ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ರತ್ನ ಕೊನೆಯ ದರ್ಶನ: 'ಗಂಧದ ಗುಡಿ' ರಿಲೀಸ್ ಪ್ಲ್ಯಾನ್ ಏನು?
ಪುನೀತ್ ರಾಜ್ಕುಮಾರ್ ಗಂಧದಗುಡಿಯಂತಹ ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದ್ದು ಅವರು ಅಗಲುವವರೆಗೂ ಯಾರಿಗೂ ಗೊತ್ತೇ ಇರಲಿಲ್ಲ. ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವಕ್ಕೆ ಗಿಫ್ಟ್ ಕೊಡುವುದಕ್ಕೆ ತೆರೆಮರೆಯಲ್ಲಿಯೇ ಭರ್ಜರಿ ಸಿದ್ಧತೆ ನಡೆದಿತ್ತು.
ಹೆಚ್ಚು-ಕಡಿಮೆ ಒಂದು ವರ್ಷಗಳ ಕಾಲ ಪುನೀತ್ ರಾಜ್ಕುಮಾರ್ ಕರ್ನಾಟಕದ ಕಾಡು ಮೇಡುಗಳನ್ನು ಸುತ್ತಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಕಂಡು ಮರುಳಾಗಿದ್ದಾರೆ. ಕರುನಾಡಿನ ಸಂಪತನ್ನು ನೋಡಿ ಬೆರಗಾಗಿದ್ದಾರೆ.
ಕರುನಾಡಿನ ಪ್ರಕೃತಿಯ ಸೌಂದರ್ಯವನ್ನು ಜನರಿಗೆ ತೋರಿಸಲೇಬೇಕು ಅಂತ ಪಣ ತೊಟ್ಟಿದ್ದ ಪುನೀತ್ ರಾಜ್ಕುಮಾರ್ ಯಶಸ್ವಿಯಾಗಿದ್ದರು. ಅದೇ 'ಗಂಧದ ಗುಡಿ' ಬೆಳ್ಳಿ ಪರದೆ ಮೇಲೆ ಮೂಡುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಲೇ ಟ್ರೈಲರ್ ರಿಲೀಸ್ ಆಗಿದೆ. ಕನ್ನಡಿಗರ ಮನೆ-ಮನಗೆದ್ದಾಗಿದೆ. ಹಾಗೇ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಬಗ್ಗೆ 'ಗಂಧದ ಗುಡಿ' ತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.

'ಗಂಧದ ಗುಡಿ' ಇಂಟರ್ನ್ಯಾಷನಲ್ ರಿಲೀಸ್
'ಗಂಧದ ಗುಡಿ' ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ. ಪುನೀತ್ ರಾಜ್ಕುಮಾರ್ ಆಗಾಗ ಸದ್ದಿಲ್ಲದೆ ಒಂದೊಂದು ಪ್ರಯೋಗಕ್ಕೆ ಕೈ ಹಾಕುತ್ತಿದ್ದರು. ಅಂತಹ ಮತ್ತೊಂದು ಪ್ರಯತ್ನವೇ 'ಗಂಧದ ಗುಡಿ'. ಈ ಸಿನಿಮಾ ಕೇವಲ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗಷ್ಟೇ ಅಲ್ಲ. ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆ. ಯಾಕಂದ್ರೆ, ಇದು ಕರುನಾಡಿನ ಸಿನಿಮಾ. ಇಲ್ಲಿ ಪವರ್ಸ್ಟಾರ್ ರಿಯಲ್ ಆಗಿ ಪುನೀತ್ ರಾಜ್ಕುಮಾರ್ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಿಲೀಸ್ ಮಾಡುವುದಕ್ಕೆ ತಂಡ ಸಜ್ಜಾಗಿದ್ದಾರೆ.

