ಪ್ರಮೋದ್ ನಟನೆ ನೋಡಿ 'ಸಲಾರ್' ಚಿತ್ರದಲ್ಲಿ ಆ ಪಾತ್ರವನ್ನು ಹಿಗ್ಗಿಸಿದೆ: ಪ್ರಶಾಂತ್ ನೀಲ್
ಕಿರುತೆರೆಯಿಂದ ಚಿತ್ರರಂಗಕ್ಕೆ ಬಂದು ಸಕ್ಸಸ್ ಕಂಡವರು ಸಾಕಷ್ಟು ಜನ ಇದ್ದಾರೆ. ದರ್ಶನ್, ಗಣೇಶ್, ಯಶ್ ಹೀಗೆ ಹಲವರು ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸೋಕು ಮೊದಲು ಕಿರುತೆರೆ ಧಾರಾವಾಹಿಯಲ್ಲಿ ಮಿಂಚಿದವರೇ. ಇವರ ಸಾಲಿಗೆ ಸೇರುವ ಮತ್ತೊಬ್ಬ ನಟ ಪ್ರಮೋದ್. ಸದ್ಯ ಪ್ರಮೋದ್ 'ಸಲಾರ್' ಚಿತ್ರದಲ್ಲಿ ಬಾಹುಬಲಿ ಪ್ರಭಾಸ್ ಎದುರು ನಟಿಸಿ ಬಂದಿದ್ದಾರೆ.
'ಗೀತಾ ಬ್ಯಾಂಗಲ್ಸ್ ಸ್ಟೋರಿ' ಚಿತ್ರದಲ್ಲಿ ಹೀರೊ ಆಗಿ ನಟಿಸಿದ ಪ್ರಮೋದ್, ಮುಂದೆ 'ಪ್ರೀಮಿಯರ್ ಪದ್ಮಿನಿ', 'ಮತ್ತೆ ಉದ್ಭವ' ಸಿನಿಮಾಗಳಲ್ಲಿ ನಟಿಸಿ ಗೆದ್ದರು. 'ರತ್ನನ್ಪ್ರಪಂಚ' ಚಿತ್ರದ ಉಡಾಳ್ ಬಾಬು ಪಾತ್ರ ಪ್ರಮೋದ್ಗೆ ದೊಡ್ಡ ತಿರುವು ಕೊಟ್ಟಿದೆ. ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಮೋದ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಮೋದ್ ಅಭಿನಯ ನೋಡಿ ಮೆಚ್ಚಿಕೊಂಡ ಪ್ರಶಾಂತ್ ನೀಲ್ 'ಸಲಾರ್' ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಕೊಟ್ಟಿದ್ದಾರೆ.
ಶೀಘ್ರದಲ್ಲೇ 'ಬಾಂಡ್ ರವಿ' ಸಿನಿಮಾ ಮೂಲಕ ಮತ್ತೆ ಹೀರೊ ಆಗಿ ಕನ್ನಡ ಸಿನಿರಸಿಕರನ್ನು ರಂಜಿಸೋಕೆ ಪ್ರಮೋದ್ ಸಿದ್ಧರಾಗಿದ್ದಾರೆ. ಬಹಳ ಹಿಂದೆಯೇ ಪ್ರಮೋದ್ 'ಸಲಾರ್' ಚಿತ್ರದಲ್ಲಿ ನಟಿಸುವ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಇದೀಗ ಸ್ವತಃ ಪ್ರಶಾಂತ್ ನೀಲ್ ಇದನ್ನು ಖಚಿತಪಡಿಸಿದ್ದಾರೆ.

'ಸಲಾರ್' ಪ್ರಭಾಸ್ ಎದುರು ಪ್ರಮೋದ್
ಸದ್ಯ ಪ್ರಭಾಸ್ ನಟನೆಯ 'ಸಲಾರ್' ಚಿತ್ರಕ್ಕೆ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ರತ್ನನ್ಪ್ರಪಂಚ' ಚಿತ್ರದಲ್ಲಿ ಪ್ರಮೋದ್ ನಟನೆ ನೋಡಿ ಮೆಚ್ಚಿಕೊಂಡಿರುವ KGF ಸಾರಥಿ 'ಸಲಾರ್' ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಕೊಟ್ಟಿದ್ದಾರೆ. ಈ ಬಗ್ಗೆ ಕನ್ನಡ ಪ್ರಭ ಪತ್ರಿಕೆಗೆ KGF ಸಾರಥಿ ಪ್ರತಿಕ್ರಿಯಿಸಿದ್ದಾರೆ. "ಯಾವ ಪಾತ್ರ ಎನ್ನುವುದನ್ನು ಈಗಲೇ ಹೇಳುವುದಿಲ್ಲ. ಬಹಳ ಪ್ರಮುಖವಾದ ಪಾತ್ರದಲ್ಲಿ ಪ್ರಮೋದ್ ನಟಿಸುತ್ತಿದ್ದಾರೆ. ಇದು ಪರ್ಫಾರ್ಮೆನ್ಸ್ಗೆ ಅವಕಾಶ ಇರುವ ಪಾತ್ರ. ಇದಕ್ಕೆ ಪ್ರಮೋದ್ ಬೇಕೇ ಬೇಕು ಎಂದು ನಿರ್ಮಾಪಕರಿಗೆ ಹೇಳಿದ್ದೆ" ಎಂದಿದ್ದಾರೆ.

