ಕನ್ನಡಕ್ಕೆ ಶೋಲೆ: ಬಚ್ಚನ್, ಧರ್ಮೇಂದ್ರ ಪಾತ್ರಕ್ಕೆ ಯಾರು?
ಅರೆವೋ ಸಾಂಬಾ..ವೋ ಕಿತ್ನೇ ಆದ್ಮೀ ಥೇ .. ಎಂದು ಗಬ್ಬರ್ ಸಿಂಗ್ ಪಾತ್ರಧಾರಿ ಅಮ್ಜದ್ ಖಾನ್ ರಾಮನಗರದ ಗುಡ್ದದಲ್ಲಿ ನಡೆದಾಡುತ್ತಾ ತೆರೆ ಮೇಲೆ ಕಾಣಿಸಿಕೊಳ್ಳುವ ದೃಶ್ಯವನ್ನು ಯಾರು ತಾನೆ ಮರೆಯಲು ಸಾಧ್ಯ?
ಈ ವಿಷಯ ಇಲ್ಲಿ ಯಾಕೆ ಈಗ ಪ್ರಸ್ತುತವೆಂದರೆ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಿದ್ದಾರೆಯೇ?
ಹೌದು, ಎನ್ನುವುದಕ್ಕೆ ಫಿಲಂ ಚೇಂಬರ್ ನಲ್ಲಿ ಆನಂದ್ ಅಪ್ಪುಗೋಳ್ ಶೋಲೆ ಎನ್ನುವ ಸೇಮ್ ಟೈಟಲನನ್ನು ರಿಜಿಸ್ಟರ್ ಮಾಡಿಸಿದ್ದಾರೆ, ಅದೂ ಸಂಗೊಳ್ಳಿ ರಾಯಣ್ಣ ಸಿನಿ ಕಂಬೈನ್ಸ್ ಹೆಸರಿನಲ್ಲಿ . ಚಿತ್ರವನ್ನು ಕನ್ನಡದಲ್ಲಿ ತರುವುದು ಪಕ್ಕಾ ಎಂದು ಅಪ್ಪುಗೋಳ್ ಹೇಳಿದ್ದಾರೆ ಕೂಡಾ.

ಹಾಗಾದರೆ ಈ ಬಿಗ್ ಪ್ರಾಜೆಕ್ಟ್ ಯಾವಾಗ ಶುರುವಾಗುತ್ತೆ? ಆ ಚಿತ್ರದ ನಾಯಕರಿಬ್ಬರು ಯಾರು ಎನ್ನುವುದು ಇನ್ನೂ ಸಸ್ಪೆನ್ಸ್. ಆ ಎರಡು ಪಾತ್ರಗಳನ್ನು ನಿಜ ಜೀವನದಲ್ಲೂ ಆಪ್ತಮಿತ್ರರಾಗಿರುವ ದರ್ಶನ್ ಮತ್ತು ಸುದೀಪ್ ಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ.
ಇನ್ನು ಮೂಲ ಶೋಲೆ ಚಿತ್ರದ ಅತಿ ಪ್ರಮುಖ ಅಮ್ಜದ್ ಖಾನ್, ಸಂಜೀವ್ ಕುಮಾರ್, ಹೇಮಾಮಾಲಿನಿ, ಜಯಾಬಾದುರಿ (ಜಯಾ ಬಚ್ಚನ್) ಪಾತ್ರವನ್ನು ಕನ್ನಡದಲ್ಲಿ ಯಾರು ಮಾಡುತ್ತಾರೆ ಎನ್ನುವ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ.
ಆನಂದ್ ಅಪ್ಪುಗೋಳ್ ಅಂದರೆ ಯಾರು ಗೂತ್ತಲ್ಲವೇ? ಕನ್ನಡ ಚಿತ್ರರಂಗದ ಬಿಗ್ ಬಜೆಟಿನ ಮತ್ತು ಕನ್ನಡಿಗರು ಹೆಮ್ಮೆ ಪಡಬೇಕಾದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕರು.
ಈ ನಡುವೆ ಸಂಗೊಳ್ಳಿ ರಾಯಣ್ಣ ಚಿತ್ರದ ಯಶಸ್ಸು ರಾಜ್ಯಾದ್ಯಂತ ಭರ್ಜರಿಯಾಗಿಯೇ ಮುಂದುವರಿದಿದೆ, ಮುಂದುವರಿಯುತ್ತಲೂ ಇದೆ.
ಕೋಟಿ ಕೋಟಿ ರೂಪಾಯಿ ನಿರ್ಮಾಪಕರ ಜೇಬಿಗೆ ಬಂದು ಬೀಳುತ್ತಿದೆ. ಇನ್ನೂ ನೂರು ದಿನ ಯಾವುದೇ ಮುಲಾಜಿಲ್ಲದೇ ಐವತ್ತು ಸಿನಿಮಾ ಮಂದಿರದಲ್ಲಿ ಚಿತ್ರ ಓಡುವುದು ಗ್ಯಾರಂಟಿ ಎನ್ನುವುದು ಸದ್ಯಕ್ಕಿರುವ ಚಿತ್ರದ ರಿಪೋರ್ಟ್.
ಶೋಲೆ ಎನ್ನುವ 'ಲೆಜೆಂಡ್' ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ಸಾಹಸಕ್ಕೆ ಕೈಹಾಕಿರುವ ಆನಂದ್ ಅಪ್ಪುಗೋಳ್ ಅವರಿಗೊಂದು ಅಡ್ವಾನ್ಸ್ಡ್ ಬೆಸ್ಟ್ ಆಫ್ ಲಕ್.
ಅಂದ ಹಾಗೆ.. ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಪಾತ್ರವನ್ನು ಕನ್ನಡದಲ್ಲಿ ಯಾರು ಮಾಡಿದರೆ ಸೂಕ್ತ?


Click it and Unblock the Notifications











