ಬೇಲೂರಿನಲ್ಲಿ ಅಲ್ಲು ಅರ್ಜುನ್ ಹೊಸ ಚಿತ್ರದ ಶೂಟಿಂಗ್ ರದ್ದು!
ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಹೊಸ ಚಿತ್ರ ಬೇಲೂರಿನಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಕಳೆದ 5 ದಿನಗಳಿಂದ ಸುಗಮವಾಗಿ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡಕ್ಕೆ ವಿಘ್ನ ಎದುರಾಗಿದ್ದು ಶೂಟಿಂಗ್ ನಿಲ್ಲಿಸಿ ಹೈದ್ರಾಬಾದ್ ಗೆ ವಾಪಸ್ಸಾಗುವಂತಾಗಿದೆ.
ನಿನ್ನೆ (ಫೆಬ್ರವರಿ 17) ಬೇಲೂರಿನ ಚೆನ್ನಕೇಶವ ದೇವಸ್ಥಾನದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆದ್ರೆ, ಚಿತ್ರೀಕರಣದ ವೇಳೆ ಚಿತ್ರತಂಡ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಧಾರ್ಮಿಕ ನಂಬಿಕೆಗೆ ದಕ್ಕೆಯಾಗುತ್ತಿದೆ ಎಂದು ಸಾರ್ವಜನಿಕರು ವಿರೋಧಿಸಿದ್ದರು. ಆದ್ದರಿಂದ ಚಿತ್ರೀಕರಣ ನಿನ್ನೆ ನಿಲ್ಲಿಸಲಾಗಿತ್ತು. ಆದ್ರೀಗ, ಬಾಕಿ ಚಿತ್ರೀಕರಣವೂ ಮಾಡದಂತಾಗಿದೆ.

ಧಾರ್ಮಿಕ ನಂಬಿಕೆಗೆ ದಕ್ಕೆ ತಂದ ಚಿತ್ರತಂಡ!
ಚಿತ್ರದ ಚಿತ್ರೀಕರಣಕ್ಕಾಗಿ ಬೇಲೂರಿನ ಐತಿಹಾಸಿಕ ಚನ್ನಕೇಶವ ದೇಗುಲದಲ್ಲಿ ಶಿವನ ಮೂರ್ತಿಯನ್ನ ಪ್ರತಿಷ್ಠಾಪಿಸಿದ್ದರು. ಇದು ವೈಷ್ಣವ ಹಾಗೂ ಶೈವ ಪಂಥೀಯರ ನಡುವೆ ವೈಮನಸ್ಯ ಉಂಟಾಗಲು ಕಾರಣವಾಗಿ, ಧಾರ್ಮಿಕ ನಂಬಿಕೆಗೆ ಬರೆ ಎಳೆದ ಚಿತ್ರತಂಡದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು. ಕೊನೆಗೂ ವಿಗ್ರಹವನ್ನು ತೆರವುಗೊಳಿಸಲಾಯಿತು.

ಪ್ರವಾಸಿಗರಿಗೆ ಸಮಸ್ಯೆ!
ಚಿತ್ರೀಕರಣ ನಡೆಯುವ ವೇಳೆ ದೇಗುಲದ ದ್ವಾರ ಬಂದ್ ಮಾಡಿ ಪ್ರವೇಶ ನಿರ್ಬಂಧಿಸಲಾಗಿತ್ತು. ಸಿನಿಮಾ ತಂಡದ ಈ ವರ್ತನೆಯಿಂದ ದೇಗುಲಕ್ಕೆ ಭೇಟಿ ನೀಡುವ ದೇಶ-ವಿದೇಶಿ ಪ್ರವಾಸಿಗರು ನಿರಾಶೆಯಾದರು.

ಚಿತ್ರೀಕರಣಕ್ಕೆ ನಿರ್ಬಂಧ
ಉಗ್ರರ ಲೀಸ್ಟ್ ನಲ್ಲಿ ಬೇಲೂರಿನ ಈ ದೇವಾಲಯವೂ ಇದ್ದು, ಈ ಎಲ್ಲಾ ಕಾರಣಗಳಿಂದ ಕೇಂದ್ರ ಪುರಾತತ್ವ ಇಲಾಖೆ ಚಿತ್ರೀಕರಣಕ್ಕೆಂದು ನೀಡಿದ್ದ ಅನುಮತಿಯನ್ನ ಹಿಂತೆಗೆದುಕೊಂಡಿದೆ. ಇದರಿಂದ ಇನ್ನೂ ಎರಡು ದಿನಗಳ ಕಾಲ ಮಾಡಬೇಕಿದ್ದ ಚಿತ್ರೀಕರಣಕ್ಕೆ ತಡೆ ಬಿದ್ದಂತಾಗಿದೆ.

ಬ್ರಾಹ್ಮಣನ ಪಾತ್ರದಲ್ಲಿ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಈ ಚಿತ್ರದ ಹೆಸರು 'ದುವ್ವಾಡ ಜಗನ್ನಾಧಂ'. ಈ ಚಿತ್ರದಲ್ಲಿ ನಟ ಅಲ್ಲು ಅರ್ಜುನ್ ಬ್ರಾಹ್ಮಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹರೀಶ್ ಶಂಕರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ದಿಲ್ ರಾಜು ನಿರ್ಮಾಣ ಹಾಗೂ ದೇವಿ ಶ್ರೀಪ್ರಸಾದ್ ಸಂಗೀತವಿದೆ. ಇನ್ನೂ ನಟಿ ಪೂಜಾ ಹೆಗ್ಡೆ ಅವರು ಹೀರೋಯಿನ್ ಆಗಿದ್ದಾರೆ.


Click it and Unblock the Notifications











