ಗಂಡುಬೀರಿಯಾದ ಚಿತ್ತಾರದ ಬೆಡಗಿ 'ಅಮೂಲ್ಯ'
ಬಾಯ್ಬಿಟ್ರೆ ಪಟಪಟ ಅಂತ ಮಾತನಾಡುವ ಚಿನಕುರಳಿ ಹುಡುಗಿ ನಟಿ ಅಮೂಲ್ಯ. 'ಚೆಲುವಿನ ಚಿತ್ತಾರ'ದ ಮೂಲಕ ಹೂಮಳೆ ಹರಿಸಿ, ಲೆಕ್ಕವಿಲ್ಲದಷ್ಟು ಹೃದಯಗಳನ್ನ ನೋಡ ನೋಡುತ್ತಲೇ ಕದ್ದುಬಿಟ್ಟ ನಟಿ ಅಮೂಲ್ಯ ಈಗ ತಮ್ಮ ಎಂದಿನ ಇಮೇಜ್ ಗೆ ಟಾಟಾ ಹೇಳಿದ್ದಾಳೆ.
ಅಮುಲ್ ಬೇಬಿ ತರಹ ಮುದ್ದು ಮುದ್ದಾದ ಪಾತ್ರಗಳಲ್ಲಿ ಮಿಂಚುತ್ತಿದ್ದ ನಟಿ ಅಮೂಲ್ಯ ಇದೀಗ ಏಕ್ದಂ ಗಂಡು ಬೀರಿಯಾಗುವುದಕ್ಕೆ ಮುಂದಾಗಿದ್ದಾರೆ. 'ಸಂಪತ್ತಿಗೆ ಸವಾಲ್' ಮಂಜುಳಾ ರೇಂಜಿಗೆ ಬಜಾರಿ ಪಾತ್ರವನ್ನ ನಿಭಾಯಿಸುವುದಕ್ಕೆ ಅಮೂಲ್ಯ ಸಕಲ ತಯಾರಿ ನಡೆಸುತ್ತಿದ್ದಾರೆ.

ನಟಿ ಅಮೂಲ್ಯಗೆ ಅಂತಹ ಬಜಾರಿ ಪಾತ್ರವನ್ನ ನೀಡುತ್ತಿರುವವರು ಚಿತ್ರಸಾಹಿತಿ ಕವಿರಾಜ್. 'ಮದುವೆಯ ಮಮತೆಯ ಕರೆಯೋಲೆ' ಅನ್ನುವ ಚಿತ್ರಕ್ಕೆ ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಡುವ ಮೂಲಕ ತಮ್ಮ ಬಹುದಿನಗಳ ಆಸೆಯನ್ನ ಈಡೇರಿಸಿಕೊಳ್ಳುತ್ತಿರುವ ಕವಿರಾಜ್, ಅಮೂಲ್ಯ ರನ್ನ ನಾಯಕಿ ಪಾತ್ರಕ್ಕೆ ಸೆಲೆಕ್ಟ್ ಮಾಡಿದ್ದಾರೆ.
ತಮ್ಮ ಆತ್ಮೀಯರಲ್ಲೇ ನಡೆದ ನಿಜ ಜೀವನದ ಪ್ರೇಮ ಕಥೆಯನ್ನಿಟ್ಟುಕೊಂಡು ಕವಿರಾಜ್ 'ಮದುವೆಯ ಮಮತೆಯ ಕರೆಯೋಲೆ' ಚಿತ್ರವನ್ನ ಸಿದ್ಧ ಪಡಿಸುತ್ತಿದ್ದಾರೆ. ಹುಡುಗಿ ತೀರಾ ಗಂಡುಬೀರಿ ಮತ್ತು ಬಜಾರಿಯಾಗಿದ್ದು, ನಟಿ ಅಮೂಲ್ಯ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ ಅನ್ನುವ ನಂಬಿಕೆ ಮೇಲೆ ಕವಿರಾಜ್ ಆಯ್ಕೆ ಮಾಡಿದರಂತೆ. ['ಆಕ್ಷನ್ ಕಟ್ ರಾಜ'ನಾಗಲಿರುವ ಚಿತ್ರಸಾಹಿತಿ ಕವಿರಾಜ್]
ಇನ್ನೂ ಒಂದೇ ತರಹದ ಪಾತ್ರಗಳನ್ನ ಮಾಡಿ ಮಾಡಿ ಅಮೂಲ್ಯಗೂ ಬೋರ್ ಆಗಿರುವುದರಿಂದ ಗಂಡುಬೀರಿಯಾಗುವುದಕ್ಕೆ ಸ್ವಲ್ಪ ಹೆಚ್ಚಾಗಿ ಖುಷಿಯಾಗಿದ್ದಾರೆ. 'ತೂಗುದೀಪ ಪ್ರೊಡಕ್ಷನ್ಸ್' ನಡಿ ದಿನಕರ್ ತೂಗುದೀಪ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಗಂಡುಬೀರಿ ಅಮೂಲ್ಯಗೆ ಬೌಲ್ಡ್ ಆಗುವ ಹೀರೋಗಾಗಿ ಹುಡುಕಾಟ ನಡೆಯುತ್ತಿದೆ. ಹುಡುಗ ಸಿಕ್ಕ ತಕ್ಷಣ 'ಕರೆಯೋಲೆ' ಸಿದ್ದವಾಗುತ್ತದೆ. (ಏಜೆನ್ಸೀಸ್)


Click it and Unblock the Notifications











