ನಿಖಿಲ್ ಮದುವೆಯಲ್ಲಿ ಸಾಮಾಜಿಕ ಅಂತರ, ಲಾಕ್ಡೌನ್ ನಿಯಮ ಉಲ್ಲಂಘನೆ?
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರ್ ಮತ್ತು ರೇವತಿ ವಿವಾಹ ರಾಮನಗರದ ಕೇತಗಾನಹಳ್ಳಿಯ ಫಾರ್ಮ್ಹೌಸ್ನಲ್ಲಿ ಶುಕ್ರವಾರ ನೆರವೇರಿದೆ. ಲಕ್ಷಾಂತರ ಮುಖಂಡರು, ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಬೇಕಿದ್ದ ಮದುವೆ, ಕೆಲವೇ ಜನರ ಹಾಜರಾತಿಯಲ್ಲಿ ನಡೆದಿದೆ.
Recommended Video
ಲಾಕ್ಡೌನ್ ಕಾರಣದಿಂದ ಮದುವೆಗೆ ಹೆಚ್ಚು ಜನರು ಸೇರುವ ಹಾಗಿಲ್ಲ. ಅನೇಕ ಮದುವೆ ಸಮಾರಂಭಗಳಲ್ಲಿ ಕೇವಲ 10-15 ಜನರು ಭಾಗಿಯಾದ ಉದಾಹರಣೆಗಳಿವೆ. ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಯಂತ್ರಣದ ನಡುವೆ ಮದುವೆ ನಡೆಯಬೇಕು. ಗೃಹ ಇಲಾಖೆ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಯಬೇಕು. ಆದರೆ ಕುಮಾರಸ್ವಾಮಿ ಅವರ ಮಗನ ಮದುವೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನಿಖಿಲ್ ಮದುವೆಯಲ್ಲಿ ನಿಗಮಕ್ಕೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಮುಂದೆ ಓದಿ...

ಹೇಳಿರುವುದಕ್ಕಿಂತ ಜಾಸ್ತಿ ಜನ ಭಾಗಿ?
ನಿಖಿಲ್ ಮದುವೆಯಲ್ಲಿ ಕುಟುಂಬದ 30 ಮಂದಿ ಅತಿ ಆಪ್ತರು ಮಾತ್ರವೇ ಭಾಗವಹಿಸಲಿದ್ದಾರೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಮದುವೆ ಸಮಾರಂಭದಲ್ಲಿ 150-200ಜನರು ಭಾಗವಹಿಸಿದ್ದಾರೆ ಎಂದು ಹೇಳಲಾಗಿದೆ. ಮದುವೆಯ ಫೋಟೊ ಮತ್ತು ವಿಡಿಯೋಗಳಲ್ಲಿ ಹೆಚ್ಚಿನ ಜನರು ಇರುವುದು ಕಾಣಿಸುತ್ತದೆ. ಹೀಗಾಗಿ ಕುಮಾರಸ್ವಾಮಿ ಹೇಳಿರುವುದಕ್ಕಿಂತ ಹೆಚ್ಚು ಜನರು ಅಲ್ಲಿದ್ದಾರೆ ಎನ್ನಲಾಗಿದೆ.

ಅದ್ಧೂರಿ ಅಲಂಕಾರವಿದೆ
ಕುಟುಂಬದ ಸದಸ್ಯರು ಸೇರಿದಂತೆ 48 ವಾಹನಗಳಿಗೆ ಅಲ್ಲಿಗೆ ತೆರಳಲು ಅನುಮತಿ ನೀಡಲಾಗಿತ್ತು. ಸರಳವಾಗಿ ಮದುವೆ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ ಮದುವೆ ಮಂಟಪ, ಫಾರ್ಮ್ ಹೌಸ್ ಸಿಂಗಾರಗಳು ಸರಳವಾಗಿಲ್ಲ. ಅಲ್ಲಿಯೂ ಅದ್ಧೂರಿ ಅಲಂಕಾರಗಳನ್ನು ಮಾಡಲಾಗಿದೆ. ಅನುಮತಿ ನೀಡಿರುವುದಕ್ಕಿಂತ ಹೆಚ್ಚು ಜನರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಫೋಟೊ, ವಿಡಿಯೋಗೆ ಹತ್ತಾರು ಕ್ಯಾಮೆರಾಗಳು
ಮದುವೆ ಮಂಟಪದಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ. ಇಲ್ಲಿ ಯಾರೂ ಮುಖಕ್ಕೆ ಮಾಸ್ಕ್ ಧರಿಸಿಕೊಂಡಿಲ್ಲ. ಫೋಟೊ ಮತ್ತು ವಿಡಿಯೋ ಚಿತ್ರೀಕರಣಕ್ಕಾಗಿ ಹತ್ತಾರು ಮಂದಿ ಕ್ಯಾಮೆರಾ ಹಿಡಿದವರು ವಧು ವರರನ್ನು ಸುತ್ತುವರಿದಿರುವುದು ವಿಡಿಯೋಗಳಲ್ಲಿ ದಾಖಲಾಗಿದೆ.

