ಭಟ್ಟರ ಡ್ರಾಮಾಕ್ಕೆ ಎದೆಗಾರಿಕೆಯ ಅತುಲ್ ಕುಲಕರ್ಣಿ
ಯೋಗರಾಜ್ ಭಟ್ ಚಿತ್ರ ಡ್ರಾಮಾಕ್ಕೆ ಪ್ರಕಾಶ್ ರೈ ಲಭ್ಯರಿಲ್ಲ. ಆ ಜಾಗಕ್ಕೆ ಮತ್ತೊಬ್ಬರನ್ನು ಹುಡಕಲಾಗುತ್ತಿದೆ. ತಮಿಳು ನಟ ಶರತ್ ಕುಮಾರ್ ಅಥವಾ ಅತುಲ್ ಕುಲಕರ್ಣಿ ಅವರಿಬ್ಬರಲ್ಲಿ ಒಬ್ಬರು ಆ ಜಾಗಕ್ಕೆ ಬರಲಿದ್ದಾರೆ ಎಂಬ ಸುದ್ದಿಯನ್ನು ಈಗಾಗಲೇ ಓದಿದ್ದೀರಿ. ತಕ್ಷಣ ಅದು ನಿಜವಾಗಿದೆ.
ಈಗ, ಅತುಲ್ ಕುಲಕರ್ಣಿ ಭಟ್ಟರ ಡ್ರಾಮಾದಲ್ಲಿ ನಟಿಸುವುದು ಪಕ್ಕಾ ಆಗಿದೆ. ಇವರು ಪ್ರಕಾಶ್ ರೈ ಅವರಂತೆ ಕನ್ನಡದವರೇ ಆಗಿದ್ದರೂ ಪರಭಾಷೆ ಹಿಂದಿ ಹಾಗೂ ಮರಾಠಿಗಳಲ್ಲಿ ಮಿಂಚುತ್ತಿರುವವರು. ಆಗಾಗ ಕನ್ನಡಕ್ಕೂ ಬರುತ್ತಿರುತ್ತಾರೆ. ಇತ್ತೀಚಿಗೆ ಅವರು 'ಎದೆಗಾರಿಕೆ' ಹೆಸರಿನ ಕನ್ನಡ ಚಿತ್ರೀಕರಣಕ್ಕೆ ಕರ್ನಾಟಕದ ಕಡೆ ಮುಖಮಾಡಿ ಹೋಗಿದ್ದರು.
ಈಗ ಮತ್ತೆ ಯೋಗರಾಜ್ ಭಟ್ಟರ ಡ್ರಾಮಾ ಕೆರೆಗೆ ಓಗೊಟ್ಟು ಬರಲು ಒಪ್ಪಿದ್ದಾರೆ. ಜೂನ್ ಹತ್ತರ ನಂತರ ಅತುಲ್ ಕುಲಕರ್ಣಿ ಬೆಂಗಳೂರಿಗೆ ಬರಲಿದ್ದಾರೆ. ಏಕೆಂದರೆ ಭಟ್ಟರ ಡ್ರಾಮಾ ಚಿತ್ರದ ಚಿತ್ರೀಕರಣ ಶೇ. 70 ರಷ್ಟು ಮುಗಿದಿದೆ. ಈಗ ಬಾಕಿ ಇರುವುದು ಅತುಲ್ ಭಾಗದ ಚಿತ್ರೀಕರಣ ಮಾತ್ರ.
ಅದೂ ಕೂಡ ಬಾಕಿ ಇರುವುದಕ್ಕೆ ಕಾರಣ ಪ್ರಕಾಶ್ ರೈ ಅವರ ತಾಯಿಯ ಅನಾರೋಗ್ಯ. ಪ್ರಕಾಶ್ ರೈಗಾಗಿ ಸಾಕಷ್ಟು ಕಾದ ಭಟ್ಟರು ಈಗ ಅನಿವಾರ್ಯವಾಗಿ ಅತುಲ್ ಅವರ ಮೊರೆ ಹೋಗಿದ್ದಾರೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಜೂನ್ ಹತ್ತರ ನಂತರ ಬಾಕಿ ಇರುವ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಲಿದೆ.
ಜುಲೈ ಕೊನೆಯಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ. ಭಟ್ಟರ ಬೇರೆ ಯಾವ ಚಿತ್ರದಲ್ಲೂ ಚಿತ್ರೀಕರಣ ಪ್ರಾರಂಭವಾದ ನಂತರ ನಟ-ನಟಿಯರ ಬದಲಾವಣೆ ಆಗಿರಲಿಲ್ಲ. ಭಾಮಾ ಬದಲು ರಾಧಿಕಾ ಪಂಡಿತ್ ಬಂದ್ರು, ಪ್ರಜ್ಞಾ ಬದಲು ಸಿಂಧು ಬಂದ್ರು. ಈಗ ಪ್ರಕಾಶ್ ರೈ ಬದಲು ಅತುಲ್ ಕುಲಕರ್ಣಿ.
ಡ್ರಾಮಾ ಚಿತ್ರಕ್ಕಿರುವ ಅಡಿಬರಹ "ಇನ್ನೂ ಈ ಕಣ್ಣಲ್ ಏನೇನ್ ನೋಡ್ಬೇಕಪ್ಪಾ..?" ಎಂಬುದಕ್ಕೆ ಸರಿಯಾಗಿ ಏನೋನೋ ಆಗುತ್ತಿದೆ. ಪ್ರೇಕ್ಷಕರಿಗೆ ನೋಡಲು ಅದಿನ್ನೇನು ಇದೆಯೋ! ಒಟ್ಟಿನಲ್ಲಿ ಅವರ್ಬಿಟ್ ಇವರ್ಬಿಟ್ ಇನ್ನೊಬ್ಬರು ಬಂದು ಚಿತ್ರೀಕರಣ ಮುಂದುವರಿದಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











