ನಾಸ್ತಿಕ ಕಮಲ್ ಹಾಸನ್, ತ್ರಿನಾಮ ಮಠದಲ್ಲಿ ಪ್ರತ್ಯಕ್ಷ
ನಟ ಕಮಲ್ ಹಾಸನ್ ಅವರ ಧಾರ್ಮಿಕ ನಂಬಿಕೆ ಎಂದಿಗೂ ಚರ್ಚಾಸ್ಪದ ವಿಷಯವಾಗಿ ಉಳಿದಿದೆ. ಪಾಲಕ್ಕಾಡ್ ನ ಹಿಂದೂ ಸಂಪ್ರದಾಯ ವೈದಿಕ ಕುಟುಂಬದಲ್ಲಿ ಜನಿಸಿದ ಕಮಲ್ ಹಾಸನ್ ತಮ್ಮ ನಡೆ ನುಡಿಗಳಲ್ಲಿ ಯಾವ ಧರ್ಮ, ಮತ, ಪಂಥಗಳನ್ನು ಮೆಚ್ಚಿಸುವ ಕಾರ್ಯಕ್ಕೆ ಇಳಿದ ಉದಾಹರಣೆಗಳಿಲ್ಲ. ಆದರೆ, ಭಾನುವಾರ ತಿರುನಲ್ವೇಲಿಯ ತ್ರಿನಾಮ ಧಾರಣೆ ಮಠವೊಂದರಲ್ಲಿ ಕಮಲ್ ಸಾಂಪ್ರದಾಯಿಕ ಉಡುಗೆ ತೊಟ್ಟು ಕಾಣಿಸಿಕೊಂಡಿದ್ದಾರೆ.
ದೇವರ ಇರುವಿಕೆ ಬಗ್ಗೆ ಪ್ರಶ್ನಿಸುವ ಕಮಲ್ ರನ್ನು ಎಲ್ಲರೂ ನಾಸ್ತಿಕ ಎಂದೇ ಕರೆಯುತ್ತಾರೆ. ಭಕ್ತಿ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಕಮಲ್ ತಮ್ಮ ವೈಯಕ್ತಿಕ ಬದುಕಿನಲ್ಲಿ ಮಠ ಮಾನ್ಯಗಳಿಗೆ ಸಲಾಂ ಹೊಡೆದು ಗುಲಾಮನಾಗಿರಲ್ಲ. ಆದರೆ, ತಿರುನಲ್ವೇಲಿಯ ನಂಗುನೇರಿಯಲ್ಲಿರುವ ಶ್ರೀವೈಷ್ಣವ ಮಠಕ್ಕೆ ಕಮಲ್ ಭೇಟಿ ನೀಡಿದ್ದು ಅವರ ಆಪ್ತರನ್ನೇ ಅಚ್ಚರಿಗೆ ನೂಕಿದೆ.[ಕಮಲ್ ಮರೆಯಲಾಗದ ಪಾತ್ರಗಳು]

ಕಮಲ್ ಹಾಸನ್ ಅವರು ವನಮಾಮಲೈ ಮಠಕ್ಕೆ ಭೇಟಿ ನೀಡಿ ಶ್ರೀಮಠದ ಪರಮಹಂಸ ಇತ್ಯಾದಿ ಮಧುರಕವಿ ವನಮಾಮಲೈ ರಾಮಾನುಜ ಜೀಯಾರ್ ಸ್ವಾಮಿಗಳ ಜೊತೆ ಸಂಭಾಷಣೆ ನಿರತರಾಗಿರುವ ಚಿತ್ರ ಸಿಕ್ಕಿದೆ. ಶ್ರೀಮಠಕ್ಕೆ ಪ್ರಥಮ ಬಾರಿಗೆ ಬಂದ ನಟ ಕಮಲ್ ಅವರಿಗೆ ಆತ್ಮೀಯ ಸ್ವಾಗತ ಕೋರಲಾಗಿದೆ. ಸ್ವಾಮೀಜಿಗಳ ಜೊತೆ ಕುಶಲ ಸಂಭಾಷಣೆ ನಡೆಸಿದ ಕಮಲ್ ಆಶೀರ್ವಾದ ಬೇಡಿದರು ಎಂದು ತಿಳಿದು ಬಂದಿದೆ.
ದೃಶ್ಯಂ ಚಿತ್ರದ ತಮಿಳು ರಿಮೇಕ್ 'ಪರಸ್ಪರಂ' ನಲ್ಲಿ ನಾಯಕ ನಟನಾಗಿ ನಟಿಸುತ್ತಿರುವ ಕಮಲ್ ಹಾಸನ್ ಅವರಿಗೆ ಶ್ರೀಮಠದ ಶಾಂತಿಮಯ ವಾತಾವರಣ ಇಷ್ಟವಾಗಿದೆಯಂತೆ. ಇಷ್ಟಕ್ಕೂ ಕಮಲ್ ಎಂದಿಗೂ ದೇಗುಲ, ಶ್ರೀಮಠಕ್ಕೆ ಹೋಗುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದವರಲ್ಲ. ಅಂಥದರಲ್ಲಿ ಈ ಮಠಕ್ಕೆ ಭೇಟಿ ನೀಡಲು ಕಾರಣವೇನು? ಯಾರ ಇಚ್ಛೆ ಮೇರೆಗೆ ಕಮಲ್ ಇಲ್ಲಿಗೆ ಬಂದಿದ್ದರು ಎಂಬ ಪ್ರಶ್ನೆ ಕಮಲ್ ಆಪ್ತರಲ್ಲಿ ಎದ್ದಿದೆ. ಬಹುಶಃ ಗೌತಮಿ ಅವರ ಸಂಪರ್ಕದಿಂದ ಕಮಲ್ ಕೂಡಾ ಬದಲಾಗಿರಬಹುದು ಎಂಬ ಮಾತುಗಳು ಕೇಳಿ ಬಂದಿದೆ.['ಉತ್ತಮ ವಿಲನ್' ಫಿನಿಷ್]

ಕಮಲ್ ಅವರ ಚಿತ್ರಗಳ ವಿಷಯಕ್ಕೆ ಬಂದರೆ ಕನ್ನಡಿಗ ರಮೇಶ್ ಅರವಿಂದ್ ನಿರ್ದೇಶನದ ಉತ್ತಮ ವಿಲನ್ ಬಿಡುಗಡೆಗೆ ಸಿದ್ದವಾಗಿದೆ. ಬಹುನಿರೀಕ್ಷಿತ ವಿಶ್ವರೂಪಂ 2 ಕೂಡಾ ಬೆಳ್ಳಿತೆರೆಗೆ ಶೀಘ್ರವೇ ಅಪ್ಪಳಿಸಲಿದೆ. ಬಹುಶಃ ನವೆಂಬರ್-ಡಿಸೆಂಬರ್ ವೇಳೆಗೆ ಕಮಲ್ ಚಿತ್ರಗಳು ಸರಣಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications











