'The Darwin’s in ದಂಡಿದುರ್ಗ' ಹೊಸಬರ ಚಿತ್ರಕ್ಕೆ ನಿರ್ದೇಶಕ ಸತ್ಯಪ್ರಕಾಶ್ ಹಾಗೂ ಅಜಯ್ ರಾವ್ ಸಾಥ್!
ಕನ್ನಡ ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ಸಿನಿಮಾಗಳನ್ನುಹೊತ್ತು ಹೊಸ ಹೊಸ ತಂಡಗಳ ಬರುತ್ತಿವೆ. ಇಂತಹದ್ದೇ ಹಾದಿಯಲ್ಲಿ ಯುವಕ ತಂಡವೊಂದು ಸಿನಿಮಾ ಮಾಡುವ ಉತ್ಸಾಹದಲ್ಲಿ ಚಿತ್ರರಂಗವನ್ನು ಪ್ರವೇಶಿಸಿದೆ. ಅಂದ್ಹಾಗೆ ಆ ಸಿನಿಮಾ ಹೆಸರೇ 'The Darwin's in ದಂಡಿದುರ್ಗ'. ಕಳೆದ ಎಂಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಅಸಿಸ್ಟೆಂಟ್, ಅಸೋಸಿಯೇಟ್ ಆಗಿ, ಕೋ ಡೈರೆಕ್ಟರ್, ರೈಟರ್ ಆಗಿ ಕೆಲಸ ಮಾಡಿರೋ ತ್ರಿಭುವನ್ ಶ್ರೀಕಾಂತ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'The Darwin's in ದಂಡಿದುರ್ಗ' ಮೂಲಕ ತ್ರಿಭುವನ್ ನಿರ್ದೇಶಕರಾಗಿ ಚೊಚ್ಚಲ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಇಂದು (ಆಗಸ್ಟ್ 25) ಮುಹೂರ್ತ ಕಂಡಿದ್ದು, ವಿಭಿನ್ನ ಟೈಟಲ್ ಇಟ್ಕೊಂಡಿರೋ ಸಿನಿಮಾ ಗಮನ ಸೆಳೆಯುತ್ತಿದೆ. ನಿರ್ದೇಶಕ ಹಾಗೂ ನಿರ್ಮಾಪಕ ಸತ್ಯಪ್ರಕಾಶ್, ನಟ ಅಜಯ್ ರಾವ್, ನಿರ್ಮಾಪಕ ಕೆ ಮಂಜು ಹೊಸಬರ ಸಿನಿಮಾಗೆ ಜೊತೆಯಾಗಿದ್ದಾರೆ.

'The Darwin's in ದಂಡಿದುರ್ಗ' ಈ ಸಿನಿಮಾದ ಟೈಟಲ್ ಗಮನ ಸೆಳೆದಿದೆ. ಹೇಳುವಾಗ ಹಾಗೇ ದಂಡಿದುರ್ಗ ಅನ್ನೋ ಜಾಗದಲ್ಲಿ ನಡೆಯೋ ಕತೆ. ಪ್ರತಿಯೊಂದು ಜಾಗಕ್ಕೂ ಅದರದೇ ಆದ ವ್ಯಾಕರಣ, ಇತಿಹಾಸ, ಸೊಗಡು, ಇರುತ್ತದೆ. ಈ ಸಿನಿಮಾ ಮೂಲಕ ದಂಡಿದುರ್ಗದ ಘಮಲನ್ನು ಸಿನಿಮಾ ಪ್ರೇಕ್ಷಕರಿಗೆ ತೋರಿಸುವ ಪ್ರಯತ್ನಕ್ಕೆ ನಿರ್ದೇಶಕರು ಮುಂದಾಗಿದ್ದಾರೆ.
'ಬೈ ಒನ್ ಗೆಟ್ ಒನ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದ ಮಿಥುನ್ ಮತ್ತು ಮಿಲನ್ 'The Darwin's in ದಂಡಿದುರ್ಗ' ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಆರತಿ ನಾಯರ್ ಈ ಸಿನಿಮಾದ ಹೀರೊಯಿನ್. ಇದು ಆರತಿ ಅವರ ಮೊದಲ ಸಿನಿಮಾ. ಈ ಸಿನಿಮಾದ ಟೈಟಲ್ ಹೇಳುವಂತೆ ಇದು ದಂಡಿದುರ್ಗದ ಕಥೆ. ಅಲ್ಲಿನ ಜನರ ಪ್ರೀತಿ , ದ್ವೇಷ, ಕಾಮ, ರಾಜಕೀಯ ಹೋರಾಟ, ದೇವರು, ಧರ್ಮ ಎಲ್ಲವೂ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತದೆ. ದಂಡಿದುರ್ಗದ ಗದ್ದುಗೆಗಾಗಿ ಎರಡು ಪ್ರಬಲ ಶಕ್ತಿಗಳ ನಡುವಿನ ಹೋರಾಟದ ಕಥೆಯೇ ಈ ಸಿನಿಮಾ.

ಇದು ಮಧುರಾಜ್ ನಿರ್ಮಾಣ ಮಾಡ್ತಿರುವ ಎರಡನೇ ಸಿನಿಮಾ. 'ರಾಮ ರಾಮ ರೇ' ಸಿನಿಮಾ ಖ್ಯಾತಿಯ ಲವಿತ್ ಕ್ಯಾಮೆರಾ, ಉಮೇಶ್ ಸಂಕಲನ, ಅನಿಲ್ ಸಿಜೆ ಸಂಗೀತ ಸಿನಿಮಾಕ್ಕಿದೆ. ಎರಡು ಹಂತದಲ್ಲಿ ಶೂಟಿಂಗ್ ನಡೆಸುವ ಪ್ಲ್ಯಾನ್ ಹಾಕಿಕೊಂಡಿರುವ ಚಿತ್ರತಂಡ ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ ಸುತ್ತಮುತ್ತ ಹಾಗೂ ಬಳ್ಳಾರಿಯಲ್ಲಿ ಚಿತ್ರೀಕರಣ ನಡೆಸಲಿದೆ. ಸೆಪ್ಟಂಬರ್ ಮೂರನೇ ವಾರದಲ್ಲಿ 'The Darwin's in ದಂಡಿದುರ್ಗ' ಸಿನಿಮಾದ ಶೂಟಿಂಗ್ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಈ ಸಿನಿಮಾದ ವಿಶೇಷ ಅಂದ್ರೆ, ದಕ್ಷಿಣ ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್ಗಳು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.


Click it and Unblock the Notifications











