ಬೆಂಗಳೂರಿನಲ್ಲಿ ನಡೆಯಬೇಕಿದ್ದ 'ಸನ್ನಿ ನೈಟ್ಸ್' ಕ್ಯಾನ್ಸಲ್
ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆ ಏರ್ಪಡಿಸಲಾಗಿದ್ದ 'ಸನ್ನಿ ನೈಟ್ಸ್' ಕಾರ್ಯಕ್ರಮವನ್ನ ಕ್ಯಾನ್ಸಲ್ ಮಾಡುವಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. ಈ ಮೂಲಕ ಪಡ್ಡೆ ಹುಡುಗರ ಆಸೆ ನುಚ್ಚು ನೂರಾಗಿದೆ.
ಡಿಸೆಂಬರ್ 31 ರಂದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ 'ಸನ್ನಿ ನೈಟ್ಸ್' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದರು. ಆದ್ರೆ, ಕನ್ನಡ ಪರ ಹೋರಾಟಗಾರರು ಹಾಗೂ ಕೆಲವು ಸಮುದಾಯಗಳು 'ಸನ್ನಿ ನೈಟ್ಸ್'ಗೆ ವಿರೋಧ ವ್ಯಕ್ತಪಡಿಸಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಇದನ್ನ ಗಮನಿಸಿದ ಹೋಮ್ ಮಿನಿಸ್ಟರ್ ಇಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡವುದಿಲ್ಲ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು ''ಸನ್ನಿ ನೈಟ್ಸ್ ಕಾರ್ಯಕ್ರಮವನ್ನ ವಿರೋಧ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ, ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ನಮ್ಮ ಸಂಸ್ಕೃತಿಯಂತೆ ನಾಟಕ, ನೃತ್ಯ ಬೇಕಾದರೂ ಮಾಡಲಿ. ಒಂದು ವೇಳೆ 'ಸನ್ನಿ ನೈಟ್ಸ್' ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೇ ಹಿಂಪಡೆಯುತ್ತೇವೆ'' ಎಂದು ತಿಳಿಸಿದ್ದಾರೆ.
ಈ ಮೂಲಕ ಕಳೆದ ಕೆಲದಿನಗಳಿಂದ ಪರ-ವಿರೋಧದ ಚರ್ಚೆಯಾಗಿದ್ದ 'ಸನ್ನಿನೈಟ್ಸ್ ಗೆ ಬ್ರೇಕ್ ಬಿದ್ದಿದೆ. ಮತ್ತೊಂದೆಡೆ 'ಸನ್ನಿ ನೈಟ್ಸ್' ಕಾರ್ಯಕ್ರಮಕ್ಕೆ ಹೋಗಲು ಸಿದ್ದವಾಗಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.


Click it and Unblock the Notifications