ಪ್ರಮೋದ್ಗಾಗಿ ಪಾತ್ರ ಹಿಗ್ಗಿಸಿದ್ದೆ
"ಈ ಪಾತ್ರಕ್ಕೆ ಬೇರೆಯವರನ್ನು ಆಯ್ಕೆ ಮಾಡುವ ಆಲೋಚನೆಯಲ್ಲಿದ್ದೆ. ಆದರೆ 'ರತ್ನನ್ಪ್ರಪಂಚ' ಚಿತ್ರದಲ್ಲಿ ಉಡಾಳ್ ಬಾಬು ಆಗಿ ಪ್ರಮೋದ್ ನಟನೆ ನೋಡಿದ ಮೇಲೆ ಅವರ ಸೂಕ್ತ ಎಂದು ಫಿಕ್ಸ್ ಆಗಿದ್ದೆ. ಚಿತ್ರದಲ್ಲಿ ಅವರ ಅಭಿನಯ ನೋಡಿ ದಂಗಾಗಿಬಿಟ್ಟೆ. ಅವರಿಗಾಗಿ 'ಸಲಾರ್' ಚಿತ್ರದ ಪಾತ್ರವನ್ನು ಹಿಗ್ಗಿಸಬೇಕಾಗಿತು. ಮೊದಲಿಗೆ ಬರೆದಿದ್ದ ಸಂಭಾಷಣೆಯನ್ನು ಮತ್ತಷ್ಟು ತಿದ್ದಿ ತೀಡಬೇಕಾಯಿತು. ನಾನಂತೂ ತುಂಬಾ ಎಕ್ಸೈಟ್ ಆಗದ್ದೀನಿ" ಎಂದಿ ನೀಲ್ ವಿವರಿಸಿದ್ದಾರೆ.

ಸೆಪ್ಟೆಂಬರ್ 28ಕ್ಕೆ 'ಸಲಾರ್' ರಿಲೀಸ್
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾ 'ಸಲಾರ್'. ಬಹುಕೋಟಿ ವೆಚ್ಚದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಪ್ರಭಾಸ್ ಜಬರ್ದಸ್ತ್ ರೋಲ್ನಲ್ಲಿ ಅಬ್ಬರಿಸಲಿದ್ದಾರೆ. ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಮಧು ಗುರುಸ್ವಾಮಿ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದು, ಸಿನಿಮಾ ಮುಂದಿನ ವರ್ಷ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಲಿದೆ.

'ಬಾಂಡ್ ರವಿ' ಆಗಿ ಪ್ರಮೋದ್ ಎಂಟ್ರಿ
ಇನ್ನು ನಟ ಪ್ರಮೋದ್ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಪ್ರಜ್ವಲ್ ಎಸ್. ಎಸ್ ನಿರ್ದೇಶನದ 'ಬಾಂಡ್ ರವಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 'ಅಣ್ಣಾ ಬಾಂಡ್' ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಪಾತ್ರದ ಹೆಸರು 'ಬಾಂಡ್ ರವಿ' ಅಂತ ಇತ್ತು. ಅದೇ ಹೆಸರನ್ನು ಟೈಟಲ್ ಆಗಿಟ್ಟು ಈ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ಕಟ್ಟಿಕೊಡಲಾಗಿದೆ. 'ಇಂಗ್ಲೀಷ್ ಮಂಜ' ಎನ್ನುವ ಮತ್ತೊಂದು ಚಿತ್ರದಲ್ಲೂ ಪ್ರಮೋದ್ ನಟಿಸುತ್ತಿದ್ದಾರೆ.


Click it and Unblock the Notifications











