'ತರ್ಲೆವಿಲೇಜ್', 'ಪರಸಂಗ' ಸಿನಿಮಾ ಬಳಿಕ 'ದೊಡ್ಡಹಟ್ಟಿ ಬೋರೇಗೌಡ': ಶೀಘ್ರದಲ್ಲೇ ಟ್ರೈಲರ್!
ಕನ್ನಡ ಚಿತ್ರರಂಗದಲ್ಲಿ ಕೇವಲ ಪ್ಯಾನ್ ಇಂಡಿಯಾ ಸಿನಿಮಾಗಳಷ್ಟೇ ಅಲ್ಲ. ವಿಭಿನ್ನ ಕಥೆಯನ್ನು ಆಧರಿಸಿದ ಸಿನಿಮಾ ಕೂಡ ಸೆಟ್ಟೇರುತ್ತಿವೆ. ಕೆಲವು ಸಿನಿಮಾಗಳು ಇನ್ನೇನು ಬಿಡುಗಡೆಗೂ ಸಜ್ಜಾಗಿವೆ.
ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆಯಲ್ಲಿ ಎಲ್ಲಿ ಗ್ರಾಮೀಣ ಸೊಗಡಿನ ಕಥೆಗಳು ಕಣ್ಮರೆಯಾಗುತ್ತವೋ ಅನ್ನೋ ಅನುಮಾನವಿತ್ತು. ಆದ್ರೀಗ ಇಂತಹ ಕಥೆಯನ್ನೇ ಪ್ರಮುಖವಾಗಿಸಿಕೊಂಡ ಸಿನಿಮಾಗಳು ಕೂಡ ನಿರ್ಮಾಣವಾಗುತ್ತಿವೆ. ಅಂತಹ ಸಿನಿಮಾಗಳಲ್ಲೊಂದು 'ದೊಡ್ಡಹಟ್ಟಿ ಬೋರೇಗೌಡ'.
'ದೊಡ್ಡಹಟ್ಟಿ ಬೋರೇಗೌಡ' ಈ ಸಿನಿಮಾ 2021ರ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದಿದೆ. ವಿಭಿನ್ನ ಕಥೆಯನ್ನಾಧರಿಸಿದ ಈ ಚಿತ್ರ ಈಗ ಥಿಯೇಟರ್ಗೆ ಬರೋಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

'ತರ್ಲೆವಿಲೇಜ್', 'ಪರಸಂಗ', ಚಿತ್ರಗಳ ನಿರ್ದೇಶಿಸಿರುವ ಕೆಎಂ ರಘು 'ದೊಡ್ಡಹಟ್ಟಿ ಬೋರೆಗೌಡ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.
'ದೊಡ್ಡಹಟ್ಟಿ ಬೋರೇಗೌಡ' ಸಿನಿಮಾ 2021ನೇ ಸಾಲಿನ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಪ್ರಥಮ ಅತ್ಯುತ್ತಮ ಚಲನಚಿತ್ರ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕರ್ನಾಟಕದ ರಾಜ್ಯಪಾಲರು ಚಿತ್ರತಂಡಕ್ಕೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
'ದೊಡ್ಡಹಟ್ಟಿ ಬೋರೇಗೌಡ' ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಸಿನಿಮಾ. ಸರ್ಕಾರದಿಂದ ಹಳ್ಳಿಗಳಲ್ಲಿ ಬಡವರಿಗೆ ಆಶ್ರಯ ಮನೆ ನೀಡುತ್ತಾರೆ. ಸರ್ಕಾರದಿಂದ ಮಂಜೂರಾದ ಆ ಮನೆ ಪಡೆಯಲು ಒಬ್ಬ ವ್ಯಕ್ತಿ ಹೇಗೆಲ್ಲಾ ಪರದಾಡುತ್ತಾನೆ ಎಂಬುದೇ ಈ ಸಿನಿಮಾದ ಕಥಾವಸ್ತು.

ಅಂದ್ಹಾಗೆ ಈ ಸಿನಿಮಾದಲ್ಲಿ ಸಂಪೂರ್ಣ ಗ್ರಾಮೀಣ ಪ್ರತಿಭೆಗಳೇ ನಟಿಸಿದ್ದಾರೆ. ಎಲ್ಲಾ ಕಲಾವಿದರಿಗೂ ಮೂರು ತಿಂಗಳ ಅಭಿನಯ ತರಬೇತಿ ನೀಡಿ ಬಳಿಕ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಹಾಗಂತ ಗಂಭೀರ ಸಿನಿಮಾ ಅನ್ನೋ ಹಾಗಿಲ್ಲ. ಹಾಸ್ಯದ ಮೂಲಕವೇ ಪ್ರೇಕ್ಷಕರನ್ನು ತಲುಪುವ ಪ್ರಯತ್ನ ಮಾಡಿದೆ ಚಿತ್ರತಂಡ.
"ನಮ್ಮ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ಬಳಿಕ ಚಿತ್ರದ ಮೂರು ಹಾಡುಗಳನ್ನು ಒಂದಾದ ಮೇಲೆ ಒಂದರಂತೆ ಬಿಡುಗಡೆ ಮಾಡುತ್ತೇವೆ. ಆನಂತರ ಸಿನಿಮಾವನ್ನು ರಿಲೀಸ್ ಮಾಡುತ್ತೇವೆ" ಎಂದು ನಿರ್ದೇಶಕ ರಘು ಹೇಳುತ್ತಿದ್ದಾರೆ.
ಶಿವಣ್ಣ ಬೀರುಹುಂಡಿ, ಗೀತಾ, ಸಂಪತ್, ಪ್ರಕಾಶ್ ಶೆಣೈ, ಲಾವಣ್ಯ, ಅಭಿಜ್ವಲ್, ಕಲಾರತಿ ಮಹದೇವ್, ದಯಾನಂದ್ ಕಟ್ಟೆ ಹೀಗೆ ಹೊಸ ಕಲಾವಿದರ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಶಿಕುಮಾರ್ ಬಿ ಸಿ ಮತ್ತು ಕೆ ಎಂ ಲೋಕೇಶ್ ನಿರ್ಮಾಪಕರಾಗಿದ್ದರೆ, ಹರ್ಷವರ್ಧನ್ ರಾಜ್ ಸಂಗೀತ, ಕೆ ಎಂ ಪ್ರಕಾಶ್ ಸಂಕಲನ ಹಾಗೂ ನಾಗರಾಜ್ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.


Click it and Unblock the Notifications