ರೆಡ್ ಝೋನ್ನಿಂದ ಗ್ರೀನ್ ಝೋನ್ಗೆ ಪ್ರಯಾಣ
ರಾಮನಗರದಲ್ಲಿ ಇದುವರೆಗೂ ಒಂದೂ ಕೊರೊನಾ ವೈರಸ್ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಇದನ್ನು ಗ್ರೀನ್ ಝೋನ್ ಎಂದು ಗುರುತಿಸಲಾಗಿದೆ. ಆದರೆ ಕೊರೊನಾ ವೈರಸ್ ರೆಡ್ ಸ್ಪಾಟ್ ಎಂದು ಪರಿಗಣಿಸಲಾಗಿರುವ ಬೆಂಗಳೂರು ಅಪಾಯಕಾರಿ ಸ್ಥಳವಾಗಿ ಗುರುತಿಸಲಾಗಿದೆ. ಇಲ್ಲಿಂದ ವಾಹನಗಳಲ್ಲಿ ನೂರಾರು ಮಂದಿಗೆ ರಾಮನಗರಕ್ಕೆ ತೆರಳಿದ್ದಾರೆ.

'ವೈರಸ್ ಬಂದರೆ ಕುಮಾರಸ್ವಾಮಿ ಕಾರಣ'
'ಪ್ರಭಾವಿಗಳಿಗೆ ಒಂದು ನ್ಯಾಯ ನಮಗೊಂದು ನ್ಯಾಯವೇ? ಎಚ್ ಡಿ ದೇವೇಗೌಡ ಅವರು ಪ್ರಧಾನಿಯಾಗಿದ್ದವರು. ಅವರನ್ನು ನಿಜ ಬದುಕಿನಲ್ಲಿ ಅನುಸರಿಸವವರು ನೂರಾರು ಮಂದಿ ಇದ್ದಾರೆ. ಅವರ ಮಗ ಕೂಡ ಣುರಾರು ಜನರಿಗೆ ದಾರಿ ತೋರಿಸುವವರು, ಅವರನ್ನು ನೋಡಿ ನಡೆಯುವವರು ಇದ್ದಾರೆ. ಅವರ ಮಗ ಕೂಡ ಎರಡು ಬಾರಿ ಸಿಎಂ ಆಗಿದ್ದಾರೆ. ರಾಮನಗರದಲ್ಲಿ ಇದುವರೆಗೂ ಕೊರೊನಾ ವೈರಸ್ ಕಾಣಿಸಿಕೊಂಡಿಲ್ಲ. ಒಂದು ವೇಳೆ ವೈರಸ್ ಕಾಣಿಸಿಕೊಂಡರೆ ಅದಕ್ಕೆ ಕುಮಾರಸ್ವಾಮಿ ನೇರ ಹೊಣೆ ಎಂದು ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಹೇಳಿದ್ದಾರೆ.

ಅಷ್ಟು ಜನರು ಅಲ್ಲಿ ಸೇರಿಲ್ಲ
ಮದುವೆಯಲ್ಲಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪವನ್ನು ಜೆಡಿಎಸ್ ಮುಖಂಡ ಸರವಣ ನಿರಾಕರಿಸಿದ್ದಾರೆ. ಜಿಲ್ಲಾಧಿಕಾರಿ ಎಷ್ಟು ಅನುಮತಿ ನೀಡಿದ್ದಾರೋ ಅಷ್ಟುಮಂದಿಗೆ ಮಾತ್ರ ಒಳಗೆ ಪ್ರವೇಶ ಕೊಡಲಾಗಿದೆ. ಕುಮಾರಸ್ವಾಮಿ ಅವರ ತೋಟದ ಮನೆಗೆ ಹೋಗುವ ಮೂರು ಕಡೆ ಬ್ಯಾರಿಕೇಡ್ ಹಾಕಲಾಗಿದ್ದು, ಅನಗತ್ಯವಾದ ಒಂದೂ ವಾಹನವನ್ನು ಒಳಗೆ ಬಿಟ್ಟಿಲ್ಲ. ಪಾಸ್ ಇಲ್ಲದ ವಾಹನಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ. ಅಡುಗೆಯವರು, ಇತರೆ ಸಿಬ್ಬಂದಿಯ ಕಾರಣದಿಂದ ಹೆಚ್ಚು ಜನರು ಇದ್ದಂತೆ ಕಾಣಿಸುತ್ತದೆ. ಆದರೆ 30-40 ಮಂದಿ ಮಂಟಪದ ಒಳಗೆ ಇದ್ದಾರೆ ಎಂದು ವಾಹಿನಿಯೊಂದರ ಜತೆ ಮಾತನಾಡಿದ ಸರವಣ ಸಮರ್ಥಿಸಿಕೊಂಡಿದ್ದಾರೆ.


Click it and Unblock the Notifications