ಅಮೋಘವರ್ಷ ಬಿಟ್ಟುಕೊಟ್ಟ ಸುಳಿವೇನು?
'ಗಂಧದ ಗುಡಿ'ಗೆ ಕೆಆರ್ಜಿ ಸ್ಟುಡಿಯೋಸ್ ಜೊತೆಯಾಗಿದೆ. ಈ ಸಂಸ್ಥೆನೇ ಸಿನಿಮಾವನ್ನು ರಿಲೀಸ್ ಮಾಡುತ್ತಿದೆ. ಸದ್ಯ ಸಿನಿಮಾ ಬಿಡುಗಡೆಯ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿದೆ. ಆದರೆ, ಕೆಆರ್ಜಿ ಸ್ಟುಡಿಯೋ ರಿಲೀಸ್ ಮಾಡುತ್ತಿರುವುದರಿಂದ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುವುದರಲ್ಲಿ ಡೌಟೇ ಇಲ್ಲ. ಆದರೆ, ಹೇಗೆ ರಿಲೀಸ್ ಆಗುತ್ತೆ ಅನ್ನೋ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಈ ನಡುವೆ ನಿರ್ದೇಶಕ ಅಮೋಘವರ್ಷ ಸಿನಿಮಾ ಬಗ್ಗೆ ಸುಳಿವು ಬಿಟ್ಟು ಕೊಟ್ಟಿದ್ದಾರೆ. "ಈ ಮಟ್ಟಿಗೆ ರೆಸ್ಪಾನ್ಸ್ ನೋಡಿ, ಎಲ್ಲೊ ಒಂದು ಕಡೆ ನನಗೆ ನನ್ನ ಜವಾಬ್ದಾರಿಯನ್ನು ತೀರಿಸಲು ಆಗಿದೆ ಅಂತ ಅನಿಸುತ್ತಿದೆ. ಬರೀ ನಮ್ಮ ನಾಡಿನಲ್ಲಷ್ಟೇ ಅಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇವೆ. ನೀವು ಪ್ರಯತ್ನ ಮಾಡಬೇಕು." ಎಂದು ಅಮೋಘವರ್ಷ ಮಾಧ್ಯಮಗಳಿಗೆ ತಿಳಿಸಿದ್ದಾರೆ.

3 ಭಾಷೆಯಲ್ಲಿ ಸಿನಿಮಾ ರಿಲೀಸ್
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಕೊನೆ ಬಾರಿಗೆ ಬೆಳ್ಳಿಪರೆದೆ ಮೇಲೆ ದರ್ಶನ ಕೊಡಲಿದ್ದಾರೆ. ಅದೂ 'ಗಂಧದ ಗುಡಿ'ಯಂತಹ ವಿಶಿಷ್ಟ ಸಿನಿಮಾದ ಮೂಲಕ. ಇದೊಂದು, ಡಾಕ್ಯೂಮೆಂಟರಿ, ಸಿನಿಮಾ ಅಷ್ಟೇ ಅಲ್ಲ. ಕರುನಾಡಿನ ದರ್ಶನ ಆಗಿರುವುದರಿಂದ ಕನ್ನಡ ಸೇರಿದಂತೆ,ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 28ರಂದು ಕನ್ನಡ ರಾಜ್ಯೋತ್ಸವದ ಜೊತೆ ಜೊತೆಗೆ ಅಪ್ಪು ಹಬ್ಬ, ಗಂಧದ ಗುಡಿ ಹಬ್ಬ ಅಂತಾನೂ ಆಚರಿಸಲಾಗುತ್ತಿದೆ.

ಸಣ್ಣ ಮಗುವಿನ ಹಾಗೆ ಅಪ್ಪು ಮನಸ್ಸು
'ಗಂಧದ ಗುಡಿ' ನಿರ್ದೇಶಕ ಅಮೋಘವರ್ಷ ಒಂದು ವರ್ಷಗಳ ಕಾಲ ಅಪ್ಪು ಜೊತೆ ಸಿನಿಮಾ ಚಿತ್ರೀಕರಣ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. "ಅಪ್ಪು ಒಂದು ಸಣ್ಣ ಮಗುತರ. ಒಂದು ವರ್ಷಗಳ ಕಾಲ ಅವರೊಂದಿಗೆ ಸಿನಿಮಾ ಮಾಡಿದ್ವಿ. ಚಿಕ್ಕದೊಂದು ವಿಷಯದ ಬಗ್ಗೆನೂ ಪ್ರಶ್ನೆ ಮಾಡುತ್ತಲೇ ಇದ್ದರು. ಒಂದು ವರ್ಷ ಸಂತೋಷವಾಗಿ ನನ್ನೊಂದಿಗೆ ನಗುನಗುತ್ತಾ ಕಾಲ ಕಳೆದರು. ಅದೊಂದು ನನಗೆ ನೆಮ್ಮದಿ ಅಷ್ಟೇ." ಎಂದು ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.


Click it and Unblock the Notifications











