ಮಹಿಳೆಯರಿಗೆ ಬಾಗಿನ ನೀಡಿದ 'ಭಾಗೀರತಿ' ಭಾವನಾ

ಹರ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಹಳ ಅದ್ದೂರಿಯಾಗಿ ನಿರ್ಮಾಪಕ ಶ್ರೀನಿವಾಸ್ 'ಭಾಗೀರತಿ'ಯನ್ನು ಬಿಡುಗಡೆ ಮಾಡಿದರು. ಕಲಾತ್ಮಕ ಚಿತ್ರಗಳ ಬಿಡುಗಡೆ ಸರಳವಾಗಾಗುತ್ತದೆ ಎಂಬ ಮಾತು ಈ ಚಿತ್ರದಿಂದ ದೂರವಾಗಿದೆ.
ಚಿತ್ರ ಬಿಡುಗಡೆಯ ಮಧ್ಯಾಹ್ನದ ಪ್ರದರ್ಶನಕ್ಕೆ ಬಂದ ಮಹಿಳೆಯರಿಗೆ ಬಾಗಿನ ನೀಡಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. 'ಭಾಗೀರತಿ' ಪಾತ್ರಧಾರಿ ಭಾವನಾ, ವತ್ಸಲಾಮೋಹನ್, ನಿರ್ದೇಶಕ ಬರಗೂರು ರಾಮಚಂದ್ರಪ್ಪನವರ ಶ್ರೀಮತಿಯವರು ಮಹಿಳೆಯರಿಗೆ ಬಾಗಿನ ನೀಡಿದರು.
ಬರಗೂರು ರಾಮಚಂದ್ರಪ್ಪ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳನ್ನು ನಿರ್ದೇಶಕರೇ ಬರೆದಿದ್ದಾರೆ. ಹರೀಶ್ ಎನ್ ಸೊಂಡೇಕೊಪ್ಪರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಶ್ಅರಸ್ ಸಂಕಲನಕಾರರಾಗಿದ್ದಾರೆ.
ಕಿಶೋರ್, ಭಾವನಾ, ಶ್ರೀನಾಥ್, ಹೇಮಚೌಧರಿ, ತಾರಾ, ಶಿವಧ್ವಜ್, ರವಿಶಂಕರ್, ಪದ್ಮಾವಾಸಂತಿ, ವತ್ಸಲಾಮೋಹನ್, ರಾಧಾರಾಮಚಂದ್ರ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜನಪದ ಕತೆಯ ಮೂಲ ಆಶಯಗಳಿಗೆ ಧಕ್ಕೆ ಬರದಂತೆ ಚಿತ್ರಕ್ಕೆ ಸಿನಿಮಾ ರೂಪ ನೀಡಿರುವಲ್ಲಿ ಬರಗೂರರ ಪ್ರೌಢಿಮೆ ಎದ್ದು ಕಾಣುತ್ತದೆ.
ಕೇವಲ ಐದು ಪುಟಗಳ ಕಥನಗೀತೆಯನ್ನಿಟ್ಟುಕೊಂಡು ಸಿನಿಮಾ ಮಾಡಿರುವುದು ನಿಜಕ್ಕೂ ಸುಲಭದ ಕೆಲಸವಲ್ಲ. ಹಾಗಂತ ಚಿತ್ರದಲ್ಲಿ ನಿಧಾನಗತಿಯ ಶೈಲಿ ಇಲ್ಲ. ಜನರನ್ನು ತಲುಪುವ ಜನಪ್ರಿಯ ಶೈಲಿಯನ್ನೇ ಬರಗೂರು ಇಲ್ಲಿ ಬಳಸಿಕೊಂಡಿದ್ದಾರೆ.
ರಾಜ್ಯದ ಒಂದೇ ಒಂದು ಚಿತ್ರಮಂದಿರದಲ್ಲಿ ಕೂಡಾ ಬಿಡುಗಡೆಯಾಗದೆ ಅತ್ಯುತ್ತಮ ಚಿತ್ರ ಅಂತೆಲ್ಲ ಹೆಸರು ಗಳಿಸಿದ ಚಿತ್ರಗಳಿವೆ. ಜನರ ವೀಕ್ಷಣೆಗೇ ಸಿಕ್ಕದಿದ್ದರೂ, ಅವು ಅತ್ಯುತ್ತಮ ಚಿತ್ರ ಆಗುವ ವಿಪರ್ಯಾಸ ಹೇಗೆಂದು ಇವತ್ತಿಗೂ ನಿಗೂಢ. ಪುಣ್ಯಕ್ಕೆ ಶ್ರೀನಿವಾಸ್ ಆ ಕೆಟಗರಿಗೆ ಸೇರಿಲ್ಲ.
'ಭಾಗಿರತಿ' ನಿರ್ದೇಶಕ ಬರಗೂರು ರಾಮಚಂದ್ರಪ್ಪನವರಿಗೇ ದಿಗ್ಭ್ರಮೆಯಾಗುವಂತೆ ಅವರು ಇದರ ಪ್ರಚಾರ ಹಾಗು ಬಿಡುಗಡೆಗೆ ಹಣ- ಶ್ರಮ ಖರ್ಚು ಮಾಡುತ್ತಿದ್ದಾರೆ. ಹಾಗಾಗಿ ಜೂನ್ ಎಂಟನೆ ತಾರೀಖು ಭಾಗಿರತಿಯನ್ನ ಆಸಕ್ತ ಪ್ರೇಕ್ಷಕರು ನೋಡಿ ಕಣ್ತುಂಬಿಕೊಳ್ಳಬಹುದು. (ಒನ್ಇಂಡಿಯಾ ಕನ್ನಡ)


Click it and Unblock the Notifications











