'ಸ್ಟಾರ್'ಗಳನ್ನ ಹಿಂದಿಕ್ಕಿ ಮುನ್ನುಗ್ಗಿದ ವರ್ಷದ 'ದಿ ಬೆಸ್ಟ್' ಚಿತ್ರಗಳು
ಸಿನಿಮಾ ಹಿಟ್ ಆಗ್ಬೇಂದ್ರೆ 'ಸ್ಟಾರ್' ಇರಬೇಕು. ಅದು ನಾಯಕನಾಗಿರಬಹುದು ಅಥವಾ ನಾಯಕಿಯಾಗಿರಬಹುದು, ಇವರಲ್ಲದೇ ಡೈರೆಕ್ಟರ್ ಆಗಿರಬಹುದು. ಒಟ್ನಲ್ಲಿ, ಯಾರೋ ಒಬ್ಬ ಸ್ಟಾರ್ ಇದ್ದಾಗ ಮಾತ್ರ ಆ ಚಿತ್ರವನ್ನ ಎಲ್ಲರಿಗೂ ತಲುಪಿಸಲು ಸಾಧ್ಯ ಎಂಬ ಮಾತಿದೆ.
ಈ ಸಂಪ್ರದಾಯವನ್ನ ಮುರಿದು, ಕಥೆ, ನಿರೂಪಣೆ ಚೆನ್ನಾಗಿದ್ರೆ ಸ್ಟಾರ್ ಗಳು ಬೇಕಿಲ್ಲ ಎಂದು ತೋರಿಸುವ ಚಿತ್ರಗಳು ಪ್ರತಿವರ್ಷವೂ ಇದ್ದೇ ಇರುತ್ತೆ. ಈ ವರ್ಷವೂ ಅಂತಹ ಸಿನಿಮಾಗಳು ಗಮನ ಸೆಳೆದಿದೆ.
ಸ್ಕ್ರಿಪ್ಟ್ ಮಾತ್ರವಲ್ಲದೇ ಆಕ್ಟಿಂಗ್ ಹಾಗೂ ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲೂ ಕೆಲವು ಚಿತ್ರಗಳು ದಿ ಬೆಸ್ಟ್ ಎನಿಸಿಕೊಂಡಿವೆ. ಹಾಗಿದ್ರೆ, ಈ ವರ್ಷ ಸೈಲೆಂಟ್ ಆಗಿ ಬಂದು ಭಾರಿ ಸದ್ದು ಮಾಡಿದ ಚಿತ್ರಗಳು ಯಾವುದು? ಮುಂದೆ ಓದಿ.....

ಚೂರಿಕಟ್ಟೆ
ಜನವರಿ ತಿಂಗಳಲ್ಲಿ ತೆರೆಕಂಡಿದ್ದ 'ಚೂರಿಕಟ್ಟೆ' ಸಿನಿಮಾ ಪ್ರೇಕ್ಷಕರ ಜೊತೆಗೆ ವಿಮರ್ಶಕರ ಮೆಚ್ಚುಗೆ ಗಳಿಸಿಕೊಂಡಿತ್ತು. ಕ್ರೈಂ ಥ್ರಿಲ್ಲರ್ ಆಗಿದ್ದ ಈ ಚಿತ್ರವನ್ನ ರಘು ಶಿವಮೊಗ್ಗ ನಿರ್ದೇಶನ ಮಾಡಿದ್ದರು. ಪ್ರವೀಣ್ ತೇಜ್, ಬಾಲಾಜಿ ಮನೋಹರ್, ಶರತ್ ಲೋಹಿತಾಶ್ವ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿಲ್ಲ ಅಂದ್ರು, ಸಿನಿಮಾ ಮೇಕಿಂಗ್, ನಟನೆಯಿಂದ ಚೆನ್ನಾಗಿದೆ ಎನಿಸಿಕೊಂಡಿದೆ.

ಸದ್ದು ಮಾಡಿದ 'ಗುಳ್ಟು'
ಸೈಬರ್ ಕ್ರೈಂ ಕಥೆ ಹೊಂದಿದ್ದ ಗುಳ್ಟು ಸಿನಿಮಾ ಈ ವರ್ಷದ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಬಾಕ್ಸ್ ಅಫೀಸ್ ನಲ್ಲೂ ತಕ್ಕ ಮಟ್ಟಿಗೆ ಸದ್ದು ಮಾಡಿದ ಈ ಚಿತ್ರ, ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದುಕೊಂಡಿತ್ತು. ನವೀನ್ ಶಂಕರ್, ಸೋನು ಗೌಡ, ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಈ ಸಿನಿಮಾವನ್ನ ಜನಾರ್ಧನ್ ಚಿಕ್ಕಣ್ಣ ನಿರ್ದೇಶನ ಮಾಡಿದ್ದರು.

