ಬೆಂಗಳೂರಿಗೆ ಬಂದಿದ್ದ ಬಾಲಯ್ಯಗೆ ಪತ್ರಕರ್ತರು ಕೇಳಿದ 2 ಪ್ರಶ್ನೆ ಇಷ್ಟವಾಗಲಿಲ್ಲ.!
ಲೆಜೆಂಡ್ ಬಾಲಕೃಷ್ಣ ಜನವರಿ 7 ರಂದು ಬೆಂಗಳೂರಿಗೆ ಬಂದಿದ್ದರು. 'ಎನ್.ಟಿ.ಆರ್ ಕಥಾನಾಯಕಡು' ಚಿತ್ರದ ಬಿಡುಗಡೆ ಹಿನ್ನೆಲೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಾಲಯ್ಯ, ತಮ್ಮ ಚಿತ್ರದ ಬಗ್ಗೆ ಮಾತನಾಡಿದರು.
ಎನ್.ಟಿ.ಆರ್ ಬಯೋಪಿಕ್ ಎರಡು ಭಾಗವಾಗಿ ಬರ್ತಿದೆ, ನಮ್ಮ ತಂದೆಯವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ದಿನವೇ ಸಿನಿಮಾ ತೆರೆಕಾಣುತ್ತಿದೆ. ಇದು ಎಲ್ಲರೂ ನೋಡಬೇಕಾದ ಸಿನಿಮಾ ಎಂದು ಹೇಳಿಕೊಂಡರು.
ಈ ವೇಳೆ ಮಾಧ್ಯಮದವರು ಬಾಲಕೃಷ್ಣ ಅವರಿಗೆ ಬಯೋಪಿಕ್ ಚಿತ್ರ ಹಾಗೂ ಕರ್ನಾಟಕದ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನ ಕೇಳಿದರು. ಆ ಸಮಯದಲ್ಲಿ ಪತ್ರಕರ್ತರು ಕೇಳಿದ ಎರಡು ಪ್ರಶ್ನೆಗಳು ಬಾಲಯ್ಯಗೆ ಇಷ್ಟವಾಗಿಲ್ಲ. ಅದಕ್ಕೆ ಸರಿಯಾದ ಉತ್ತರವೂ ಕೊಡಲಿಲ್ಲ. ಯಾಕೆ.? ಯಾವ ಪ್ರಶ್ನೆಗಳು? ಮುಂದೆ ಓದಿ....

ಲಕ್ಷ್ಮೀಸ್ ಎನ್.ಟಿ.ಆರ್ ಕುರಿತು ಪ್ರಶ್ನೆ
ಬಾಲಕೃಷ್ಣ ಅಭಿನಯದ ಎನ್.ಟಿ.ಆರ್ ಬಯೋಪಿಕ್ ಒಂದು ಕಡೆ. ಇನ್ನೊಂದೆಡೆ ರಾಮ್ ಗೋಪಾಲ್ ವರ್ಮಾ ಅವರು ಎನ್.ಟಿ.ಆರ್ ಕುರಿತು ಲಕ್ಷ್ಮೀಸ್ ಎನ್.ಟಿ.ಆರ್ ಎಂದು ಸಿನಿಮಾ ಮಾಡ್ತಿದ್ದಾರೆ. ಈ ಬಗ್ಗೆ ನೀವು ಏನು ಹೇಳ್ತೀರಾ ಎಂದು ಕೇಳಿದ್ದಕ್ಕೆ ''ನಾನು ಮಾಡಿರೋದು ಬಯೋಪಿಕ್, ಅದರ ಬಗ್ಗೆ ನನಗೆ ಗೊತ್ತಿಲ್ಲ, ಅವರ ಏನು ಮಾಡ್ತಿದ್ದಾರೆ ಅನ್ನೋದು ಗೊತ್ತಿಲ್ಲ'' ಎಂದು ಸುಮ್ಮನಾದರು.

ಆರ್.ಜಿ.ವಿ ವರ್ಸಸ್ ಬಾಲಯ್ಯ
ಎನ್.ಟಿ.ಆರ್ ಅವರ ಜೀವನ, ಸಿನಿಮಾ, ಕುಟುಂಬ ಕುರಿತಾಗಿ ಬಾಲಕೃಷ್ಣ ಅವರು ಸಿನಿಮಾ ಮಾಡಿದ್ದಾರೆ. ಎರಡು ಭಾಗಗಳಾಗಿ ಈ ಸಿನಿಮಾ ತಯಾರಾಗಿದೆ. ಆದ್ರೆ, ಆರ್.ಜಿ.ವಿ ಮಾಡ್ತಿರೋ ಸಿನಿಮಾ ಎನ್.ಟಿ.ಆರ್ ಗೆ ಆದ ಮೋಸದ ಕುರಿತು. ಜೊತೆಯಲ್ಲಿದ್ದವರೇ ಅವರ ಬೆನ್ನಿಗೆ ಚೂರಿ ಹಾಕಿದರು. ಒಳಸಂಚು ನಡೆಸಿ ಅವರನ್ನ ಸೋಲಿಸಿದರು ಎಂಬುದನ್ನ ವರ್ಮಾ ಹೇಳುತ್ತಿದ್ದಾರೆ. ಹೀಗಾಗಿ, ಇದು ಟಾಲಿವುಡ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಇನ್ನೊಂದು ಪ್ರಶ್ನೆ ಚಿರಂಜೀವಿ ಬ್ರದರ್ ಕುರಿತಾಗಿ
ಮತ್ತೊಂದೆಡೆ ಚಿರಂಜೀವಿ ಸಹೋದರ ನಾಗಬಾಬು ಅವರು ಎನ್.ಟಿ.ಆರ್ ಬಯೋಪಿಕ್ ಕುರಿತಾಗಿ ಕಾಮೆಂಟ್ ಮಾಡಿದ್ದು, ಆ ಬಯೋಪಿಕ್ ನಲ್ಲಿ ಎಲ್ಲ ಸುಳ್ಳು ತೋರಿಸಲಾಗ್ತಿದೆ ಎಂದಿದ್ದರು. ಇದಕ್ಕೆ ನೀವು ಏನ್ ಹೇಳ್ತೀರಾ ಎಂದಿದ್ದಕ್ಕೆ ''ನೋ ಕಾಮೆಂಟ್ಸ್'' ಅಂತ ಲೆಜೆಂಡ್ ಸುಮ್ಮನಾದರು.

ಪವನ್ ಕಲ್ಯಾಣ್ ವರ್ಸಸ್ ಬಾಲಯ್ಯ
ಸದ್ಯ, ತೆಲುಗು ರಾಜ್ಯದಲ್ಲಿ ಪವನ್ ಕಲ್ಯಾಣ್ ಮತ್ತು ಬಾಲಕೃಷ್ಣ ನಡುವೆ ರಾಜಕೀಯ ವಿವಾದ ನಡೆಯುತ್ತಿದೆ. ಈ ಸಂಬಂಧ 'ಪವನ್ ಕಲ್ಯಾಣ್ ಯಾರು ಎಂದು ನನಗೆ ಗೊತ್ತೇ ಇಲ್ಲ' ಎಂದು ಬಾಲಯ್ಯ ಟಾಂಗ್ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಪವನ್ ಕಲ್ಯಾಣ್ ಸಹೋದರ ನಾಗಬಾಬು ''ಬಾಲಯ್ಯ ಫೇಕ್ ಬಯೋಪಿಕ್ ಮಾಡ್ತಿದ್ದಾರೆ'' ಎಂದಿದ್ದರು.


Click it and Unblock the Notifications











