ಅನಿರುದ್ಧ್ ಬ್ಯಾನ್ ವಿವಾದ: ಫಿಲ್ಮ್ ಚೇಂಬರ್ Vs ಟಿವಿ ಅಸೋಸಿಯೇಷನ್ ತಿಕ್ಕಾಟಕ್ಕೆ ಕಾರಣವಾಯ್ತಾ?
'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಹೊರಹಾಕಿದ ಬಳಿಕ ಕಿರುತೆರೆ ನಿರ್ಮಾಪಕರು ಒಂದು ನಿರ್ಧಾರಕ್ಕೆ ಬಂದಿದ್ದರು. ಇನ್ನು ಎರಡು ವರ್ಷಗಳ ಕಾಲ ಅನಿರುದ್ಧ್ ಅವರನ್ನು ಯಾವುದೇ ಧಾರಾವಾಹಿಯಲ್ಲಿ ಹಾಕಿಕೊಳ್ಳದೆ ಇರಲು ನಿರ್ಧರಿಸಿದ್ದರು. ಇದಾದ ಬಳಿಕ ನಿರ್ದೇಶಕ ಎಸ್ ನಾರಾಯಣ್ 'ಸೂರ್ಯವಂಶ' ಧಾರಾವಾಹಿಯಲ್ಲಿ ಅನಿರುದ್ಧ್ಗೆ ಅವಕಾಶ ನೀಡಿದ್ದರು.
'ಸೂರ್ಯವಂಶ' ಧಾರಾವಾಹಿ ಇನ್ನೇನು ಸೆಟ್ಟೇರುತ್ತೆ ಅಂತ ಗೊತ್ತಾಗುತ್ತಿದ್ದಂತೆ ಕಿರುತೆರೆ ನಿರ್ಮಾಪಕರು ಎಸ್.ನಾರಾಯಣ್ ಅವರನ್ನು ಭೇಟಿ ಮಾಡಿದ್ದರು. ತಮ್ಮ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡಿದ್ದರು. ಇಲ್ಲಿಂದ ಮತ್ತೆ ಹಳೆ ವಿವಾದದಲ್ಲಿ ಬೆಂಕಿ ಕಾಣಿಸಿಕೊಳ್ಳುವುದಕ್ಕೆ ಆರಂಭ ಆಯಿತು. ನಟ ಅನಿರುದ್ಧ್ ಈ ಸಂಬಂಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು.
ಫಿಲ್ಮ್ ಚೇಂಬರ್ನಲ್ಲಿ ಅನಿರುದ್ಧ್ ಹಾಗೂ ಕಿರುತೆರೆ ನಿರ್ಮಾಪಕರನ್ನು ಕರೆದು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ, ಕಿರುತೆರೆ ಸಂಘದ ಸದಸ್ಯರು ಫಿಲ್ಮ್ ಚೇಂಬರ್ ಮೆಟ್ಟಿಲೇರಲು ಹಿಂದೇಟು ಹಾಕಿದ್ದರು. ಈ ವಿವಾದದ ಮೂಲಕ ಈಗ ಹೊಸ ಸಮಸ್ಯೆ ಹುಟ್ಟಿಕೊಂಡಿದೆ ಎನ್ನಲಾಗುತ್ತಿದೆ. ಫಿಲ್ಮ್ ಚೇಂಬರ್ ಹಾಗೂ ಟಿವಿ ಅಸೋಸಿಯೇಷನ್ ನಡುವಿನ ತಿಕ್ಕಾಟಕ್ಕೆ ಅನಿರುದ್ಧ್ ವಿವಾದ ಕಾರಣವಾಗಿತ್ತು.

'ಸೂರ್ಯವಂಶ' ಮಾಡುತ್ತಾರಾ ಅನಿರುದ್ಧ್?
ಅನಿರುದ್ಧ್ 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರಬರುತ್ತಿದ್ದಂತೆ ಮತ್ತೊಂದು ಪ್ರೊಡಕ್ಷನ್ ಹೌಸ್ ಜೊತೆ ಧಾರಾವಾಹಿ ಮಾಡಲು ನಿರ್ಧರಿಸಿದ್ದಾರೆ. ಉದಯ ಟಿವಿಯಲ್ಲಿ 'ಸೂರ್ಯವಂಶ' ಧಾರಾವಾಹಿ ಪ್ರಸಾರ ಮಾಡಲು ಮುಂದೆ ಬಂದಿದೆ. ಆದ್ರೀಗ ಕಿರುತೆರೆ ನಿರ್ಮಾಪಕರು ಒಕ್ಕೊರಲಿನಿಂದ ಅನಿರುದ್ಧ್ ಅವರಿಗೆ ಅವಕಾಶ ನೀಡಲೇ ಬಾರದು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಈ ಕಾರಣಕ್ಕೀಗ ಅನಿರುದ್ಧ್ ಬ್ಯಾನ್ ವಿವಾದ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಫಿಲ್ಮ್ ಚೇಂಬರ್ ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲು ಮುಂದಾಗಿದ್ದರೂ ಟಿವಿ ಅಸೋಸಿಯೇಷನ್ ಸಹಕಾರ ನೀಡುತ್ತಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ.