ಹೆಬ್ಬೆಟ್ ರಾಮಕ್ಕ
ಮಹಿಳಾ ಮೀಸಲಾತಿಯ ದುರುಪಯೋಗ, ಕಪಟ ರಾಜಕಾರಣಿಯ ಅಧಿಕಾರದ ದಾಹ, ಮಧ್ಯಮ ವರ್ಗದ ಕುಟುಂಬದಲ್ಲಿನ ದುಡ್ಡಿನ ಮೋಹ, ಒಂದು ಹಳ್ಳಿಯಲ್ಲಿ ನಡೆಯಬಹುದಾದ ರಾಜಕೀಯ ಕುತಂತ್ರ, ಒಂದು ಹೆಣ್ಣು ಮನಸ್ಸು ಮಾಡಿದರೆ ಸಮಾಜವನ್ನೇ ಉದ್ಧಾರ ಮಾಡಬಹುದು ಎಂಬ ಸಂದೇಶ... ಈ ಎಲ್ಲವನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಕೊಟ್ಟಿದ್ದ ಚಿತ್ರ 'ಹೆಬ್ಬೆಟ್ ರಾಮಕ್ಕ'. ಈ ಚಿತ್ರದ ನಟನೆಗಾಗಿ ತಾರಾ ಅವರಿಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಹಾಗೂ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.

ಆ ಕರಾಳ ರಾತ್ರಿ
ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದ 'ಆ ಕರಾಳ ರಾತ್ರಿ' ಸಿನಿಮಾ ಸಿಂಪಲ್ ಆಗಿ ಎಲ್ಲರಿಗೂ ಇಷ್ಟವಾಗಿತ್ತು. ಕಾರ್ತಿಕ್ ಜಯರಾಂ, ಅನುಪಮಾ ಗೌಡ, ರಂಗಾಯಣ ರಘು, ವೀಣಾ ಸುಂದರ್, ನವೀನ್ ಕೃಷ್ಣ ಕಾಣಿಸಿಕೊಂಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಕಮ್ಮಿ ಮಾಡಿದ್ರು, ಪ್ರೇಕ್ಷಕರಿಂದ ಶಬ್ಬಾಶ್ ಎನಿಸಿಕೊಂಡಿತ್ತು.

ಅಮ್ಮಚ್ಚಿಯೆಂಬ ನೆನಪು
ಚಂಪಾ ಶೆಟ್ಟಿ ನಿರ್ದೇಶನದ 'ಅಮ್ಮಚ್ಚಿಯೆಂಬ ನೆನಪು' ತುಂಬಾ ಸೈಲೆಂಟ್ ಆಗಿ ಬಂದು ಜನಪ್ರಿಯತೆ ಗಳಿಸಿದ ಸಿನಿಮಾ. 80-90ರ ದಶಕದಲ್ಲಿ ಮಹಿಳೆಯರು ಎದುರಿಸಿದ ಕಟ್ಟುಪಾಡುಗಳ ಕುರಿತ ಮಹಿಳಾ ಪ್ರಧಾನ ಚಿತ್ರವಿದು. ರಾಜ್.ಬಿ.ಶೆಟ್ಟಿ, ವಿಶ್ವನಾಥ ಉರಾಳ, ದೀಪಿಕಾ ಆರಾಧ್ಯ, ವೈಜಯಂತಿ ಅಡಿಗ ಮುಂತಾದವರು ಅಭಿನಯಿಸಿದ್ದ ಈ ಚಿತ್ರ ಕ್ಲಾಸ್ ಆಡಿಯನ್ಸ್ ಗೆ ಹೇಳಿ ಮಾಡಿಸಿದ ಸಿನಿಮಾ ಆಗಿತ್ತು.

