ಗುರು ಶಿಷ್ಯರು ಚಿತ್ರದಲ್ಲಿ ಬುಲೆಟ್ ಪ್ರಕಾಶ್ ಮಗನ ಪಾತ್ರಕ್ಕೆ ಆಯ್ಕೆಯಾಗಿದ್ರು ಬೇರೆ ಹುಡುಗರು! ನಂತರ ಆಗಿದ್ದೇನು?
ಚೌಕ ಮತ್ತು ರಾಬರ್ಟ್ ರೀತಿಯ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ತರುಣ್ ಸುಧೀರ್ ಇದೀಗ ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ರೀತಿಯ ಉತ್ತಮ ಚಿತ್ರವನ್ನು ನಿರ್ದೇಶಿಸಿದ್ದ ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಮುಂದಿನ ಚಿತ್ರ ಗುರುಶಿಷ್ಯರುಗೆ ತರುಣ್ ಸುಧೀರ್ ಹಾಗೂ ಶರಣ್ ಬಂಡವಾಳ ಹೂಡಿದ್ದಾರೆ.
ಈ ಚಿತ್ರದಲ್ಲಿ ಶರಣ್ ನಿರ್ಮಾಣದ ಜತೆಗೆ ನಾಯಕ ನಟನಾಗಿ ಅಭಿನಯಿಸುತ್ತಿದ್ದು ಗುರುವಾಗಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ 12 ಹುಡುಗರು ಶರಣ್ ಶಿಷ್ಯರಾಗಿ ಚಿತ್ರದಲ್ಲಿ ಇರಲಿದ್ದು, ಈ ಪೈಕಿ 6 ಹುಡುಗರು ಕನ್ನಡದ ಸ್ಟಾರ್ ನಟರ ಮಕ್ಕಳಾಗಿದ್ದಾರೆ. ನಾಯಕ ನಟ ಶರಣ್ ಪುತ್ರ ಹೃದಯ್, ರವಿಶಂಕರ್ ಗೌಡ ಪುತ್ರ ಸೂರ್ಯ, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ನವೀನ್ ಕೃಷ್ಣ ಪುತ್ರ ಹರ್ಷಿತ್, ಪ್ರೇಮ್ ಮಗ ಏಕಾಂತ್, ರಾಜು ಗೌಡ ಮಗ ಮಣಿಕಂಠ ಅಭಿನಯಿಸುತ್ತಿದ್ದಾರೆ.
ಚಿತ್ರದಲ್ಲಿ ಖೋ ಖೋ ಆಟ ಪ್ರಮುಖ ಅಂಶವಾಗಿದ್ದು, ಆ್ಯಕ್ಟಿವ್ ಆಗಿ ಅಭಿನಯಿಸಬೇಕಾದ ಬಾಲ ನಟರ ಅವಶ್ಯಕತೆಯಿತ್ತು. ಹೀಗಾಗಿಯೇ ಈ ತಾರೆಯರ ಮಕ್ಕಳನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ. ಇನ್ನು ಸಿನಿ ಡ್ರಾಪ್ ಎಂಬ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿರುವ ನಿರ್ಮಾಪಕ ತರುಣ್ ಸುಧೀರ್ ಈ ಪಾತ್ರಗಳಿಗೆ ಸ್ಟಾರ್ ಮಕ್ಕಳನ್ನೇ ಏಕೆ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.

ಮೊದಲು ಈ ವಿಚಾರ ತಲೆಯಲ್ಲಿರಲಿಲ್ಲ
ಚಿತ್ರದಲ್ಲಿ ಮಕ್ಕಳ ಪಾತ್ರಕ್ಕೆ ತಾರೆಯರ ಪುತ್ರರನ್ನು ಆಯ್ಕೆ ಮಾಡಿಕೊಂಡಿರುವುದರ ಕುರಿತು ಮಾತನಾಡಲು ಆರಂಭಿಸಿದ ತರುಣ್ ಸುಧೀರ್ ಮೊದಲಿಗೆ ಈ ಯೋಜನೆ ನಮ್ಮಲ್ಲಿರಲಿಲ್ಲ ಎಂದು ಹೇಳಿಕೆ ನೀಡಿದರು. ಈ ಹುಡುಗರ ಪಾತ್ರಕ್ಕೆ ಆಡಿಷನ್ ಕರೆಯನ್ನು ಘೋಷಣೆ ಮಾಡಲಾಗಿತ್ತು ಹಾಗೂ ಸುಮಾರು 600 ಅರ್ಜಿಗಳು ಸಹ ಬಂದಿದ್ದವು ಮತ್ತು ಈ ಪೈಕಿ 180 ಹುಡುಗರನ್ನು ಶಾರ್ಟ್ ಲಿಸ್ಟ್ ಕೂಡ ಮಾಡಲಾಗಿತ್ತು ಎಂದಿದ್ದಾರೆ. ಆದರೆ ಅಂತಿಮ ಹಂತದಲ್ಲಿ ತಾರೆಯರ ಮಕ್ಕಳನ್ನೇಕೆ ಈ ಚಿತ್ರದಲ್ಲಿ ಬಳಸಿಕೊಳ್ಳಬಾರದು, ಯಾರಿಗೆ ನಟನೆ ಬರುತ್ತದೆಯೋ ಅಂಥವರನ್ನು ಚಿತ್ರದಲ್ಲಿ ನಟಿಸಲು ಆರಿಸಿಕೊಳ್ಳೋಣ ಎಂದು ತೀರ್ಮಾನಿಸಿ ನಂತರ ಈ 6 ಜನರನ್ನು ಆಯ್ಕೆ ಮಾಡಿದೆವು ಎಂದು ಆಯ್ಕೆಯ ಹಿಂದಿನ ಸತ್ಯಾಂಶ ಬಿಚ್ಚಿಟ್ಟರು ತರುಣ್ ಸುಧೀರ್.