ಫಿಲ್ಮ್ ಚೇಂಬರ್ ಅಧ್ಯಕ್ಷರು ಹೇಳಿದ್ದೇನು?
ಅನಿರುದ್ಧ್ ಸಮಸ್ಯೆಯನ್ನು ಬಗೆಹರಿಸಲು ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಟಿವಿ ಅಸೋಸಿಯೇಷನ್ ಅವರಿಗೆ ಕರೆ ಮಾಡಿದ್ದರು. ಅವರು ಬರುತ್ತೇವೆ ಎಂದು ಹೇಳಿ ಎರಡು ಬಾರಿ ಬರಲಿಲ್ಲ ಎಂದು ಮಾಧ್ಯಮಗಳಲ್ಲಿ ದೂರಿದ್ದಾರೆ. ಅಲ್ಲದೆ "ಟಿವಿ ಅಸೋಸಿಯೇಷನ್ ಇರುವಾಗ ಫಿಲ್ಮ್ ಚೇಂಬರ್ಗೆ ಯಾಕೆ ಹೋಗಬೇಕು ಅನ್ನೋ ಮನಸ್ಥಿತಿ ಅಲ್ಲಿ ಕೆಲವರಲ್ಲಿ ಇದೆ. ಅದಕ್ಕೆ ಬೇಡ ಎಲ್ಲಾ ಕಲಾವಿದರೂ ಎರಡೂ ಕಡೆಗೂ ಕೆಲಸ ಮಾಡುತ್ತಿದ್ದಾರೆ. ಸಮಸ್ಯೆ ಪರಿಹಾರ ಮಾಡೋಣ ಅಂದರೂ ಬರಲಿಲ್ಲ. ಹಾಗೋ ಬ್ಯಾನ್ ಮಾಡೋ ಪವರ್ ಯಾರಿಗೂ ಇಲ್ಲ. ಇಡೀ ಚಿತ್ರರಂಗ ಅನಿರುದ್ಧ್ ಪರವಾಗಿ ನಿಂತಿದೆ. ಅವರಿಗೆ ತೊಂದರೆ ಆಗುವುದಕ್ಕೆ ಬಿಡುವುದಿಲ್ಲ" ಅಂತ ಭಾ ಮಾ ಹರೀಶ್ ಹೇಳಿಕೆ ಕೊಟ್ಟಿದ್ದರು.

ಟಿವಿ ಅಸೋಸಿಯೇಷನ್ ವಾದವೇನು?
ಇತ್ತ ಕಿರುತೆರೆ ವಾದ ಬೇರೆನೇ ಇದೆ. ಇದು ಒಂದು ಪ್ರೊಡಕ್ಷನ್ ಹೌಸ್ ಹಾಗೂ ನಟನ ನಡುವೆ ನಡೆದ ವಿವಾದ. ಇದನ್ನು ಇಬ್ವರೂ ಕೂತು ಪರಿಹರಿಸಿಕೊಂಡಿದ್ದರೆ ಆಗುತ್ತಿತ್ತು. ಆದರೆ, ಇದನ್ನು ಸುಮ್ಮನೆ ಎಳೆದುಕೊಂಡು ಹೋಗುತ್ತಿದ್ದಾರೆ. ಆರೂರು ಜಗದೀಶ್ ಹಾಗೂ ಅನಿರುದ್ಧ್ ಇಬ್ಬರೂ ಕರೆಸಿ ಮಾತಾಡಿ ನಾವೇ ಸಮಸ್ಯೆ ಬಗೆ ಹರಿಸುತ್ತೇವೆ. ಇಲ್ಲಿ ಯಾರನ್ನೂ ಬ್ಯಾನ್ ಮಾಡಲು ಆಗುವುದಿಲ್ಲ. ಒಂದು ವೇದಿಕೆಯನ್ನು ಸೃಷ್ಠಿ ಮಾಡೋಣ. ನಮ್ಮ ಟಿವಿ ಅಸೋಸಿಯೇಷನ್ಗೆ ಅನಿರುದ್ಧ್ ಬರುತ್ತಾರೆ. ನಿರ್ಮಾಪಕರು ಹಾಗೂ ಕಲಾವಿದರು ಇಬ್ಬರೂ ನಮ್ಮ ಸಂಘದವರೇ ಇನ್ನು ಎರಡು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಮಾಡೋಣ." ಎಂದು ಟಿವಿ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಹೇಳಿದ್ದರು.

ಅನಿರುದ್ಧ್ ಮ್ಯಾಟರ್ ಸುಖಾಂತ್ಯ
ಕೊನೆಗೂ ಟಿವಿ ಅಸೋಸಿಯೇಷನ್ನಲ್ಲಿಯೇ ಅನಿರುದ್ಧ್ ಮ್ಯಾಟರ್ ಸುಖಾಂತ್ಯಗೊಂಡಿದೆ. ಎರಡು ವರ್ಷ ಯಾವುದೇ ನಿರ್ಮಾಪಕರು ಅನಿರುದ್ದ್ ಹಾಕಿಕೊಂಡು ಧಾರಾವಾಹಿ ಮಾಡಬಾರದು ಅನ್ನೋ ನಿರ್ಧಾರವನ್ನು ಕೈ ಬಿಟ್ಟಿದ್ದಾರೆ. ಈ ಸಿನಿಮಾ ಕೊನೆಗೂ ಟಿವಿ ಅಸೋಸಿಯೇಷನ್ನಲ್ಲಿಯೇ ತೀರ್ಮಾನಗೊಂಡಿದೆ. ಈಗ ಅನಿರುದ್ಧ್ ಮತ್ತೆ 'ಸೂರ್ಯವಂಶ' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ ಅನಿರುದ್ಧ್ ಮ್ಯಾಟರ್ ಇರಡು ಸಂಘಗಳ ನಡುವೆ ತಿಕ್ಕಾಟಕ್ಕಂತೂ ಕಾರಣವಾಗಿತ್ತು.


Click it and Unblock the Notifications











