ಹಾಸ್ಯ ಚಕ್ರವರ್ತಿ ನರಸಿಂಹರಾಜುಗೆ ಯಾಕೀ ಅವಮಾನ
ಕನ್ನಡ ಚಿತ್ರರಂಗದ ಮರೆಯಲಾಗದ ಹಾಸ್ಯ ಚಕ್ರವರ್ತಿ ದಿವಂಗತ ನರಸಿಂಹರಾಜು ಅವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವಮಾನ ಮಾಡಿದೆ.
ಮಹಾಲಕ್ಷ್ಮೀಪುರ ವಾರ್ಡ್ ವ್ಯಾಪ್ತಿಯ ಈಜುಕೊಳ ರಸ್ತೆಗೆ ಬಿಬಿಎಂಪಿ ಕೆಲವು ತಿಂಗಳ ಹಿಂದೆ 'ಹಾಸ್ಯ ಚಕ್ರವರ್ತಿ ನರಸಿಂಹರಾಜು ರಸ್ತೆ' ಎಂದು ನಾಮಕರಣ ಮಾಡಿತ್ತು. ಈಗ ರಸ್ತೆ ನಾಮಕರಣದ ಆದೇಶವನ್ನು ಪಾಲಿಕೆ ಆಯುಕ್ತರು ರದ್ದು ಪಡಿಸಿದ್ದಾರೆ. (ಹಾಸ್ಯಚಕ್ರವರ್ತಿಗೆ ರಾಜ್ಯ ಸರಕಾರದ ಮರ್ಯಾದೆ)

ಪ್ಯಾಲೇಸ್ ಗುಟ್ಟಹಳ್ಳಿಯ ಎರಡನೇ ಮುಖ್ಯರಸ್ತೆಗೆ ನರಸಿಂಹರಾಜು ರಸ್ತೆ ಎಂದು ಈ ಹಿಂದೆ ಈಗಾಗಲೇ ಹೆಸರಿಡಲಾಗಿದೆ. ಒಂದೇ ವ್ಯಕ್ತಿಯ ಹೆಸರನ್ನು ಎರಡು ರಸ್ತೆಗೆ ಇಡುವುದು ಕೆಎಂಸಿ (Karnataka Muncipal Corporation) ಕಾಯ್ದೆಗೆ ವಿರುದ್ದ.
ಹಾಗಾಗಿ, ಈಜುಕೊಳ ರಸ್ತೆಗೆ 'ನರಸಿಂಹರಾಜು ರಸ್ತೆ' ಎಂದು ಇಟ್ಟಿದ್ದ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಪಾಲಿಕೆ ಆಯುಕ್ತ ಲಕ್ಷ್ಮೀನಾರಾಯಣ ಹೇಳಿದ್ದಾರೆ.
ಪಾಲಿಕೆಯ ಈ ನಿರ್ಧಾರಕ್ಕೆ ನರಸಿಂಹರಾಜು ಅಭಿಮಾನಿಗಳು ಮತ್ತು ಅವರ ಕುಟುಂಬದವರು ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ನರಸಿಂಹರಾಜು ಪುತ್ರಿ ಸುಧಾ ನರಸಿಂಹರಾಜು ಅವರನ್ನು 'ಫಿಲ್ಮೀಬೀಟ್' ಸಂಪರ್ಕಿಸಿದಾಗ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದು ಹೀಗೆ...

ಈಗಾಗಲೇ ನರಸಿಂಹರಾಜು ಅವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ರಸ್ತೆಯೊಂದಿದೆ ಎನ್ನುವ ವಿಚಾರ ನಮಗೆ ತಿಳಿದೇ ಇಲ್ಲ, ಮತ್ತು ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿ ಎಲ್ಲೂ ತಂದೆಯವರ ಹೆಸರಿನಲ್ಲಿ ರಸ್ತೆಯಿಲ್ಲ. (ಹಾಸ್ಯ ಚಕ್ರವರ್ತಿಯನ್ನು ಹೇಗೆ ಮರೆಯಲು ಸಾಧ್ಯ)
ಸರಕಾರ, ಕಾಯ್ದೆ, ಕಾನೂನು ಬಗ್ಗೆ ನಮಗೆ ಗೌರವವಿದೆ. ಪಾಲಿಕೆಯ ಈ ನಿರ್ಧಾರದಿಂದ ಸ್ವರ್ಗದಲ್ಲಿರುವ ನಮ್ಮ ತಂದೆಗೂ ಬೇಸರವಾಗಬಹುದು. ರಸ್ತೆಗೆ ಹೆಸರಿಡುವುದು ಕಲಾವಿದನೊಬ್ಬನಿಗೆ ನೀಡುವ ಗೌರವ.
ನಾಮಕರಣ ಮಾಡುವ ಮೊದಲು ಅಥವಾ ಅದರ ನಂತರ ಪಾಲಿಕೆ ಈ ನಿರ್ಣಯ ತೆಗೆದುಕೊಳ್ಳುವ ಮುನ್ನ ದಾಖಲೆ ಪರಿಶೀಲಿಸ ಬಹುದಾಗಿತ್ತು. ಎರಡು ರಸ್ತೆಗೆ ಮಹಾನ್ ಕಲಾವಿದರ ಹೆಸರಿದ್ದರೆ ಅದರಲ್ಲಿ ತಪ್ಪು ಇಲ್ಲ ಎನ್ನುವುದು ನಮ್ಮ ಅನಿಸಿಕೆ ಎಂದು ಸುಧಾ ನರಸಿಂಹರಾಜು ಬೇಸರ ವ್ಯಕ್ತ ಪಡಿಸಿಕೊಂಡಿದ್ದಾರೆ.


Click it and Unblock the Notifications











