ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಶೋಕ್ ಕಶ್ಯಪ್ ಅಧಿಕಾರ ಸ್ವೀಕಾರ!
ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಕನ್ನಡ ಚಿತ್ರರಂಗದ ಜನಪ್ರಿಯ ಛಾಯಾಗ್ರಹಕ ಅಶೋಕ್ ಕಶ್ಯಪ್ ಆಯ್ಕೆ ಆಗಿದ್ದರು. ಅದರಂತೆ ಸೋಮವಾರ (ನವೆಂಬರ್ 7) ದಂದು ಅಶೋಕ್ ಕಶ್ಯಪ್ ಅಧಿಕಾರ ಸ್ವೀಕರಿಸಿದ್ದಾರೆ.
ಈ ಹಿಂದೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸುನೀಲ್ ಪುರಾಣಿಕ್ ಕಾರ್ಯ ನಿರ್ವಹಿಸಿದ್ದರು. ಅವರ ಅಧಿಕಾರ ಮುಗಿದಿದ್ದರಿಂದ ನೂತನ ಅಧ್ಯಕ್ಷರಾಗಿ ಅಶೋಕ್ ಕಶ್ಯಪ್ ಅವರನ್ನು ಆಯ್ಕೆ ಮಾಡಿತ್ತು. ಅದರಂತೆ ತೆರವಾಗಿದ್ದ ಸ್ಥಾನಕ್ಕೆ ರಾಜ್ಯ ಸರ್ಕಾರ ದಿನಾಂಕ 05-11-2022ರಂದು ಅಶೋಕ್ ಕಶ್ಯಪ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು.

ಅಶೋಕ್ ಕಶ್ಯಪ್ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಶಾಪ' ಅನ್ನೋ ಸಿನಿಮಾಗೆ ಅಶೋಕ್ ಕಶ್ಯಪ್ ಅವರಿಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ. ಕನ್ನಡ ಚಿತ್ರರಂಗ ಜನಪ್ರಿಯರ ಛಾಯಾಗ್ರಹಕರಲ್ಲಿ ಇವರು ಕೂಡ ಒಬ್ಬರು.
ಅಶೋಕ್ ಕಶ್ಯಪ್ ಕನ್ನಡದ ಜನಪ್ರಿಯ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಏಳಿಗೆಗಾಗಿ ದುಡಿದಿದ್ದಾರೆ. ಉಪೇಂದ್ರ ನಿರ್ದೇಶಿಸಿದ ಯಶಸ್ವಿ ಸಿನಿಮಾಗಳಿಗೆ ಕ್ಯಾಮರಾಮನ್ ಆಗಿ ಕೆಲಸ ಮಾಡಿದ್ದಾರೆ. 'ಭುವನ ಜ್ಯೋತಿ', 'ಶ್', 'ಕರುಣಿನ ಕೂಗು', ಉಪೇಂದ್ರ ನಿರ್ದೇಶಿಸಿದ 'ಸೂಪರ್' ಹಾಗೆಯೇ 'ಉಪ್ಪಿ2', 'ಕಾಫಿತೋಟ' ಸೇರಿದಂತೆ ಹಲವು ಸಿನಿಮಾಗಳಿಗೆ ಛಾಯಾಗ್ರಹಕರಾಗಿ ದುಡಿದಿದ್ದಾರೆ. ಛಾಯಾಗ್ರಹಣದಲ್ಲಿ ತಮ್ಮದೇ ಆದ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಸಿನಿಮ್ಯಾಟೋಗ್ರಫಿಯಲ್ಲಿ ಪರಿಣಿತಿಯನ್ನು ಪಡೆದಿದ್ದರೂ, ಸಿನಿಮಾ ನಿರ್ದೇಶನ ಹಾಗೂ ನಟನೆಯಲ್ಲೂ ಸಹ ಅಶೋಕ್ ಕಶ್ಯಪ್ ಪ್ರತಿಭೆಯನ್ನು ತೋರಿದ್ದಾರೆ. "ಕನ್ನಡ ಚಿತ್ರರಂಗದ ತಾಂತ್ರಿಕ ವರ್ಗದಲ್ಲಿ ದುಡಿದ ತಮ್ಮನ್ನು ಸರ್ಕಾರ ಗುರುತಿಸಿ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ಸಿನಿಮಾ ತಾಂತ್ರಿಕ ವರ್ಗಕ್ಕೆ ಖುಷಿ ತಂದಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಹಾಗೂ ಕನ್ನಡ ಚಿತ್ರರಂಗದಲ್ಲಿ ಈವರೆಗೆ ದುಡಿದು ಪಡೆದ ತಮ್ಮ ಅನುಭವವನ್ನು ಅಕಾಡೆಮಿ ಹಾಗೂ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗಿ ಶ್ರಮಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ನಂದಿನಿ ಬಡಾವಣೆಯಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಕಚೇರಿಯಲ್ಲಿ ಸೋಮವಾರ (ನವೆಂಬರ್ 7) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕರು ಹಾಗೂ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿರೋ ಟಿ.ಎಸ್.ನಾಗಾಭರಣ, ಹಿರಿಯ ಸಿನಿಮಾಟೋಗ್ರಾಫರ್ ಬಸವರಾಜ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.


Click it and Unblock the Notifications