ವಿಡಿಯೋ ನೋಡಿ ಅವಕಾಶ ಕೊಟ್ಟ ತರುಣ್ ಸುಧೀರ್
ಇನ್ನೂ ಮುಂದುವರಿದು ಮಾತನಾಡಿದ ತರುಣ್ ಸುಧೀರ್ ತಾನು ಪ್ರೇಮ್ ಮಗ ಏಕಾಂತ್, ಶರಣ್ ಮಗ ಹೃದಯ್ ಹಾಗೂ ಬುಲೆಟ್ ಪ್ರಕಾಶ್ ಮಗ ರಕ್ಷಿತ್ ಅವರ ಕೆಲವೊಂದಿಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದಾಗಿ ಹಾಗೂ ಅವರು ಜಿಮ್ನಾಸ್ಟಿಕ್, ಡಾನ್ಸ್ ಮಾಡುವುದನ್ನು ಗಮನಿಸಿದ್ದಾಗಿ ಹೇಳಿಕೊಂಡರು. ಹೀಗಾಗಿಯೇ ಈ ಹುಡುಗರನ್ನೇ ಏಕೆ ಚಿತ್ರದಲ್ಲಿ ಬಳಸಿಕೊಳ್ಳಬಾರದು ಎಂದು ಆಡಿಷನ್ ನಡೆಸಿ ಆಯ್ಕೆ ಮಾಡಿದೆವು ಎಂದು ತಿಳಿಸಿದ್ದಾರೆ. ಈ ಮೂಲಕ ಈ ಪಾತ್ರಗಳಿಗೆ ತಾರೆಯರ ಮಕ್ಕಳಿಗೂ ಮುನ್ನ ಬೇರೆ ಹುಡುಗರ ಆಯ್ಕೆ ಪ್ರಕ್ರಿಯೆ ನಡೆದಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

ಇದೇ 23ಕ್ಕೆ ಗುರು ಶಿಷ್ಯರು ತೆರೆಗೆ
ಇನ್ನು ಈ ಸಿನಿಮಾ ಇದೇ ತಿಂಗಳ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಆಣೆ ಮಾಡಿ ಹೇಳುತೀನಿ ಹಾಡು ದೊಡ್ಡ ಮಟ್ಟದ ಹಿಟ್ ಆಗಿದ್ದು, ಚಿತ್ರದ ಟ್ರೈಲರ್ ಕೂಡ ಪ್ರೇಕ್ಷಕರ ಮನ ಗೆದ್ದಿದೆ.

ಸೈಮಾ ಅವಾರ್ಡ್ ಬಗ್ಗೆ ತರುಣ್ ಸುಧೀರ್ ಮಾತು
ಇನ್ನು ಈ ಬಾರಿಯ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ರಾಬರ್ಟ್ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದದ್ದರ ಕುರಿತು ತರುಣ್ ಸುಧೀರ್ ಮಾತನಾಡಿದರು. ಅದು ತಂಡದ ಕೆಲಸಕ್ಕಾಗಿ ಸಿಕ್ಕ ಪ್ರಶಸ್ತಿ ಎಂದ ತರುಣ್ ಸುಧೀರ್ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸೂಚಿಸಿದ ವೇದಿಕೆಯಲ್ಲಿ ಆ ಪ್ರಶಸ್ತಿ ಪಡೆದದ್ದು ತನ್ನ ಪುಣ್ಯ ಎಂದರು.


Click it and Unblock the Notifications











