ಯಶಸ್ಸಿನ ಬಳಿಕವೂ ಬದಲಾಗದ ಅರ್ಜುನ್ ಮಾತುಗಳು

ಚಿತ್ರದ ಬಿಡುಗಡೆ ವಿಳಂಬವಾದಾಗ ನಿರ್ದೇಶಕ ಅರ್ಜುನ್ ಬಗ್ಗೆ ನಿರ್ಮಾಪಕ ಶಂಕರ ರೆಡ್ಡಿ ಅಸಮಾಧಾನ ತೋಡಿಕೊಂಡ ವರದಿಗಳು ಬಂದಿದ್ದವು. ಆದರೆ ಅದೊಂದು ಗಾಸಿಪ್ ಎಂದೇ ನಂತರ ತೇಲಿಹೋಯ್ತು. ನಿಜವಾಗಿಯೂ 'ಅದ್ದೂರಿ' ನಿರ್ಮಾಪಕರು ಹಾಗೂ ನಿರ್ದೇಶಕರ ನಡುವೆ ಯಾವುದೇ ವಿವಾದಗಳು ಕೇಳಿ ಬಂದಿಲ್ಲ. ಬಿಡುಗಡೆ ನಂತರವಂತೂ ಚಿತ್ರದ ಬಗ್ಗೆ ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿ ಬಂದು ಚಿತ್ರ ಯಶಸ್ವಿ ಸಾಲಿಗೆ ಸೇರಿದ್ದಾಯ್ತು.
ಈಗ ಚಿತ್ರ ಯಶಸ್ಸು ಕಂಡಿದ್ದಾಗಿದೆ. 50 ದಿನಗಳನ್ನು ಪೂರೈಸಿ 75 ರ ಗಡಿಗೆ ಕಾಲಿಟ್ಟಿದೆ. ಹೀಗಿರುವಾಗ ನಿರ್ಮಾಪಕರು ಮತ್ತು ನಿರ್ದೇಶಕರ ಮಧ್ಯೆ ಇರುವ ಸಂಬಂಧ ಹಾಗೂ ಅವರಿಬ್ಬರ ಮನಸ್ಥಿತಿ ಬಗ್ಗೆ ಸಹಜವಾದ ಕುತೂಹಲ ಎಲ್ಲರಲ್ಲಿದೆ. ಅದಕ್ಕೆ ಉತ್ತರವೂ ಸಿಕ್ಕಿದೆ. ನಿರ್ಮಾಪಕ ಶಂಕರ್ ರೆಡ್ಡಿ ಹಾಗೂ ನಿರ್ದೇಶಕ ಎಪಿ ಅರ್ಜುನ್ ಇಬ್ಬರೂ ಈ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ನಿರ್ದೇಶಕ ಅರ್ಜುನ್ "ಅದ್ದೂರಿ ಕಥೆಯನ್ನು ಕನಿಷ್ಟ ಇಪ್ಪತ್ತು ಮಂದಿ ನಿರ್ಮಾಪಕರಿಗೆ ಹೇಳಿದ್ದೆ. ಅವರಲ್ಲಿ ಪರವಾಗಿಲ್ಲ ಮಾಡಬಹುದು ಎಂದು ಹೇಳಿ ಮೂರ್ನಾಲ್ಕು ಮಂದಿ ಮಾತ್ರ ಮುಂದೆ ಬಂದಿದ್ದರು. ಆದರೆ ಕೊನೆಗೆ ಅವರೂ ಹಿಂದೆ ಸರಿದಾಗ ತುಂಬಾ ನೋವಾಗಿತ್ತು. ಹೊಸ ಹುಡುಗನನ್ನು ಹೀರೋ ಮಾಡಿಕೊಂಡಿದ್ದೇನೆ ಎಂದು ಗೊತ್ತಾಗಿದ್ದೇ ತಡ, ಎಲ್ಲರೂ ಒಬ್ಬೊಬ್ಬರಾಗಿ ಹಿಂದೆ ಸರಿದುಬಿಟ್ಟರು.
