'ತಿಥಿ' ಖ್ಯಾತಿಯ ಸೆಂಚುರಿ ಗೌಡ ಕೂಡ ಚುನಾವಣಾ ಪ್ರಚಾರ ಮಾಡ್ತಿದ್ದಾರೆ
ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು ಈಗ ತಮ್ಮ ಸಿನಿಮಾ ಕೆಲಸದಿಂದ ದೂರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ಮೆಚ್ಚಿನ ಪಕ್ಷ, ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡುತ್ತಿದ್ದಾರೆ. ಈಗ 'ತಿಥಿ' ಖ್ಯಾತಿಯ ಸೆಂಚುರಿ ಗೌಡ ಅವರು ಕೂಡ ಚುನಾವಣಾ ಪ್ರಚಾರಕ್ಕೆ ಮುಂದಾಗಿರುವುದು ವಿಶೇಷವಾಗಿದೆ.
ದರ್ಶನ್ ಪುಟ್ಟಣ್ಣಯ್ಯ ಅವರ ಪರವಾಗಿ ಸೆಂಚುರಿ ಗೌಡ ಚುನಾವಣಾ ಪ್ರಚಾರ ಮಾಡ್ತಿದ್ದಾರೆ. ಹಸಿರು ಟವೆಲ್ ಹಾಕಿ ಸೆಂಚುರಿ ಗೌಡ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ತಮ್ಮ ಬೆಂಬಲ ನೀಡಿದ್ದಾರೆ. ಅಂದಹಾಗೆ, ದರ್ಶನ್ ಪುಟ್ಟಣ್ಣಯ್ಯ ದಿವಂಗತ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ರನಾಗಿದ್ದು, ಈ ಬಾರಿ ಅವರು ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ಆಗಿದ್ದಾರೆ.

ಮೇಲುಕೋಟೆಯ ವದೆ ಸಮುದ್ರ ಗ್ರಾಮದಲ್ಲಿ ಸೆಂಚುರಿ ಗೌಡ ''ಪುಟ್ಟಣ್ಣಯ್ಯನ ಮಗನನ್ನು ಗೆಲ್ಲಿಸಿ, ಮರಿ ಹುಲಿಯ ಗೆಲುವಿಗೆ ಸಹಕರಿಸಿ'' ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಅಂದಹಾಗೆ, 'ತಿಥಿ' ಸಿನಿಮಾ ಮೂಲಕ ತಮ್ಮ ಇಳಿ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದ ಸೆಂಚುರಿ ಗೌಡ ಸಿಕ್ಕಾಪಟ್ಟೆ ಫೇಮಸ್ ಆದರು. ಆ ಚಿತ್ರದ ನಂತರ 'ತರ್ಲೆ ವಿಲೇಜ್', 'ಹಾಲು ತುಪ್ಪ', 'ಹಳ್ಳಿ ಪಂಚಾಯತಿ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.


Click it and Unblock the Notifications