ಸರ್ಕಾರಿ ಹಿ ಪ್ರಾ ಶಾಲೆ
ಈ ವರ್ಷ ದೊಡ್ಡ ಹಿಟ್ ಆದ ಚಿತ್ರಗಳ ಪೈಕಿ 'ಸರ್ಕಾರಿ ಹಿ.ಪ್ರಾ.ಶಾಲೆ, ಕಾಸರಗೋಡು. ಕೊಡುಗೆ ರಾಮಣ್ಣ ರೈ' ಚಿತ್ರವೂ ಒಂದು. ಕರ್ನಾಟಕಕ್ಕೆ ಸಿಗದ ಕಾಸರಗೋಡಿನಲ್ಲಿ ಕನ್ನಡ ಶಾಲೆಯನ್ನ ಉಳಿಸಿಕೊಳ್ಳಲು ಶಾಲೆಯ ಮಕ್ಕಳು ಪಡುವ ಪಾಡೇ ಈ ಚಿತ್ರದ ಹೂರಣ. ಬಾಕ್ಸ್ ಆಫೀಸ್ ನಲ್ಲೂ ಈ ಸಿನಿಮಾ ಹೆಚ್ಚು ಗಳಿಕೆ ಕಂಡಿದೆ. ಅನಂತ್ ನಾಗ್, ರಂಜನ್, ಸಂಪತ್, ಪ್ರಮೋದ್ ಶೆಟ್ಟಿ, ರಿಷಭ್ ಶೆಟ್ಟಿ ಅಭಿನಯಿಸಿದ್ದ ಚಿತ್ರವನ್ನ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದರು.

ಒಂದಲ್ಲಾ ಎರಡಲ್ಲಾ
'ರಾಮಾ ರಾಮಾ ರೇ' ಸಿನಿಮಾ ಮಾಡಿದ್ದ ಸತ್ಯ ಪ್ರಕಾಶ್ ಈ ವರ್ಷ 'ಒಂದಲ್ಲಾ ಎರಡಲ್ಲಾ' ಎಂಬ ಸಿನಿಮಾ ಮಾಡಿ ಗೆದ್ದರು. ಯಾವುದೇ ಅಬ್ಬರ, ಸದ್ದು ಮಾಡದೇ ಸೈಲೆಂಟ್ ಆಗಿ ವಿಜಯ ಪತಾಕೆ ಹಾರಿಸಿದರು.

ಪ್ರಯಾಣಿಕರ ಗಮನಕ್ಕೆ
ಸಿಂಪಲ್ ಕಥೆ, ಸಿಂಪಲ್ ಸ್ಕ್ರಿಪ್ಟ್ ಮೂಲಕ ಬಂದಿದ್ದ ಒಂದೊಳ್ಳೆ ಸಿನಿಮಾ 'ಪ್ರಯಾಣಿಕರ ಗಮನಕ್ಕೆ'. ಮನೋಹರ್ ನಿರ್ದೇಶನ ಮಾಡಿದ್ದ 'ಪ್ರಯಾಣಿಕರ ಗಮನಕ್ಕೆ' ಚಿತ್ರದಲ್ಲಿ ಭರತ್, ಲೋಕೇಶ್ ಕುಮಾರ್, ಅಮಿತಾ ರಂಗನಾಥ್, ರಾಜ್ ದೀಪಕ್ ಶೆಟ್ಟಿ ಅಭಿನಯಿಸಿದ್ದರು.

ಇರುವುದೆಲ್ಲವ ಬಿಟ್ಟು
ನೋಡೋದಕ್ಕೆ ಕಮರ್ಷಿಯಲ್ ಆಗಿದ್ದ 'ಇರುವುದೆಲ್ಲವ ಬಿಟ್ಟು' ಸಿನಿಮಾ ಹೊಸ ರೀತಿಯ ಜಾನರ್ ಎನ್ನಬಹುದು. ಮೇಘನಾ ರಾಜ್, ಶ್ರೀಮಹಾದೇವ್, ತಿಲಕ್ ಅಭಿನಯಿಸಿದ್ದ ಈ ಸಿನಿಮಾ ಹೊಸದೊಂದು ಕಥೆಯೊಂದಿಗೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿತ್ತು. ಹಾಗ್ನೋಡಿದ್ರೆ, ಈ ಸಿನಿಮಾನೂ ಒಂದು ರೀತಿ ಆಫ್ ಬೀಟ್ ಚಿತ್ರವಾಗಿದೆ.


Click it and Unblock the Notifications











