಗಳು ಇರಲಿವೆ. ಪುನೀತ್ ಅವರ ಆದರ್ಶಗಳು, ಸಿನಿಮಾ ಬದುಕು, ವೈಯಕ್ತಿಕ ಜೀವನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತದೆ.

ಪುನೀತ್ ನಮನ ಕಾರ್ಯಕ್ರಮದಲ್ಲಿ ಗೀತ ನಮನ ಸಲ್ಲಿಕೆ!
ಕನ್ನಡ ಚಿತ್ರರಂಗದ ಸುಮಾರು 150 ಕಲಾವಿದರು, ಪರಭಾಷೆಯ ನಲವತ್ತಕ್ಕೂ ಹೆಚ್ಚು ಕಲಾವಿದರು ಪುನೀತ್ ನಮನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕಮಲ್ ಹಾಸನ್ ಸೇರಿದಂತೆ ಹಲವು ನಟರು ವಿದೇಶದಲ್ಲಿರುವ ಕಾರಣ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ, ಮೈಸೂರು ಮಹಾರಾಜ ಯದುವೀರ್ ಒಡೆಯರ್ ಕೂಡ ಬರುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರಿಗಾಗಿ ನಾಗೇಂದ್ರ ಪ್ರಸಾದ್ ಹಾಡು ಬರೆದಿದ್ದು, ವಿಜಯಪ್ರಕಾಶ್ ಗುರುಕಿರಣ್ ಸೇರಿದಂತೆ ಹಲವು ಗಾಯಕರು ಕಾರ್ಯಕ್ರಮದಲ್ಲಿ ಗೀತ ನಮನ ಸಲ್ಲಿಸಲಿದ್ದಾರೆ. ಕಿಚ್ಚ ಸುದೀಪ್ ಕೂಡ ಹಾಡಿಗೆ ಧ್ವನಿ ನೀಡಿದ್ದಾರೆ.


Click it and Unblock the Notifications