ಅಂತ ನಿಸ್ಸಹಾಯಕ ಸ್ಥಿತಿಯಲ್ಲಿ ನಿರ್ಮಾಪಕ ಶಂಕರ್ ರೆಡ್ಡಿ ನನ್ನ ಮೇಲೆ ವಿಶ್ವಾಸವಿಟ್ಟು ನಿರ್ಮಾಣಕ್ಕೆ ಮುಂದಾದರು. ನಡುವಲ್ಲಿ ಸಾಕಷ್ಟು ವಿಘ್ನಗಳು ಬಂದವು. ನಿರ್ಮಾಪಕರ ತಂದೆ ತೀರಿಕೊಂಡುಬಿಟ್ಟರು. ಆ ಕಾರಣಕ್ಕೆ ಆರು ತಿಂಗಳು ವಿಳಂಬವಾಯ್ತು. ಚಿತ್ರದ ತಂತ್ರಜ್ಞರಿಗೆ ಹಣ ಬಾಕಿ ಉಳಿಸಿಕೊಂಡು ಅದೇ ಹಣದಲ್ಲಿ ಚಿತ್ರೀಕರಣ ಮುಗಿಸುವ ಅನಿವಾರ್ಯತೆ ಎದುರಾಗಿತ್ತು.
ಈಗ ಸಿನಿಮಾ ಗೆದ್ದಿದೆ. ಎಲ್ಲರಿಗೂ ಸಂತೋಷವಾಗಿದೆ. ನನ್ನನ್ನೇ ನಂಬಿಕೊಂಡು ಈ ಸಿನಿಮಾಗೆ ಹಣ ಹೂಡಿದ ನಿರ್ಮಾಪಕರಿಗೆ ನನ್ನಿಂದ ನಷ್ಟವಾಗಲಿಲ್ಲ, ಅಷ್ಟ ಸಾಕು" ಎಂದು ತಮ್ಮ ಸಮಾಧಾನ ಹಂಚಿಕೊಂಡಿದ್ದಾರೆ. ಈ ಚಿತ್ರದ ನಂತರ ನಿರ್ದೇಶಕ ಅರ್ಜುನ್ ಅವರ ಸಂಭಾವನೆಯೂ ಸಹಜವಾಗಿ ಆಕಾಶದ ಕಡೆ ಮುಖ ಮಾಡಿದೆ ಎನ್ನಲಾಗುತ್ತಿದೆ.
ಇನ್ನು ಈ ಕುರಿತು ಮಾತನಾಡಿರುವ ನಿರ್ಮಾಪಕ ಶಂಕರ್ ರೆಡ್ಡಿ "ಲಿಫ್ಟ್ ಕೊಡ್ಲಾ ಚಿತ್ರದಿಂದ ನನಗೆ ದೊಡ್ಡ ನಷ್ಟವಾಯ್ತು. ಆ ಕಾರಣಕ್ಕೇ ಅದ್ದೂರಿಗೆ ಹಣದ ತೊಂದರೆಯಾಯ್ತು. ಅಂತೂ ಅದ್ದೂರಿ ಚಿತ್ರ ನನ್ನ ಕೈಬಿಡಲಿಲ್ಲ. ಮೊದಲ ವಾರದಲ್ಲೇ ನಾನು ಹಾಕಿದ ಬಂಡವಾಳ ನನ್ನ ಕೈಸೇರಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ" ಎಂದಿದ್ದಾರೆ. ಚಿತ್ರ ಯಶಸ್ವಿಯಾದ ನಂತರವೂ ಅದ್ದೂರಿ ಚಿತ್ರತಂಡದಲ್ಲಿ ಭಿನ್ನಾಭಿಪ್ರಾಯವಿಲ್ಲ ಎಂಬುದಕ್ಕೆ ಇಷ್ಟು ಸಾಕಲ್ಲವೇ? (ಒನ್ ಇಂಡಿಯಾ ಕನ್ನಡ)


Click it and Unblock the Notifications











