ಉಪ್ಪಿ ರಾಜಕೀಯದ ಬಗ್ಗೆ ಸಿನಿಮಾ ಮತ್ತು ರಾಜಕೀಯ ಗಣ್ಯರ ಅಭಿಪ್ರಾಯವೇನು?
ನಟ ಉಪೇಂದ್ರ ರಾಜಕೀಯಕ್ಕೆ ಬರುವ ವಿಷಯ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಉಪ್ಪಿ ರಾಜಕೀಯಕ್ಕೆ ಬರಲಿ ಎಂದು ಸ್ವಾಗತಿಸುತ್ತಿದ್ದರೇ, ಇನ್ನೂ ಕೆಲವರು ಇದು ಸಿನಿಮಾದಷ್ಟು ಸುಲಭವಲ್ಲ ಎಂದು ಹೇಳುತ್ತಿದ್ದಾರೆ. ಇದೆಲ್ಲದರ ನಡುವೆ ಉಪ್ಪಿ ರಾಜಕೀಯ ಪ್ರವೇಶದ ಬಗ್ಗೆ ಕೆಲ ಸಿನಿಮಾ ಮತ್ತು ರಾಜಕೀಯದ ಗಣ್ಯರು ಮಾತನಾಡಿದ್ದಾರೆ.
ಉಪೇಂದ್ರ ರಾಜಕೀಯಕ್ಕೆ ಬರುವ ಬಗ್ಗೆ ನಿರ್ದೇಶಕ ಸೀತಾರಾಮ್, ನಟ ಹಾಗೂ ಕಾಂಗ್ರೆಸ್ ಮುಖಂಡ ಬಿಸಿ ಪಾಟೀಲ್, ಚಿಂತಕ ಚಕ್ರವರ್ತಿ ಸೂಲಿಬಲೆ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹಾಗಿದ್ರೆ, ಉಪ್ಪಿ ರಾಜಕೀಯದ ಬಗ್ಗೆ ಯಾರು ಏನಂದ್ರು? ಮುಂದಿದೆ ಓದಿ...

ಟಿ.ಎನ್. ಸೀತಾರಾಮ್
''ಉಪೇಂದ್ರ ರಾಜಕೀಯಕ್ಕೆ ಬರಲು ಇದು ಸೂಕ್ತ ಕಾಲ. ರಾಜಕೀಯಕ್ಕೆ ಬಂದು ಪ್ರಾಮಾಣಿಕ ಸೇವೆ ಸಲ್ಲಿಸಲಿ. ಹೊಸಪಕ್ಷ ಕಟ್ಟಿ ರಾಜಕೀಯಕ್ಕೆ ಬರುವುದಾದರೆ ಒಳ್ಳೆಯದೇ. ಆದರೆ ಇದು ಸವಾಲಿನ ಕೆಲಸ, ಅಗ್ನಿಪರೀಕ್ಷೆ. ಈ ಎಲ್ಲಾ ಅಗ್ನಿ ಪರೀಕ್ಷೆಯನ್ನು ಮೆಟ್ಟಿ ನಿಲ್ಲಬೇಕು. ನಟ ಉಪೇಂದ್ರಗೆ ಆಲ್ ದಿ ಬೆಸ್ಟ್'' - ಟಿ.ಎನ್. ಸೀತಾರಾಮ್, ನಿರ್ದೇಶಕ

ಬಿ.ಸಿ. ಪಾಟೀಲ್
''ಉಪೇಂದ್ರ ಅವರಿಗೆ ಒಳ್ಳೆಯ ಚಿಂತನೆಗಳಿವೆ. ಅಂತಹವರು ರಾಜಕೀಯಕ್ಕೆ ಬರಬೇಕು. ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ನಮ್ಮ ಸ್ವಾಗತವಿದೆ'' - ಬಿ.ಸಿ. ಪಾಟೀಲ್, ನಟ, ಕಾಂಗ್ರೆಸ್ ಮುಖಂಡ

ಮಾಳವಿಕಾ ಅವಿನಾಶ್ - ನಟಿ, ಬಿಜೆಪಿ ಸದಸ್ಯೆ
''ಉಪೇಂದ್ರ ಅವರಿಗೆ ಜನಪರ ಕಾಳಜಿಯಿದೆ. ಸಿನಿಮಾಗಳಲ್ಲಿ ಅದು ವ್ಯಕ್ತವೂ ಆಗಿದೆ. ಆದರೆ, ರಾಜಕೀಯ ಪಕ್ಷಕ್ಕೆ ಬರುವುದಾದರೆ ಪಕ್ಷದ ಕೆಲವು ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಬರಬೇಕು. ಇಲ್ಲದೇ ಇದ್ದರೆ ಕಷ್ಟ''- ಮಾಳವಿಕಾ ಅವಿನಾಶ್. ಬಿಜೆಪಿ ಸದಸ್ಯೆ

ಸುರೇಶ್ ಕುಮಾರ್, ಬಿಜೆಪಿ ಮುಖಂಡ
''ಉಪೇಂದ್ರ ಅವರ ಬಳಿ ಒಳ್ಳೆಯ ಆಲೋಚನೆಗಳಿವೆ. ಚಿಂತನೆಗಳಿವೆ. ಅಂತಹ ಹೊಸ ಆಲೋಚನೆಗಳಿರುವವರು ರಾಜಕೀಯಕ್ಕೆ ಬರಲಿ. ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿಲ್ಲ'' - ಸುರೇಶ್ ಕುಮಾರ್, ಬಿಜೆಪಿ ಮುಖಂಡ

ಚಕ್ರವರ್ತಿ ಸೂಲಿಬೆಲೆ, ಚಿಂತಕ
''ಅವರ ಚಿತ್ರಗಳಲ್ಲಿ ದೇಶದ ಕುರಿತು ಹಲವು ಚಿಂತನೆಗಳನ್ನು ಹೊರಹಾಕಿದ್ದಾರೆ. ಅವುಗಳನ್ನು ನಾನು ನೋಡಿದ್ದೇನೆ.. ಆದರ್ಶದ ಚಿಂತನೆಗಳಿವೆ. ಪ್ರಸ್ತುತ ರಾಜಕೀಯದಲ್ಲಿ ಸಮರ್ಥ ನಾಯಕತ್ವ ಇಲ್ಲ. ಅಂಥಾದ್ದೊಂದು ಸಾಮರ್ಥ್ಯ ಬೆಳೆಸಿಕೊಂಡು ಉಪೇಂದ್ರ ರಾಜಕೀಯಕ್ಕೆ ಬರುವುದಾದರೆ ನನ್ನ ಸ್ವಾಗತವಿದೆ. ಅವರ ನಿರ್ಧಾರವನ್ನು ಎದುರು ನೋಡುತ್ತಿದ್ದೇನೆ''- ಚಕ್ರವರ್ತಿ ಸೂಲಿಬೆಲೆ, ಚಿಂತಕ

ಡಿಕೆಶಿ
''ಇಷ್ಟು ದಿನ ಉಪೇಂದ್ರ ಬಣ್ಣ ಹಾಕಿ ಸಿನಿಮಾ ಮಾಡುತ್ತಿದ್ದರು. ಈಗ ಬಣ್ಣ ಹಚ್ಚದೆ ರಾಜಕೀಯ ಮಾಡಲಿ ಉಪೇಂದ್ರ ರಾಜಕೀಯಕ್ಕೆ ಬಂದರೆ ಸ್ವಾಗತ. ಒಳ್ಳೆಯದಾಗಲಿ''- ಡಿಕೆಶಿ, ಸಚಿವರು


Click it and Unblock the Notifications











